ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ; ಜನರಲ್ಲಿ ಜಾಗೃತಿ ಮೂಡಿಸಿ ಎಂದ ಮೋದಿ
ನವದೆಹಲಿ, ಜುಲೈ 08: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ನಾವೆಲ್ಲರೂ ಶಿಸ್ತುಬದ್ಧವಾಗಿ ಹೋರಾಟ ನಡೆಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೂತನ ಸಚಿವರ ಸಭೆಯಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೇಂದ್ರ ಸಚಿವ ಸಂಪುಟ ಪುನಾರಚನೆ ಬಳಿಕ ನವೆದಹಲಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಹೋದ್ಯೋಗಿಗಳಿಗೆ ಕೊವಿಡ್-19 ಸೋಂಕು ನಿಯಂತ್ರಣದ ಬಗ್ಗೆ ಹಲವು ಬಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಜನಸಂದಣಿ ಮಧ್ಯೆ ಮಾಸ್ಕ್ ಧರಿಸದೇ ಜನರು ಕೊರೊನಾವೈರಸ್ ಸೋಂಕಿನ ಬಗ್ಗೆ ಯಾವುದೇ ಭಯ ಭೀತಿ ಇಲ್ಲದೇ ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಕೊವಿಡ್-19 ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡದವರಲ್ಲಿ ಮಹಾಮಾರಿಯ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೊನಾವೈರಸ್ ಬಗ್ಗೆ ಜನರಲ್ಲಿ ಭಯವಿಲ್ಲ:
ಭಾರತದ ಹಲವು ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ಆತಂಕವಿಲ್ಲದೇ ಜನರು ರಾಜಾರೋಷವಾಗಿ ಓಡಾಡುತ್ತಿರುವ ಬಗ್ಗೆ ನಾವು ಫೋಟೋ ಮತ್ತು ವಿಡಿಯೋಗಳ ಮೂಲಕ ನೋಡಿದ್ದೇವೆ. ಇದು ಆಹ್ಲಾದಕರ ಜೀವನವನ್ನು ಸಾಗಿಸುವ ಸಮಯವಲ್ಲ, ಕೊವಿಡ್-19 ಭಯದಲ್ಲಿ ದಿನವನ್ನು ಕಳೆಯುವಂತಾ ಪರಿಸ್ಥಿತಿ ಇಂದಿಗೂ ಹೋಗಿಲ್ಲ. ಕೊರೊನಾವೈರಸ್ ಸೋಂಕಿನ ಬಗ್ಗೆ ನಾವು ಈಗಲೇ ಜಾಗರೂಕತೆಯಿಂದ ನಡೆದುಕೊಳ್ಳಬೇಕಿದೆ.
ಭಯ ಹುಟ್ಟಿಸುವುದು ಸಚಿವರ ಕೆಲಸವಲ್ಲ:
"ಕೇಂದ್ರ ಸಚಿವರಾಗಿ ಇದ್ದುಕೊಂಡು ನಾವು ಕೊರೊನಾವೈರಸ್ ಸೋಂಕಿನ ಬಗ್ಗೆ ಜನರಲ್ಲಿ ಭಯವನ್ನು ಹುಟ್ಟಿಸುವ ಅಗತ್ಯವಿಲ್ಲ. ಅದರ ಬದಲಿಗೆ ಕೊವಿಡ್-19 ಸೋಂಕಿನ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಾಗೃತಿ ಮೂಡಿಸೋಣ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವರ ಸಭೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications