ಕೇಜ್ರಿವಾಲ್ ಗೆ ಜೀವ ಬೆದರಿಕೆ, ಪೊಲೀಸ್ ಭದ್ರತೆ!
ನವದೆಹಲಿ, ಜ.13 : ಆಮ್ ಆದ್ಮಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಬಂದಿದೆ. ಟ್ಯಾಂಕರ್ ಮಾಫಿಯಾದಿಂದ ಸಿಎಂಗೆ ಜೀವ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸೋಮವಾರದಿಂದ ಕೇಜ್ರಿವಾಲ್ ಅವರಿಗೆ ಝೆಡ್ ಮಾದರಿ ಭದ್ರತೆ ನೀಡಲು ಮುಂದಾಗಿದ್ದಾರೆ.
ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಅಧಿಕಾರ ವಹಿಸಿಕೊಂಡ ನಂತರ ಜನರಿಗೆ ಪ್ರತಿದಿನ 700 ಲೀ ನೀರು ಉಚಿತವಾಗಿ ಪೂರೈಕೆ ಮಾಡುವುದಾಗಿ ಘೋಷಿಸಿದ್ದರು. ಇದರಿಂದ ನಷ್ಟ ಅನುಭವಿಸುವ ಟ್ಯಾಂಕರ್ ಮಾಫಿಯಾದ ಜನರು ಸಿಎಂಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ. [ಉಚಿತ ನೀರು ಪೂರೈಕೆಗೆ ಅಸ್ತು]
ಗುಪ್ತಚರ ಇಲಾಖೆ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಝೆಡ್ ಕೆಟಗರಿ ಭದ್ರತೆ ನೀಡಲು ಮುಂದಾಗಿದ್ದಾರೆ. ಸೋಮವಾರದಿಂದಲೇ ಕೇಜ್ರಿವಾಲ್ ಅವರಿಗೆ ಭದ್ರತೆ ದೊರೆಯಲಿದೆ. ಆದರೆ, ಭದ್ರತೆಯನ್ನು ಅವರು ನಿರಾಕರಿಸಿದ್ದು, ಪೊಲೀಸರು ಅವರ ಮನವೊಲಿಸುತ್ತಿದ್ದಾರೆ.
ಸಿಎಂ ಸ್ಥಾನಕ್ಕೆ ಏರಿದ ಬಳಿಕ ಅರವಿಂದ್ ಕೇಜ್ರಿವಾಲ್ ತಮಗೆ ಪೊಲೀಸ್ ಭದ್ರತೆ ಬೇಡ ಎಂದು ಹೇಳುತ್ತಿದ್ದರು. ಉತ್ತರ ಪ್ರದೇಶದ ಆಮ್ ಆದ್ಮಿ ಕಚೇರಿ ಮೇಲೆ ದಾಳಿ ನಡೆದ ನಂತರ ಪೊಲೀಸರು ಅವರಿಗೆ ಭದ್ರತೆ ಪಡೆಯುವಂತೆ ಮನವಿ ಮಾಡಿದ್ದರು. ಆದರೆ, ಅದನ್ನು ಕೇಜ್ರಿವಾಲ್ ನಿರಾಕರಿಸಿದ್ದರು. ಸದ್ಯ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹಿನ್ನಲೆಯಲ್ಲಿ ಝೆಡ್ ಮಾದರಿ ಭದ್ರತೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ. [ಪಕ್ಷದ ಕಚೇರಿ ಮೇಲೆ ದಾಳಿ]
ಅರವಿಂದ್ ಕೇಜ್ರಿವಾಲ್ ಅವರಿಗೆ ಭದ್ರತೆ ನೀಡುವ ಜೊತೆಗೆ ಅವರ ಕುಟುಂಬ ಸದಸ್ಯರಿಗೂ ಭದ್ರತೆ ದೊರೆಯಲಿದೆ. ಝೆಡ್ ಮಾದರಿ ಭದ್ರತೆ ಅನ್ವಯ, ಸಿಎಂ, ಅವರ ನಿವಾಸ, ಅವರ ಕುಟುಂಬದ ಸದಸ್ಯರಿಗೆ ಭದ್ರತೆ ದೊರೆಯಲಿದೆ. ಸಿಎಂ ಸ್ಥಾನಕ್ಕೆ ಏರಿದ ನಂತರ ಕೇಜ್ರಿವಾಲ್ ಭದ್ರತೆ ನಿರಾಕರಿಸಿದ್ದರು. ಆದರೆ, ಈಗ ಅನಿವಾರ್ಯವಾಗಿ ಅವರು ಭದ್ರತೆಯನ್ನು ಪಡೆದುಕೊಳ್ಳಬೇಕಾಗಿದೆ.