ಮಕ್ಕಳು 'ಚೌಕಿದಾರ'ರಾಗಲು ಮೋದಿಗೆ ಮತ ಹಾಕಿ: ಕೇಜ್ರಿವಾಲ್
ನವದೆಹಲಿ, ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿ ಅವರ 'ಮೇಂ ಭೀ ಚೌಕಿದಾರ್' ಆಂದೋಲನದ ವಿರುದ್ಧ ಕಿಡಿಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ನಿಮ್ಮ ಮಕ್ಕಳು ಚೌಕಿದಾರ (ಕಾವಲುಗಾರ) ಆಗಬೇಕೆಂದಿದ್ದರೆ ಪ್ರಧಾನಿಗೆ ಮತ ಹಾಕಿ' ಎಂದು ಹೇಳಿದ್ದಾರೆ.
ಇಡೀ ದೇಶ ಚೌಕಿದಾರ ಆಗಬೇಕೆಂದು ಮೋದಿಜಿ ಬಯಸಿದ್ದಾರೆ. ನಿಮ್ಮ ಮಕ್ಕಳು ಚೌಕಿದಾರರಾಗಬೇಕೆಂದು ನೀವೂ ಬಯಸಿದ್ದರೆ ಮೋದಿಜಿ ಅವರಿಗೆ ಮತ ಹಾಕಿ. ಆದರೆ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಅವರನ್ನು ವೈದ್ಯರು, ಎಂಜಿನಿಯರ್ಗಳು, ವಕೀಲರು ಮಾಡಬೇಕೆಂದು ಬಯಸಿದ್ದರೆ ಪ್ರಾಮಾಣಿಕ ಮತ್ತು ಸುಶಿಕ್ಷಿತ ಎಎಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 'ಮೇಂ ಭೀ ಚೌಕಿದಾರ್' (ನಾನೂ ಕಾವಲುಗಾರ) ಎಂಬ ಆಂದೋಲನಕ್ಕೆ ಚಾಲನೆ ನೀಡಿದ್ದರು. ಇದು ಭಾರಿ ಪ್ರಮಾಣದಲ್ಲಿ ಪ್ರಚಾರ ಪಡೆದುಕೊಂಡಿತ್ತು. ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯ ಹೆಸರಿನ ಮುಂದೆ 'ಚೌಕಿದಾರ್' ವಿಶೇಷಣ ಸೇರಿಸಿಕೊಂಡಿದ್ದರು.

ಇದನ್ನು ಅನುಸರಿಸಿ ಬಿಜೆಪಿಯ ಮುಖಂಡರೆಲ್ಲರೂ ತಮ್ಮ ಹೆಸರಿನ ಮುಂದೆ ಚೌಕಿದಾರ್ ಪದ ಸೇರಿಸಿಕೊಂಡಿದ್ದರು. ಬಳಿಕ ಮೋದಿ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಸರನ್ನು ಬದಲಿಸಿಕೊಂಡಿದ್ದರು.
ತಾವು ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ಚೌಕಿದಾರ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಕರೆದುಕೊಂಡಿದ್ದರು. ಇದನ್ನು ಮೋದಿ ವಿರುದ್ಧದ ಟೀಕಾಸ್ತ್ರವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್, ಚೌಕಿದಾರ್ ಚೋರ್ ಹೈ (ಕಾವಲುಗಾರನೇ ಕಳ್ಳ) ಎಂದು ಲೇವಡಿ ಮಾಡಿತ್ತು.












Click it and Unblock the Notifications