ಪೆಟ್ರೋಲ್ಗೆ ಶೇ.20 ಎಥನಾಲ್ ಮಿಶ್ರಣ, ಕೃಷಿ ತ್ಯಾಜ್ಯಕ್ಕಿನ್ನು ಡಿಮ್ಯಾಂಡ್, ಅನ್ನದಾತನ ಮುಖದಲ್ಲಿನ್ನು ಮಂದಹಾಸ
ಒಂದೆಡೆ ಭಾರತದಲ್ಲಿ ಎಥೆನಾಲ್ ಮಿಶ್ರಿತ ಇಂಧನ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದ್ದು, ಇದರಿಂದ ದೇಶ ಇಂಧನಕ್ಕಾಗಿ ಅನ್ಯ ದೇಶಗಳ ಮೇಲೆ ಅವಲಂಬಿತವಾಗುವುದನ್ನು ಕಡಿಮೆಯಾಗುವತ್ತ ಹೆಜ್ಜೆ ಹಾಕುತ್ತಿದೆ. ಮತ್ತೊಂದೆಡೆ ಕಬ್ಬು, ಜೋಳ, ಮೆಕ್ಕೆಜೋಳ ಸೇರಿ ವಿವಿಧ ಕೃಷಿ ಉತ್ಪನ್ನ ಹಾಗೂ ತ್ಯಾಜ್ಯಗಳಿಂದಲೂ ಎಥನಾಲ್ ಉತ್ಪಾದಿಸಬಹುದು. ಇದರಿಂದ ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಮೌಲ್ಯ ನೀಡುವ ಜೊತೆಗೆ ರೈತರ ಆದಾಯವನ್ನೂ ಹೆಚ್ಚಿಸುವ ನಿರೀಕ್ಷೆಯಿದೆ. ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಬಹುದಾಗಿದ್ದು, ಕೃಷಿ ತ್ಯಾಜ್ಯಕ್ಕೂ ಇನ್ನು ಚಿನ್ನದ ಬೆಲೆ ಬರುವುದರಿಂದ ರೈತರ ಬದುಕು ಹಸನಾಗಲಿದೆ.
ದೇಶವು ಇಂಧನದಲ್ಲಿ ಸ್ವಾವಲಂಬನೆ ಸಾಧಿಸುವ ಜೊತೆಗೆ ಕೃಷಿ ಆಧಾರಿತ ಆರ್ಥಿಕತೆಯನ್ನು ಬಲಪಡಿಸಲು ಈ ಎಥೆನಾಲ್ ಮಿಶ್ರಿತ ಇಂಥನ ಸಹಕರಿಸಲಿದೆ. ಪೆಟ್ರೋಲ್ಗೆ ಶೇ. 20ರಷ್ಟು ಎಥನಾಲ್ ಮಿಶ್ರಣ ಮಾಡಲಿದ್ದು, ರೈತರಿಗೆ ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಲು ಇದು ನೆರವಾಗಲಿದೆ.

ಈ ಎರಡೂ ಉದ್ದೇಶಕ್ಕೆ ಇಂಬು ಕೊಡುವಂತೆ ಈಗಾಗಲೇ ವ್ಯಾಗನ್ಆರ್ ಸಿದ್ಧಪಡಿಸಿರುವ ಫ್ಲೆಕ್ಸ್ ಫ್ಯುಯಲ್ ವಾಹನದ ಮೂಲಕ ಎಥೆನಾಲ್ ಪೆಟ್ರೋಲ್ ಬಳಕೆ ಹೆಚ್ಚಿಸಲು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆ ಮೂಲಕ ವಿದೇಶಿ ಕಚ್ಚಾತೈಲ ಆಮದು ವೆಚ್ಚವನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಇಂಧನ ಬಳಸಲು ಹಾಗೂ ಕೃಷಿ ಆಧಾರಿತ ಆರ್ಥಿಕತೆ ಹೆಚ್ಚಿಸಲು ಅಭಿಯಾನ ರೂಪುಗೊಂಡಿದೆ.
ಕೃಷಿ ತ್ಯಾಜ್ಯಕ್ಕೂ ಇನ್ನೂ ಚಿನ್ನದಂಥ ಬೆಲೆ:
ಅಯ್ಯೋ ಕೃಷಿ ಉತ್ಪನ್ನಗಳನ್ನು ಬಳಸಿದರೆ ಹೊಟ್ಟೆಗೇನು ತಿನ್ನೋದು ಅಂತ ಚಿಂತೆ ಬೇಡ. ಬರೀ ಕೃಷಿ ಉತ್ಪನನ್ನಗಳಿಂದ ಮಾತ್ರವಲ್ಲ, ಕೃಷಿ ತ್ಯಾಜ್ಯದಿಂದಲೂ ಎಥೆನಾಲ್ ಇಂಧನ ಉತ್ಪಾದಿಸಬಹುದಾಗಿದ್ದು, ಇದಕ್ಕೆ ಕಬ್ಬು, ಜೋಳದ ಅವಶೇಶಗಳನ್ನು ಬಳಸಬಹುದು. ಒಲೆ ಉರುವಲಾಗಿಯೋ, ಗೊಬ್ಬರಕ್ಕೋ ಬಳಸುವ ಕೃಷಿ ತ್ಯಾಜ್ಯಕ್ಕೂ ಇನ್ನು ಬೆಲೆ ಹೆಚ್ಚಾಗಲಿದ್ದು, ಇದರಿಂದ ರೈತರು ಆರ್ಥಿಕವಾಗಿಯೂ ಮತ್ತಷ್ಟು ಸಬಲಲಾಗಬಹುದು.
ದೇಶದ ರಾಜಧಾನಿ ದಿಲ್ಲಿ ಸೇರಿ ಹಲವು ನಗರಗಳಲ್ಲಿ ಪರಿಸರ ಮಾಲಿನ್ಯವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತರಹೇವಾರಿ ಕ್ರಮಗಳನ್ನು ಜಾರಿಗೊಳಿಸಿದರೂ ಹಿಡಿತಕ್ಕೆ ಸಿಗುತ್ತಿಲ್ಲ. ಆದರೆ, ಎಥೆನಾಲ್ ಇಂಧನ ಪರಿಸರ ಸ್ನೇಹಿಯಾಗಿದ್ದು ಮಾಲಿನ್ಯ ಸಮಸ್ಯೆಗೂ ಮುಕ್ತಿ ಹಾಡಲು ನೆರವಾಗಲಿದೆ. ಈ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವ ಜೊತೆಗೆ, ಎಥೆನಾಲ್ ಇಂಧನ ದೊರಯುವ ಬಂಕ್ ಎಲ್ಲೆಡೆ ಇರುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ.
ಪೆಟ್ರೋಲ್ ಆಮದು ಆಗುತ್ತೆ ಕಡಿಮೆ:
ಎಥೆನಾಲ್ ಇಂಧನ ಉತ್ಪಾದನೆ ಹಾಗೂ ಬಳಕೆ ಹೆಚ್ಚಾದಷ್ಟು ಪೆಟ್ರೋಲ್ ಆಮದು ಅವಲಂಬನೆ ಕಡಿಮೆಯಾಗುತ್ತದೆ. ಆ ಮೂಲಕ ಇಂಧನ ಸ್ವಾವಲಂಬನೆಯತ್ತ ಭಾರತ ಹೆಜ್ಜೆ ಹಾಕಲಿದ್ದು, ವಾಯುಮಾಲಿನ್ಯ ಮತ್ತು ಕಾರ್ಬನ್ ಉತ್ಪಾದನೆಯೂ ಗಣನೀಯವಾಗಿ ತಗ್ಗಲಿದೆ. ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಬೇಡಿಕೆ ಸೃಷ್ಟಿಯಾಗುವ ಜೊತೆಗೆ ಕೃಷಿ ತ್ಯಾಜ್ಯಕ್ಕೂ ಮೌಲ್ಯ ಹೆಚ್ಚಾಗುವುದರಿಂದ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ.
ಕೃಷಿ ಆಧಾರಿತ ಉದ್ಯಮಗಳು ಹೆಚ್ಚುವುದರಿಂದ, ರೈತರಿಗೆ ಅನಾಯಾಸವಾಗಿ ಆದಾಯದ ಮೂಲವೂ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ದೇಶದ ಈ ಯೋಜನೆ ಸುಸೂತ್ರವಾಗಿ ಜಾರಿಯಾದರೆ, ದೇಶದ ರೈತರ ಮುಖದಲ್ಲಿ ಮಂದಹಾಸ ಮೂಡುವುದರಲ್ಲಿ ಅನುಮಾನವೇ ಇಲ್ಲ.
ಎಥೆನಾಲ್ ಮಿಶ್ರಿತ ಇಂಧನಕ್ಕೆ ಅಬಕಾರಿ ಸುಂಕ ರದ್ದು:
ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಉತ್ತೇಜಿಸಲು ಹಾಗೂ ವಾಹನ ಸವಾರರಿಗೆ ಹೊರೆಯಾಗಿರುವ ಇಂಧನ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಧಿಕ ಪ್ರಮಾಣದ ಎಥೆನಾಲ್ ಬೆರೆಸಿದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. ಈ ಹೊಸ ನಿಯಮವು ದೇಶದ ಇಂಧನ ಮತ್ತು ಸಾರಿಗೆ ವಲಯದಲ್ಲಿ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆ ತರುವ ನಿರೀಕ್ಷೆ ಇದ್ದು, ಯುದ್ಧದ ಕಾರ್ಮೋಡ ಸರಿಯುವ ಜೊತೆಗೆ, ಇಂಧನ ಬೆಲೆಯೂ ಕಿಡಿತಗೊಳ್ಳುವ ಸಾಧ್ಯತೆ ಇದೆ.














Click it and Unblock the Notifications