ಕ್ಯಾನ್ಸಲ್ ಆದ ಟಿಕೆಟ್ ರೀಫಂಡ್ ವೇಳೆ 5 ರೂ. ಕಡಿಮೆ ಪಾವತಿಸಿದ ರೈಲ್ವೆ: 10,000 ಪರಿಹಾರ ನೀಡಲು ಕೋರ್ಟ್ ಆದೇಶ
ರದ್ದಾದ ರೈಲು ಟಿಕೆಟ್ನ ಹಣ ಮರುಪಾವತಿ ಮಾಡುವಾಗ ಪ್ರಯಾಣಿಕನಿಗೆ 5 ರೂ. ಕಡಿಮೆ ಪಾವತಿಸಿತ್ತು. ಆದರೆ ಇದೀಗ ಪ್ರಯಾಣಿಕನಿಗೆ ಆ 5 ರೂ. ಮರುಪಾವತಿ ಮತ್ತು 10,000 ರೂ.ಗಳ ಪರಿಹಾರ ನೀಡುವಂತೆ ಪಂಜಾಬ್ನ ಜಿಲ್ಲಾ ಗ್ರಾಹಕ ಆಯೋಗವು ಭಾರತೀಯ ರೈಲ್ವೆಗೆ ನಿರ್ದೇಶನ ನೀಡಿದೆ.
ಲುಧಿಯಾನದ ಸ್ಟೇಷನ್ ಮಾಸ್ಟರ್ ಮತ್ತು ಫಿರೋಜ್ಪುರ ಕಂಟೋನ್ಮೆಂಟ್ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ವಿರುದ್ಧ ಲುಧಿಯಾನ ನಿವಾಸಿ 41 ವರ್ಷದ ಪ್ರೇಮ್ಜಿತ್ ಸಿಂಗ್ ಸಲ್ಲಿಸಿದ ದೂರಿನ ಮೇರೆಗೆ ಲುಧಿಯಾನ ಜಿಲ್ಲಾ ಗ್ರಾಹಕ ಆಯೋಗವು ಈ ಆದೇಶವನ್ನು ಹೊರಡಿಸಿದೆ.

ಪ್ರೇಮ್ಜಿತ್ ಸಿಂಗ್ ಫೆಬ್ರವರಿ 28, 2023 ರಂದು ಹಿಸಾರ್ ನಿಂದ ಲುಧಿಯಾನಕ್ಕೆ ಎರಡು ಟಿಕೆಟ್ಗಳನ್ನು ಬುಕ್ ಮಾಡಿದ್ದರು. ಈ ಟಿಕೆಟ್ಗಾಗಿ ಲುಧಿಯಾನ ರೈಲು ನಿಲ್ದಾಣದ ಕೌಂಟರ್ನಲ್ಲಿ ತಮ್ಮ ಡೆಬಿಟ್ ಕಾರ್ಡ್ ಮೂಲಕ 330 ರೂ.ಗಳನ್ನು ಪಾವತಿಸಿದ್ದರು. ಪ್ರಯಾಣದ ಒಂದು ದಿನದ ಮೊದಲು, ಮಾರ್ಚ್ 2, 2023 ರಂದು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಟಿಕೆಟ್ಗಳನ್ನು ರದ್ದುಗೊಳಿಸಿದ್ದರು.
ರೈಲ್ವೆಯು ರದ್ದತಿ ಶುಲ್ಕವಾಗಿ 240 ರೂ.ಗಳನ್ನು ಕಡಿತಗೊಳಿಸಿ, 90 ರೂ.ಗಳನ್ನು ರೀಫಂಡ್ ಮಾಡಬೇಕಿತ್ತು. ಆದರೆ ಸಿಂಗ್ ಜನವರಿ 2024 ರಲ್ಲಿ ತಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಪರಿಶೀಲಿಸಿದಾಗ, ಕೇವಲ 85 ರೂ.ಗಳನ್ನು ಮಾತ್ರ ಜಮಾ ಮಾಡಲಾಗಿರುವುದು ಅವರ ಗಮನಕ್ಕೆ ಬಂದಿದೆ. ಅವರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿ, ತಮ್ಮ ಟಿಕೆಟ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ತೋರಿಸಲು ನಿಲ್ದಾಣಕ್ಕೆ ಭೇಟಿ ನೀಡಿದರು. ಟಿಕೆಟ್ ಕೌಂಟರ್ ಸಿಬ್ಬಂದಿಯನ್ನು ಸಂಪರ್ಕಿಸಿದರು. ಆದರೆ ಅವರಿಗೆ 5 ರೂ.ಗಳನ್ನು ಏಕೆ ಕಡಿತ ಮಾಡಲಾಗಿದೆ ಎನ್ನುವುದಕ್ಕೆ ಸ್ಪಷ್ಟ ವಿವರಣೆ ಸಿಗಲಿಲ್ಲ. ಅಂತಿಮವಾಗಿ ಅವರು 5 ರೂ.ಗಳನ್ನು ಮರುಪಾವತಿಸುವಂತೆ ಗ್ರಾಹಕ ಕೋರ್ಟ್ಗೆ ದೂರು ದಾಖಲಿಸಿದರು.
5 ರೂ.ಗಳನ್ನು ಸಿಂಗ್ ಅವರ ಸ್ವಂತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಡಿತಗೊಳಿಸಿದೆಯೇ ಹೊರತು ರೈಲ್ವೆ ಇದಕ್ಕೆ ಜವಾಬ್ದಾರರಲ್ಲ ಎಂದು ರೈಲ್ವೇಸ್ ತನ್ನ ಪ್ರತಿವಾದದಲ್ಲಿ ವಾದಿಸಿತು.
ಆಯೋಗ ಏನು ಹೇಳಿದೆ?
2017 ರ ರೈಲ್ವೆ ಮಂಡಳಿಯ ಅಧಿಸೂಚನೆಯು, ಪಿಒಎಸ್ ಕಾರ್ಡ್ ಯಂತ್ರಗಳ ಮೂಲಕ ಪ್ರಕ್ರಿಯೆಗೊಳಿಸುವಾಗ ಬ್ಯಾಂಕುಗಳು 1,000 ರೂ.ವರೆಗಿನ ಮರುಪಾವತಿಗಳ ಮೇಲೆ 5 ರೂ.ಗಳ "ಮರುಪಾವತಿ ಶುಲ್ಕ" ವಿಧಿಸಲು ಅನುಮತಿಸುತ್ತದೆ.ಹಾಗಾಗಿ ಇಲ್ಲಿ 5 ರೂ.ಗಳನ್ನು ಏಕೆ ಕಡಿತಗೊಳಿಸಲಾಗಿದೆ ಎನ್ನುವುದು ಸ್ಪಷ್ಟ ಎಂದು ಅಧ್ಯಕ್ಷ ಸಂಜೀವ್ ಬಾತ್ರಾ ಮತ್ತು ಸದಸ್ಯೆ ಮೋನಿಕಾ ಭಗತ್ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
ಆದರೆ, ಈ ಶುಲ್ಕವನ್ನು ಪಿಒಎಸ್ ಯಂತ್ರಗಳನ್ನು ಹೊಂದಿರುವ ಕೌಂಟರ್ಗಳಲ್ಲಿ "ಸ್ಪಷ್ಟವಾಗಿ ಪ್ರದರ್ಶಿಸಬೇಕಾಗಿತ್ತು. ಆದರೆ ರೈಲ್ವೆ ಇದನ್ನು ಮಾಡಿಲ್ಲ. ಅಥವಾ ವ್ಯವಹಾರಕ್ಕೂ ಮೊದಲು ಸಿಂಗ್ಗೆ ಅಂತಹ ಯಾವುದೇ ಕಡಿತದ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ.
ಅಲ್ಲದೆ ಈ ಅಧಿಸೂಚನೆಯನ್ನು ರೈಲ್ವೆ ಇಲಾಖೆಯು ವಿಚಾರಣೆಯ ಕೊನೆಯಲ್ಲಿ ನೀಡಿದೆ. ಅಂದರೆ ಒಪಿಗಳು, ನಿಖರವಾಗಿ ಸ್ಟೇಷನ್ ಮಾಸ್ಟರ್, ಲುಧಿಯಾನ ಮತ್ತು ವಿಭಾಗೀಯ ವ್ಯವಸ್ಥಾಪಕರು ರೈಲ್ವೆಯ ಶ್ರೇಣಿಯಲ್ಲಿ ಹಿರಿಯರಾಗಿರುವ ಒಪಿ ರೈಲ್ವೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವಿನ ಅಂತಹ ವ್ಯವಸ್ಥೆಯ ಬಗ್ಗೆ ತಿಳಿದಿರಲಿಲ್ಲ ಎಂದು ತೋರುತ್ತದೆ ಎಂದು ಆಯೋಗ ಹೇಳಿದೆ. ಜೊತೆಗೆ ದೂರನ್ನು ನಿರ್ವಹಿಸುವ ರೈಲ್ವೆ ಅಧಿಕಾರಿಗಳಿಗೆ ಸಹ ಈ ಬ್ಯಾಂಕ್ ಮತ್ತು ರೈಲ್ವೆ ವ್ಯವಸ್ಥೆಯ ಬಗ್ಗೆ ತಿಳಿದಿರಲಿಲ್ಲ ಎಂದು ಆಯೋಗವು ಗಮನಸೆಳೆದಿದೆ.
"ಕಡಿತದ ನಂತರವೂ, ಓಪಿಗಳು ಮರುಪಾವತಿ ಶುಲ್ಕವನ್ನು ವಿಧಿಸಿರುವ ಯಾವುದೇ ಕಾರಣವನ್ನು ದೂರುದಾರರಿಗೆ ತಿಳಿಸಿಲ್ಲ ಎಂದು ಆಯೋಗವು ಹೇಳಿದೆ. ರೈಲ್ವೆಗಳು ಬಾಕಿ ಮೊತ್ತಕ್ಕಿಂತ 5 ರೂ. ಕಡಿಮೆ ಮರುಪಾವತಿ ಮಾಡುವ ಮೂಲಕ "ಅನ್ಯಾಯದ ವ್ಯಾಪಾರ ಪದ್ಧತಿಗಳಲ್ಲಿ ತೊಡಗಿವೆ" ಎಂದು ಆಯೋಗವು ತೀರ್ಮಾನಿಸಿದೆ. ಇದರಿಂದಾಗಿ ಸಿಂಗ್ ಮರುಪಾವತಿ ಮತ್ತು ಪರಿಹಾರ ಪಡೆಯುವುದಕ್ಕೆ ಅರ್ಹರು ಎಂದು ಹೇಳಿದೆ. ದೂರುದಾರರಿಗೆ 5 ರೂ. ರೀಫಂಡ್ ಹಣ ಮತ್ತು 30 ದಿನಗಳಲ್ಲಿ ಸಂಯೋಜಿತ ವೆಚ್ಚದಲ್ಲಿ 10,000 ರೂ.ಗಳನ್ನು ಪಾವತಿಸಲು ಕೋರ್ಟ್ ರೈಲ್ವೆಗೆ ನಿರ್ದೇಶಿಸಿತು. ವಿಫಲವಾದರೆ ಪೂರ್ಣ ಮೊತ್ತವು ಪಾವತಿಸುವವರೆಗೆ ದಿನಕ್ಕೆ 200 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications