ಭಾರತದ ಮುಂದಿನ ಉಪರಾಷ್ಟ್ರಪತಿ ಯಾರು? ಊಹೆಯೂ ಸಾಧ್ಯವಾಗುತ್ತಿಲ್ಲ!
ನವದೆಹಲಿ, ಜುಲೈ 5: ಭಾರತದ ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಆಡಳಿತ ಮತ್ತು ವಿಪಕ್ಷಗಳು ಈಗಾಗಲೇ ಉತ್ತರ ನೀಡಿವೆ. ಎನ್ ಡಿಎ ಯಿಂದ ರಾಮ್ ನಾಥ್ ಕೋವಿಂದ್ ಮತ್ತು ಯುಪಿಎ ಯಿಂದ ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಇದೀಗ ಉಪರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಹೊಸ ಪ್ರಶ್ನೆ ಎದ್ದಿದೆ.
ಆಗಸ್ಟ್ 5ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ
ಬಿಜೆಪಿ ಇನ್ನೂ ಉಪರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸ ಮುಗಿದು, ಸ್ವದೇಶಕ್ಕೆ ವಾಪಸಾಗುತ್ತಿದ್ದಂತೆಯೇ ಈ ಕುರಿತು ಚರ್ಚೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ಉಪರಾಷ್ಟ್ರಪತಿ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆ ಮಾಧ್ಯಮಗಳಿಗೂ ಊಹೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ಬಿಜೆಪಿ ಬಲಪಂಥೀಯ ನಾಯಕರೊಬ್ಬರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಗಳು ನಿಚ್ಛಳವಾಗಿದೆ. ಈ ಮೊದಲು ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವೆಂಕಯ್ಯ ನಾಯ್ಡು ಅಭ್ಯರ್ಥಿಯಲ್ಲ ಎಂದು ಬಿಜೆಪಿಯೇ ಹೇಳಿತ್ತು.
ಒಟ್ಟಿನಲ್ಲಿ ಉಪರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವುದರಿಂದ ಒಬ್ಬ ಸಮರ್ಥ ಅಭ್ಯರ್ಥಿಯನ್ನು ಆರಿಸುವುದು ಬಿಜೆಪಿಗೆ ಅಗತ್ಯವಾಗಿದೆ.
ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಫಲಿತಾಂಶವೂ ಅಂದೇ ಹೊರಬೀಳಲಿದೆ. ಹಾಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಅಧಿಕಾರಾವಧಿ ಆಗಸ್ಟ್ 10 ರಂದು ಮುಕ್ತಾಯವಾಗಲಿದೆ.