ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಕೇಸ್: ಅನ್ಸಲ್ ಸೋದರರಿಗೆ ಜೈಲು ಶಿಕ್ಷೆ
ನವದೆಹಲಿ, ನವೆಂಬರ್ 9: ಉಪಹಾರ್ ಚಿತ್ರಮಂದಿರದಲ್ಲಿ ಅಗ್ನಿ ದುರಂತ ಸಂಭವಿಸಲು ಕಾರಣನಾಗಿದ್ದಕ್ಕೆ ಕಠಿಣ ಶಿಕ್ಷೆ ಪಡೆಯದ ಚಿತ್ರಮಂದಿರ ಮಾಲೀಕರಿಗೆ ಸಾಕ್ಷ್ಯನಾಶ ಮಾಡಿದ ಅಪರಾಧಕ್ಕೆ ಶಿಕ್ಷೆಯಾಗಿದೆ. ಸುಮಾರು 59 ಜನರ ಸಾವಿಗೆ ಕಾರಣರಾದವರಿಗೆ ಕೊನೆಗೂ ದೀರ್ಘಾವಧಿ ಜೈಲು ಶಿಕ್ಷೆಯಾಗಿದೆ.
ಈ ಅಗ್ನಿ ಆಕಸ್ಮಿಕ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ್ದಕ್ಕಾಗಿ ಉದ್ಯಮಿ ಸುಶೀಲ್ ಅನ್ಸಲ್ ಮತ್ತು ಗೋಪಾಲ್ ಅನ್ಸಲ್ ಅವರನ್ನು ದೋಷಿಗಳೆಂದು ಕಳೆದ ತಿಂಗಳೆ ಪ್ರಕಟಿಸಲಾಗಿತ್ತು. ದೆಹಲಿ ನ್ಯಾಯಾಲಯವು ಸೋಮವಾರದಂದು 7 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 2.25 ಕೋಟಿ ರು ದಂಡ ವಿಧಿಸಿದೆ.
ಈ ಮುಂಚೆ ಜೈಲು ಭೀತಿಯಿಂದ ಗೋಪಾಲ್ ಸೋದರರು ಪಾರಾಗಿದ್ದರು. ಗೋಪಾಲ್ ಅನ್ಸಲ್ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಿದ್ದರು.1997ರ ಜೂನ್ 13ರಂದು ಬಾರ್ಡರ್ ಚಿತ್ರ ಪ್ರದರ್ಶನ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 103 ಜನ ಗಾಯಗೊಂಡಿದ್ದರು.

ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ತಮ್ಮ ಅದೇಶದಲ್ಲಿ, "ಪ್ರಕರಣಕ್ಕೆ ಸಂಬಂಧಿಸಿದಂತೆ ತೀರಾ ಉದಾರವಾದ ಶಿಕ್ಷೆ ನೀಡುವುದು ಎಂದರೆ ಸಂತ್ರಸ್ತರ ಹಾಗೂ ನಾಗರಿಕರ ನೋವು ಮತ್ತು ಸಂಕಟಗಳಿಗೆ ಕುರುಡಾದಂತೆ ಆಗುತ್ತದೆ. ಇಂತಹ ಅಪರಾಧಗಳು ಮತ್ತೆ ಘಟಿಸಬಾರದು ಎಂದರೆ ಸಮಾಜದ ಕೂಗಿಗೆ ಪ್ರತಿಕ್ರಿಯಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕಾಗುತ್ತದೆ, ಎಷ್ಟೇ ಮೊತ್ತದ ಪರಿಹಾರ ಕೂಡ ಸಂತ್ರಸ್ತರ ಕುಟುಂಬಸ್ಥರು ಅನುಭವಿಸಿದ ನೋವು, ಸಂಕಟ, ತಲ್ಲಣಗಳನ್ನು ಶಮನಗೊಳಿಸಲಾಗದು. ಆದಾಗ್ಯೂ, ಹಣದ ರೂಪದಲ್ಲಿ ನೀಡುವ ಪರಿಹಾರವು ಸ್ವಲ್ಪ ಮಟ್ಟಿಗೆ ಒತ್ತಾಸೆಯಾಗಬಹುದು," ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?:
ಜೂನ್ 13, 1997 ರಂದು ಉಪಹಾರ್ ಚಿತ್ರಮಂದಿರದಲ್ಲಿ ಸನ್ನಿ ಡಿಯೋಲ್ ಅಭಿನಯದ ಬಾರ್ಡರ್ ಸಿನಿಮಾ ಪ್ರದರ್ಶನವಾಗುತ್ತಿತ್ತು. ಈ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಬೆಂಕಿ ತಗುಲಿದೆ. ಚಿತ್ರಮಂದಿರದಲ್ಲಿ ಅಗ್ನಿ ಅಪಘಾತ ಎದುರಿಸುವ ಯಾವುದೇ ಸುರಕ್ಷಿತ ಸಾಧನ, ವಿಧಾನಗಳಿಲ್ಲದ ಕಾರಣ ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರ ಪೈಕಿ 59 ಮಂದಿ ದುರಂತ ಅಂತ್ಯ ಕಂಡಿದ್ದರು. ಬದುಕುಳಿದವರು ದುರಂತಕ್ಕೆ ಸಾಕ್ಷಿಯಾಗಿ ಗಾಯಗೊಂಡಿದ್ದರು. ತನಿಖೆ ನಡೆಸಿದ್ದ ಸಿಬಿಐ, ಉದ್ಯಮಿಗಳಾದ ಸುಶೀಲ್ ಅನ್ಸಲ್, ಗೋಪಾಲ್ ಅನ್ಸಲ್ ಮತ್ತಿತರ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
ಆದರೆ, ದೋಷರೋಪ ಪಟ್ಟಿ, ತನಿಖಾ ವರದಿ ಎಲ್ಲವೂ ತಿರುಚಿದ್ದರಿಂದ ಅನ್ಸಲ್ ಸೋದರರು ಶಿಕ್ಷೆಯಿಂದ ಪಾರಾಗುತ್ತಾ ಬಂದಿದ್ದರು. ಅನ್ಸಲ್ ಸಹೋದರರು ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸಿ ನಿರ್ಣಾಯಕ ದಾಖಲೆಗಳನ್ನು ನಾಶಪಡಿಸಿರುವುದನ್ನು ನ್ಯಾಯಾಲಯ ಪರಿಶೀಲಿಸಿ, ಶಿಕ್ಷೆ ಪ್ರಕಟಿಸಿದೆ.
ಇದಕ್ಕೂ ಮುನ್ನ ಆರೋಪಿಗಳಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಅವರಿಗೆ ಮೂರು ತಿಂಗಳಲ್ಲಿ ತಲಾ 30 ಕೋಟಿ ರು ಪಾವತಿಸುವಂತೆ ದೆಹಲಿ ನ್ಯಾಯಾಲಯವು ಸೂಚಿಸಿತ್ತು. ಡಿಸೆಂಬರ್ 2008ರಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B ಬಿ (ಕ್ರಿಮಿನಲ್ ಪಿತೂರಿ), 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 201ರ (ಸಾಕ್ಷ್ಯ ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಅಪರಾಧಿಗಳಿಗೆ ಅಂತಿಮವಾಗಿ ಶಿಕ್ಷೆ ವಿಧಿಸಲಾಗಿತ್ತು. ಮರುಪರಿಶೀಲನಾ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಗೋಪಾಲ್ ಅನ್ಸಾಲ್ ಅವರನ್ನು ಒಂದು ವರ್ಷದವರೆಗೆ ಜೈಲಿಗೆ ಕಳುಹಿಸಲು ನಿರ್ಧರಿಸಿತು. ಆದರೆ ವಯಸ್ಸನ್ನು ಪರಿಗಣಿಸಿ ಸುಶೀಲ್ಗೆ ವಿನಾಯಿತಿ ನೀಡಿತ್ತು.
ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದ ಪೀಠವೊಂದು 20 ವರ್ಷ ಮೇಲ್ಪಟ್ಟ ಮೃತರ ಕುಟುಂಬಗಳಿಗೆ ಹೈಕೋರ್ಟ್ ನಿಗದಿಗೊಳಿಸಿದ್ದ ರೂ. 18ಲಕ್ಷ ಪರಿಹಾರವನ್ನು ರೂ. 10ಲಕ್ಷ ಹಾಗೂ 20 ವರ್ಷಕ್ಕಿಂತ ಕೆಳಗಿನವರಿಗೆ ರೂ. 15 ಲಕ್ಷದಿಂದ ರೂ. 7.5 ಲಕ್ಷಕ್ಕೆ ಇಳಿಸಿ ಆದೇಶ ನೀಡಿತ್ತು.
ದೆಹಲಿ ನ್ಯಾಯಾಲಯ ಮೃತರ ಮತ್ತು ಗಾಯಾಳುಗಳ ಸಂಬಂಧಿಕರಿಗೆ 25 ಕೋಟಿ ರು. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ದೆಹಲಿ ನ್ಯಾಯಾಲಯ ಹೇರಿದ ದಂಡದ ಮೊತ್ತ ಹೆಚ್ಚಾಯಿತು ಎಂದು ಅನ್ಸಾಲ್ ಸಹೋದರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications