ಹಿಂದಿ ಹೇರಿಕೆ ಸುಳ್ಳೇ ಸುಳ್ಳು: ತಮಿಳಿನಲ್ಲಿ ನಿರ್ಮಲಾ ಸೀತಾರಾಮನ್ ಟ್ವೀಟ್
ನವದೆಹಲಿ, ಜೂನ್ 03: ಯಾವ ರಾಜ್ಯದ ಮೇಲೂ ಹಿಂದಿಯನ್ನು ಹೇರಲಾಗುತ್ತಿಲ್ಲ. ಭಾರತೀಯ ಭಾಷೆಯನ್ನು ಪೋಷಣೆ ಮಾಡುವ ಉದ್ದೇಶದಿಂದಲೇ 'ಏಕ ಭಾರತ ಶ್ರೇಷ್ಠ ಭಾರತ'ವನ್ನು ಪ್ರಧಾನಿ ಅನುಷ್ಠಾನಕ್ಕೆ ತಂದಿದ್ದಾರೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊಸ ಶಿಕ್ಷಣ ನೀತಿ ಕರಡು ರೂಪಿಸಿದ್ದು, 500 ಪುಟಗಳ ಈ ವರದಿಯಲ್ಲಿ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿಸಲು ಸೂಚಿಸಲಾಗಿದೆ.
ಈಗ ಸಲ್ಲಿಸಿರುವ ಕರಡಿನಲ್ಲಿ ಶಾಲಾಪೂರ್ವ ಶಿಕ್ಷಣದಿಂದ ಹನ್ನೆರಡನೇ ತರಗತಿ ತನಕ ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಕಲಿಸಲು ಶಿಫಾರಸು ಮಾಡಲಾಗಿದೆ. ಈ ಕುರಿತು ದೇಶದಾದ್ಯಂತ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ತಮ್ಮ ಮಾತೃಭಾಷೆ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.
|
ಭಾಷೆಯನ್ನು ಪೋಷಿಸುವ ಉದ್ದೇಶ
"ಸಾರ್ವಜನಿಕ ಅಭಿಪ್ರಾಯವನ್ನು ಕೇಳಿದ ನಂತರವೇ ಕರಡು ನೀತಿಯನ್ನು ಜಾರಿಗೆ ತರಲಾಗುವುದು. ಭಾರತದ ಎಲ್ಲಾ ಭಾಷೆಗಳನ್ನು ಪೋಷಿಸುವ ಉದ್ದೇಶದಿಂದಲೇ ಪ್ರಧಾನಮಂತ್ರಿಗಳು ಏಕ್ ಭಾರತ್ ಶ್ರೇಷ್ಠ ಭಾರತ್ ಅಭಿಯಾನವನ್ನು ಆರಂಭಿಸಿದ್ದಾರೆ. ಪ್ರಾಚೀನ ತಮಿಳು ಭಾಷೆಯನ್ನು ಬೆಳೆಸಲು ಮತ್ತು ಅದಕ್ಕೆ ಗೌರವ ನೀಡಲು ಕೇಂದ್ರ ಸರ್ಕಾರ ಎಂದಿಗೂ ಬೆಂಬಲ ನೀಡುವುದಾಗಿ ಹೇಳಿದೆ"- ನಿರ್ಮಲಾ ಸೀತಾರಾಮನ್
ಹಿಂದುತ್ವವಾದಿಗಳು ಯಾಕೆ ಮಾತನಾಡೋಲ್ಲ?
ಕರ್ನಾಟಕದ ಹಿಂದುವೊಬ್ಬನಿಗೆ ಕನ್ನಡದಲ್ಲಿ ಕೇಂದ್ರ ಸರಕಾರದ ಸೇವೆಗಳು ಸಿಗದಿದ್ದಾಗ, ಕರ್ನಾಟಕದ ಹಿಂದೂ ಯುವಕನೊಬ್ಬ ಕೇಂದ್ರ ಸರಕಾರದ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದಾಗ, ಬ್ಯಾಂಕಿಗೆ ಹೋದಾಗ ಬಡ ಹಿಂದೂ ಒಬ್ಬ ತನ್ನ ಭಾಷೆ ಕನ್ನಡದಲ್ಲಿ ಸೇವೆ ಸಿಗದೆ ಒದ್ದಾಡುವಾಗ ಹಿಂದುತ್ವವಾದಿಗಳು ಯಾಕೆ ಮಾತನಾಡೋಲ್ಲ? ಎಲ್ಲಿ ಅವಿತು ಕುಳಿತಿರುತ್ತಾರೆ ಇವರೆಲ್ಲಾ?- ಅರುಣ್ ಜಾವಗಲ್
ಇಂಗ್ಲಿಷ್ಗಿಂತ ಹಿಂದಿ ಹೆಚ್ಚು ಅಪಾಯಕಾರಿ!
ಇಂಗ್ಲಿಷ್ಗಿಂತ ಹಿಂದಿ ಹೆಚ್ಚು ಅಪಾಯಕಾರಿ . ನಾವು ಎಂದು ತ್ರಿಭಾಷಾಸೂತ್ರವನ್ನು ಒಪ್ಪಿಕೊಂಡವೋ ಅಂದೇ ಹಿಂದಿಯ ಉರುಳಿಗೆ ಸಿಕ್ಕಿದೆವು . ತ್ರಿಭಾಷಾಸೂತ್ರವನ್ನು ತಮಿಳುನಾಡು ಒಪ್ಪಿಲ್ಲ . ಈ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು . ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬುದು ನಮ್ಮಸೂತ್ರವಾಗಬೇಕು . ಹಿಂದಿ ಇದುವರೆಗೆ ಪರೀಕ್ಷೆಯ ವಿಷಯವಾಗಿರಲಿಲ್ಲ , ಈಗ ಆಗಿದೆಯಂತೆ . ಇದು ತಪ್ಪು . ಹಳ್ಳಿಗಳಿಗೂ ಹಿಂದಿಯನ್ನು ವಿಸ್ತರಿಸುವುದು ಅವಿವೇಕ , ಇಂತಹುದು ಯಾವ ದೇಶದಲ್ಲೂ ಇಲ್ಲ- ಅರುಣ್ ಜಾವಗಲ್
|
ಹಿಂದಿ ಹೇರಬೇಡಿ
ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ! ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಬೇಡಿ. ನಾವು ಯಾವತ್ತಾದರೂ ನಿಮ್ಮ ಬಳಿ ಕನ್ನಡ, ತಮಿಳು ಇನ್ನಿತರ ಭಾಷೆ ಕಲಿಯುವಂತೆ ಒತ್ತಡ ಹೇರಿದ್ದೇವೇನು? ಭಾಷೆಯನ್ನು ಕಲಿಯುವುದು, ಮಾತನಾಡುವುದು ಅವರವರ ಆಸಕ್ತಿಗೆ ಬಿಟ್ಟಿದ್ದು- ದರ್ಶನ್ ಗೌಡ












Click it and Unblock the Notifications