ಹೈ-ಕ ಅಭಿವೃದ್ಧಿ ಮಂಡಳಿ ರಚನೆಗೆ ಕೇಂದ್ರ ಅಸ್ತು
ಮಂಗಳವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅನುಮತಿ ದೊರೆತಿದೆ ಎಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೇಂದ್ರದ ನಿರ್ಧಾರದಿಂದ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಯ ಗುಲ್ಬರ್ಗ, ರಾಯಚೂರು, ಬೀದರ್, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಸೌಲಭ್ಯದಡಿ ಸ್ಥಾನಮಾನ ಕಲ್ಪಿಸಲು ಅನುಕೂಲವಾಗಲಿದೆ ಎಂದು ಖರ್ಗೆ ಹೇಳಿದರು.
ಸಚಿವ ಸಂಪುಟ ನಿರ್ಧಾರವನ್ನು ರಾಷ್ಟ್ರಪತಿಗಳಿಗೆ ಕಳಿಸಲಾಗುತ್ತದೆ. ಅವರ ಒಪ್ಪಿಗೆ ದೊರೆತ ನಂತರ ಮಂಡಳಿ ಅಸ್ತಿತ್ವಕ್ಕೆ ಬರದಲಿದೆ. ರಾಜ್ಯಪಾಲರು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ ಎಂದು ಖರ್ಗೆ ವಿವರಣೆ ನೀಡಿದರು.
ಸಂವಿಧಾನದ 371ಜೆ ತಿದ್ದುಪಡಿ ಮಸೂದೆಯನ್ನು ಸಂಸತ್ನಲ್ಲಿ ಅಂಗೀಕರಿಸಿ ಹೈ-ಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಸದ್ಯ ಪ್ರದೇಶದ ಅಭಿವೃದ್ದಿಗೆ ಪ್ರತ್ಯೇಕ ಮಂಡಳಿ ರಚನೆಗೆ ಕೇಂದ್ರ ಅನುಮತಿ ನೀಡಿ ಉತ್ತರ ಕರ್ನಾಟಕ ಭಾಗದ ಜನರಿಗೆ ಮತ್ತೊಂದು ಕೊಡುಗೆ ನೀಡಿದೆ. (ಹೈ-ಕ ಭಾಗದ ಮೀಸಲಾತಿ ಮಾರ್ಗಸೂಚಿ ಸಿದ್ಧ)
ಶಿಕ್ಷಣ ಮತ್ತು ಸರ್ಕಾರಿ ಕೆಲಸಗಳಲ್ಲಿ ಹೈ-ಕಟದ ಜನರಿಗೆ ಪ್ರತ್ಯೇಕ ಮೀಸಲಾತಿ ಸೇರಿದಂತೆ ಆರು ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಮಂಡಳಿ ಸಹಾಯಕವಾಗಲಿದೆ. ಆರು ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಲಿದೆ.