ಎನ್ ಐಎಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ: ರಾಮ್ ಮಾಧವ್
ನವದೆಹಲಿ, ಜುಲೈ 5: ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಸಂದಾಯ ಆಗುತ್ತಿರುವ ಕುರಿತಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಕಾರ್ಯಚಟುವಟಿಕೆಯಲ್ಲಿ ಯಾರೂ ಮೂಗುತೂರಿಸಬಾರದು, ಎನ್ ಐಎಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಬಿಜೆಪಿ ಮುಖಂಡ ರಾಮ್ ಮಾಧವ್ ಹೇಳಿದರು.
ಕಾಶ್ಮೀರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಶಾಂತಿಯ ಕುರಿತು ಅವರು ನವದೆಹಲಿಯಲ್ಲಿಂದು (ಜು.5) ಮಾತನಾಡುತ್ತಿದ್ದರು.
ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವುದಕ್ಕೆ ಎಲ್ಲಿಂದ ಹಣ ಸಂದಾಯವಾಗುತ್ತಿದೆ ಎಂಬ ಬಗ್ಗೆ ಈಗಾಗಲೇ ಎನ್ ಐಎ ತನಿಖೆ ನಡೆಸುತ್ತಿದ್ದು, ಹುರಿಯತ್ ಮುಖ್ಯಸ್ಥರ ಕೈವಾಡವೂ ಇದರಲ್ಲಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಎನ್ ಐಎ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದು, ಅದರ ಕಾರ್ಯಚಟುವಟಿಕೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳಾಗಲೀ, ಪ್ರಭಾವಿ ವ್ಯಕ್ತಿಗಳಾಗಲಿ ಮೂಗುತೂರಿಸಬಾರದು ಎಂದು ಅವರು ತಿಳಿಸಿದರು.
ಕಣಿವೆಯಲ್ಲಿ ಸೃಷ್ಟಿಯಾಗಿರುವ ಪ್ರಕ್ಷುಬ್ದ ವಾತಾವರಣಕ್ಕೆ ಕಾರಣ ಹುಡುಕಲಾಗುತ್ತಿದೆ. 28 ಕ್ಕೂ ಹೆಚ್ಚು ವಾಟ್ಸ್ ಆಪ್ ಗ್ರೂಪುಗಳು ಕಣಿವೆಯ ಶಾಂತಿ ಕದಡುವುದಕ್ಕಾಗಿ ಕಲ್ಲು ತೂರಾಟದಂಥ ಘಟನೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಎನ್ ಐಎ ಅಭಿಪ್ರಾಯ ಪಟ್ಟಿದೆ ಎಂದು ಸಹ ರಾಮ್ ಮಾಧವ್ ಹೇಳಿದರು.
ಆರರಿಂದ ಏಳು ಸಾವಿರ ಯುವಕರು ಕಾಶ್ಮೀರದಲ್ಲಿ ಶಾಮತಿ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆಂದು ಅಂದಾಜಿಸಲಾಗಿದ್ದು, ಈ ಕುರಿತು ಎನ್ ಐಎ ತನಿಖೆ ನಡೆಸುತ್ತಿದೆ.