ಸಂಸ್ಕೃತವೆಲ್ಲೋ ಜರ್ಮನಿಯೆಲ್ಲೋ, ಏನಿದು ಸಂಬಂಧ?
ನವದೆಹಲಿ, ನ. 17: ಎಲ್ಲ ಕೇಂದ್ರ ವಿದ್ಯಾಲಯ ಶಾಲೆಗಳಲ್ಲಿ ಜರ್ಮನ್ ಭಾಷೆ ಬದಲು ಸಂಸ್ಕೃತವನ್ನು ತೃತೀಯ ವಿಷಯವಾಗಿ ಬೋಧಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊರಡಿಸಿರುವ ಆದೇಶ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ದೇಶಾದ್ಯಂತ ಸುಮಾರು 500 ಕೇಂದ್ರ ವಿದ್ಯಾಲಯಗಳಿದ್ದು, 6ರಿಂದ 8ನೇ ತರಗತಿಗಳ ಸುಮಾರು 70 ಸಾವಿರ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮಧ್ಯೆ ವಿಷಯ ಬದಲಾಯಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಆದರೆ, ಇಂತಹ ಆದೇಶ ಹೊರಡಿಸಲು ಯುಪಿಎ ಸರ್ಕಾರದ ಸಂದರ್ಭದಲ್ಲಿ ನಡೆದ ಒಪ್ಪಂದವೇ ಕಾರಣ ಎಂದು ಸ್ಮೃತಿ ಇರಾನಿ ಸ್ಪಷ್ಟಪಡಿಸಿದ್ದಾರೆ. [ಬಿಸಿಯೂಟದ ಜತೆ ಮಕ್ಕಳಿಗೆ ತಣ್ಣನೆಯ ಮಜ್ಜಿಗೆ]
ಸಾಹಿತ್ಯ ಮತ್ತು ಇತಿಹಾಸದಲ್ಲಿ ಸಂಸ್ಕೃತ ಹಾಗೂ ಜರ್ಮನ್ ಭಾಷೆಗಳ ಮಧ್ಯೆ ಇರುವ ಸಂಪರ್ಕದ ಕುರಿತು ಇನ್ನೂ ಗೊಂದಲವಿದ್ದು, ಚರ್ಚೆ ನಡೆಯುತ್ತಿದೆ.
ಮರೆತುಹೋದ ಸಂಬಂಧ: ವಿದ್ಯಾರ್ಥಿಗಳು ಹಾಗೂ ಪಾಲಕರು ವಿದೇಶಿ ಭಾಷೆ ಕಲಿಯುವ ಕುರಿತು ಹೆಮ್ಮೆ ಹೊಂದಿದ್ದಾರೆ. ಆದರೆ, ಜರ್ಮನ್ ಭಾಷೆ ಹಾಗೂ ಸಂಸ್ಕೃತದ ಮಧ್ಯೆ 4,500 ವರ್ಷಗಳ ಹಿಂದೆ ಸಿಲ್ಕ್ ರೂಟ್ ಆರಂಭವಾದ ಸಮಯದಿಂದಲೂ ಸಂಬಂಧವಿರುವುದು ಗೊತ್ತೇ?
ಇಂಗ್ಲಿಷ್ ಭಾಷೆಯ ಮೂಲ ಗ್ರೀಕ್ ಹಾಗೂ ಲ್ಯಾಟಿನ್ ಎಂದು ಅನೇಕರು ನಂಬುತ್ತಾರೆ. ಆದರೆ, ಭಾಷಾ ಶಾಸ್ತ್ರಜ್ಞರ ಪ್ರಕಾರ ಸಂಸ್ಕೃತವೇ ಇಂಡೋ-ಯುರೋಪ್ನ ಎಲ್ಲ ಭಾಷೆಗಳ ತಾಯಿ. ಆದರೆ, ಅಜ್ಞಾನ, ಮತಾಂಧತೆ, ಬೌದ್ಧಿಕ ವರ್ಣಭೇದ ಅಥವಾ ಈ ಎಲ್ಲ ಕಾರಣಗಳಿಂದ ಸಂಸ್ಕೃತ ಇಂದು ನಿರ್ಲಕ್ಷ್ಯಿಸಲ್ಪಟ್ಟಿದೆ.
ಬೆಳಕಿನ ಮಾರ್ಗ: ಭಾರತ ಹಾಗೂ ಜರ್ಮನಿ ಮಧ್ಯೆ ಆರಂಭವಾದ ಸಿಲ್ಕ್ ರೂಟ್ ಸಾಂಬಾರ ಪದಾರ್ಥ ಹಾಗೂ ಜವಳಿ ವ್ಯಾಪರಕ್ಕೆ ಮಾತ್ರ ಆಗಿರಲಿಲ್ಲ. ಈ ಮೂಲಕ ಯೂರೋಪ್ ಹಾಗೂ ಏಶಿಯಾ ಮಧ್ಯೆ ಧರ್ಮ, ಸಂಸ್ಕೃತಿ ಹಾಗೂ ಭಾಷೆ ಮಧ್ಯೆ ಸಾಂಸ್ಕೃತಿಕ ಸಂಬಂಧವೂ ಏರ್ಪಟ್ಟಿದೆ.
ಸಂಸ್ಕೃತ ಮತ್ತು ಯೂರೋಪಿಯನ್ ಭಾಷೆಗಳಲ್ಲಿ ಶಬ್ದ ಹಾಗೂ ನುಡಿಗಟ್ಟುಗಳು ಹೆಚ್ಚಿನ ಪ್ರಮಾಣದಲ್ಲಿ ಒಂದೇ ರೀತಿಯಾಗಿರುವುದಕ್ಕೆ ಇದೇ ಕಾರಣ.
ಸ್ಮೃತಿ ಇರಾನಿ ಆದೇಶ ಎಷ್ಟು ಸರಿ?: ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೋಸ್ಕರ ತಯಾರಿ ನಡೆಸುತ್ತಿದ್ದಾಗ ಶೈಕ್ಷಣಿಕ ವರ್ಷದ ಮಧ್ಯೆ ಜರ್ಮನ್ ಭಾಷೆಯನ್ನು ವಾಪಸ್ ಪಡೆದಿರುವುದು ವಿಚಿತ್ರ ನಡೆ ಎಂಬುದರಲ್ಲಿ ಅನುಮಾನವಿಲ್ಲ. ಈಗ ಕೇವಲ ಮೂರು ತಿಂಗಳುಗಳಲ್ಲಿ ಸಂಸ್ಕೃತ ಕಲಿತು ಪರೀಕ್ಷೆಗೆ ತಯಾರಿ ನಡೆಸಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಈ ಸೂಚನೆ ಬಂದಿದ್ದರೆ ಅಷ್ಟು ಸಮಸ್ಯೆಯಾಗುತ್ತಿರಲಿಲ್ಲ.
ಈ ಕುರಿತು ವರದಿ ಮಾಡಿರುವ ಇಕಾನಾಮಿಕ್ ಟೈಮ್ಸ್ ಪತ್ರಿಕೆ, ಕೇಂದ್ರ ವಿದ್ಯಾಲಯ ಶಾಲೆ ಹಾಗೂ ಗೋಥೆ ಇನ್ಸ್ಟಿಟ್ಯೂಟ್ ಆಫ್ ಮ್ಯಾಕ್ಸ್ ಮುಲ್ಲರ್ ಭವನದ ಮಧ್ಯೆ 2011ರಲ್ಲಿ ನಡೆದ ಒಪ್ಪಂದದ ಪ್ರಕಾರ ಕೇವಲ ಭಾರತೀಯ ಭಾಷೆಯನ್ನು ಮಾತ್ರ ತೃತೀಯ ವಿಷಯವಾಗಿ ಬೋಧಿಸಬೇಕಾಗಿದೆ. ಈ ಒಪ್ಪಂದ ರಾಷ್ಟ್ರೀಯ ಶೈಕ್ಷಣಿಕ ನೀತಿ ಹಾಗೂ ರಾಷ್ಟ್ರೀಯ ಪಠ್ಯಕ್ರಮ ರಚನೆ ಪ್ರಕ್ರಿಯೆಗೆ ವಿರುದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವೆ ಸ್ಮೃತಿ ಇರಾನಿ, "ಒಪ್ಪಂದ ಹೀಗಿದ್ದಾಗ ನಾನು ಹೇಗೆ ವಿದೇಶಿ ಭಾಷೆಯೊಂದನ್ನು ಶಾಲೆಯಲ್ಲಿ ತೃತೀಯ ವಿಷಯವಾಗಿ ಬೋಧಿಸಲು ಸೂಚಿಸಲಿ" ಎಂದು ಪ್ರಶ್ನಿಸಿದ್ದಾರೆ.