ಹತ್ತು ವರ್ಷ ಹಿಂದಿನ ಪ್ರಕರಣ ರೀಓಪನ್: ಸಂಕಷ್ಟದಲ್ಲಿ ಯಡಿಯೂರಪ್ಪ
ನವದೆಹಲಿ, ಜನವರಿ 07: ಹತ್ತು ವರ್ಷದ ಹಳೆಯ ಪ್ರಕರಣಕ್ಕೆ ಮರುಜೀವ ದೊರೆತಿದ್ದು ಸಿಎಂ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರಿಗೂ ಸಂಕಷ್ಟ ಎದುರಾಗಿದೆ.
2010 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಮಿತ್ರ ಡಿ.ಕೆ.ಶಿವಕುಮಾರ್ ಅವರಿಗಾಗಿ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆಂದು ಆರೋಪಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಇಂದು ವಿಚಾರಣೆ ನಡೆಯಲಿದೆ.
ಬೆನ್ನಿಗಾನಹಳ್ಳಿಯಲ್ಲಿ 4 ಎಕರೆ 20 ಜಮೀನನ್ನು ಹತ್ತು ವರ್ಷದ ಹಿಂದೆ ಯಡಿಯೂರಪ್ಪ ಡಿನೋಟಿಫಿಕೇಶನ್ ಮಾಡಿದ್ದರು. ಈ ಜಮೀನನ್ನು ಡಿ.ಕೆ.ಶಿವಕುಮಾರ್ ಖರೀದಿಸಿದ್ದರು. ಈ ಪ್ರಕರಣ ಈಗಾಗಲೇ ಹೈಕೋರ್ಟ್ನಲ್ಲಿ ವಿಚಾರಣೆಗೆ ಒಳಪಟ್ಟು ಅರ್ಜಿಯನ್ನು ವಜಾಗೊಳಿಸಲಾಗಿದೆ. ಆದರೆ ಈಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.

ಪ್ರಕರಣದ ಮುಖ್ಯ ಅರ್ಜೀದಾರರಾಗಿದ್ದ ಕಬ್ಬಾಳೆಗೌಡ ಮತ್ತು ಟಿ.ಅಬ್ರಹಾಂ ಅವರು ಅರ್ಜಿಯನ್ನು ಹಿಂಪಡೆದಿದ್ದರು. ಆದರೆ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ ಅವರು ಪ್ರಕರಣವನ್ನು ಮುನ್ನಡೆಸಲು ಅನುಮತಿ ಕೋರಿದ್ದರಿಂದ ಅವರಿಗೆ ಅನುಮತಿ ನೀಡಲಾಗಿದೆ.
1962 ರಲ್ಲಿ ಬಿ.ಕೆ.ಶ್ರೀನಿವಾಸ್ ಅವರು ಕೊಂಡಿದ್ದ 5.11 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2010 ರ ಮೇ 13 ರಂದು ಯಡಿಯೂರಪ್ಪ ಅವರು 4.5 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದರು, ಡಿನೋಟಿಫೈ ಆದ ಈ ಜಮೀನನ್ನು ಡಿ.ಕೆ.ಶಿವಕುಮಾರ್ ಖರೀದಿಸಿದ್ದರು. ಡಿ.ಕೆ.ಶಿವಕುಮಾರ್ ಅವರಿಗೆ ಅನುಕೂಲ ಮಾಡಿಕೊಡಲೆಂದೇ ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪ ಇದೆ.












Click it and Unblock the Notifications