ಜಮ್ಮು ಕಾಶ್ಮೀರ- ಲಡಾಖ್: 43 ಮಹತ್ವದ ಸೇತುವೆಗಳ ಉದ್ಘಾಟನೆ ಮುಂದೂಡಿಕೆ
ನವದೆಹಲಿ, ಸೆಪ್ಟೆಂಬರ್ 24: ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನ ಹಿನ್ನೆಲೆಯಲ್ಲಿ 43 ಸೇತುವೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಮಹತ್ವದ 17 ಹೊಸ ಸೇತುವೆಗಳು ಸೇರಿದಂತೆ ಸೇರಿದಂತೆ ಏಳು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 43 ಸೇತುವೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮುಂದೂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ 17 ಹೊಸ ಸೇತುವೆ ಸೇರಿದಂತೆ 7 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 43 ಸೇತುವೆಗಳನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ನಿರ್ಮಿಸಿದೆ.

ಈ 43 ಹೊಸ ಸೇತುವೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದರು. ಆದರೆ, ಕೇಂದ್ರ ಸಚಿವ ಸುರೇಶ್ ಅಂಗಡಿಯವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸುವ ಸಲುವಾಗಿ ಕಾರ್ಯಕ್ರಮವನ್ನುಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ 6 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜುಲೈ 9 ಲೋಕಾರ್ಪಣೆ ಮಾಡಿದ್ದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ರಕ್ಷಣಾ ಸಚಿವರು ಸೇತುವೆ ಉದ್ಘಾಟನೆ ನಡೆಸಿದರು. ಅಕ್ನುರ್- ಪಲನ್ವಾಲಾ ರಸ್ತೆಯ ಸಮೀಪದ ನಾಲ್ಕು ಸೇತುವೆಗಳು ಮತ್ತು ಕತ್ವಾದ ತರನ್ಹ ನಲ್ಹ ಪ್ರದೇಶದಲ್ಲಿ ಎರಡು ಸೇತುವೆಗಳನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿತ್ತು.
ಗಡಿ ರಸ್ತೆಗಳ ಸೇತುವೆ ನಿರ್ಮಾಣ ಕಾರ್ಯವನ್ನು ಬಿಆರ್ಒ(ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ) ಮಾಡಿದೆ. ಒಟ್ಟು 43 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಜೊತೆಗೆ ಗಡಿ ಗಳ ಆಸುಪಾಸಿನಲ್ಲಿರುವ ಹಿಂದುಳಿದಿರುವ ಗ್ರಾಮಗಳ ಅಭಿವೃದ್ಧಿ ಯತ್ತಲೂ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತದೆ ಎಂದು ತಿಳಿಸಿದ್ದರು.












Click it and Unblock the Notifications