
SC/STಗಳಿಗೆ ಬಡ್ತಿಯಲ್ಲಿ ಮೀಸಲಾತಿ: ಮಾನದಂಡ ರೂಪಿಸಲು ನಿರಾಕರಿಸಿದ ಸುಪ್ರೀಂ
ನವದೆಹಲಿ, ಜನವರಿ 28: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿಯಲ್ಲಿ ಮೀಸಲಾತಿ ನೀಡಲು ಮಾನದಂಡ ರೂಪಿಸಲು ಸುಪ್ರೀಂ ನಿರಾಕರಿಸಿದೆ.
ಈ ಸಂಬಂಧ ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು, ಎಸ್ಸಿ ಮತ್ತು ಎಸ್ಟಿಗಳ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಡೇಟಾವನ್ನು ಸಂಗ್ರಹಿಸಲು ಆಯಾ ರಾಜ್ಯಗಳಿಗೆ ಅವಕಾಶವಿದೆ.
ಸುಪ್ರೀಂಕೋರ್ಟ್ ಇದಕ್ಕೆ ಮಾನದಂಡವನ್ನು ರೂಪಿಸಲು ಸಾಧ್ಯವಿಲ್ಲ. ಈ ಕಾರ್ಯವನ್ನು ರಾಜ್ಯ ಸರ್ಕಾರಗಳು ಮಾಡಬೇಕೆಂದು ತಿಳಿಸಿದೆ.
ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳಾದರೂ ಎಸ್ಸಿ ಮತ್ತು ಎಸ್ಟಿಗೆ ಸೇರಿದವರನ್ನು ಹಿಂದುಳಿದ ವರ್ಗಗಳ ಅರ್ಹತೆಯ ಮಟ್ಟಕ್ಕೆ ತರಲಾಗಿಲ್ಲ ಎಂಬುದು ಜೀವ ಮಾನದ ಸತ್ಯ ಎಂದು ಕೇಂದ್ರ ಸರ್ಕಾರವು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಬಗ್ಗೆ 2021ರ ಅಕ್ಟೋಬರ್ 26 ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಮಧ್ಯಂತರ ತಡೆಯಾಜ್ಞೆ ನೀಡಿತ್ತು: ರಾಜ್ಯ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ವಿವಾದ ಇತ್ಯರ್ಥಪಡಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಬಡ್ತಿ ಮೀಸಲಾತಿ ಕುರಿತ ನೂತನ ಕಾಯ್ದೆಗೆ ಆರಂಭದಲ್ಲೇ ಕಾನೂನು ತೊಡಕು ಎದುರಾಗಿತ್ತು.
ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ.ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ, ಈ ತಡೆಯಾಜ್ಞೆ ನೀಡಿತ್ತು.
ಬಡ್ತಿ ಮೀಸಲಾತಿ ಕಾಯ್ದೆ ಪ್ರಶ್ನಿಸಿ ಅರ್ಜಿದಾರರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಂತಿಮ ಹಂತದಲ್ಲಿದೆ. ಆದರೆ, ಆ ಕುರಿತ ತೀರ್ಪು ಹೊರಬರುವ ಮುನ್ನವೇ ರಾಜ್ಯ ಸರ್ಕಾರ ನೂತನ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಏನಿದು ಪ್ರಕರಣ?
ಮೀಸಲಾತಿ ಅಡಿಯಲ್ಲಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 2002ರಲ್ಲಿ 'ಸರ್ಕಾರಿ ನೌಕರರ ಮೀಸಲಾತಿ ಆಧಾರಿತ ಬಡ್ತಿ ನೌಕರರ ಜೇಷ್ಠತೆ ನಿರ್ಣಯ ಕಾಯ್ದೆ' ರೂಪಿಸಿತ್ತು. ಈ ಕಾಯ್ದೆಯನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2006ರಲ್ಲಿ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ಗಳಿಗೆ ಮರಳಿಸಿ, ಮರು ವಿಚಾರಣೆ ನಡೆಸುವಂತೆ ಸೂಚಿಸಿತ್ತು.
ಅದರಂತೆ, ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಜೇಷ್ಠತಾ ನಿರ್ಣಯವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಬಿ.ಕೆ.ಪವಿತ್ರಾ ಎಂಬುವರು 2006ರಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು.
ಬಡ್ತಿ ಮೀಸಲಾತಿ ನಿಯಮ ಜಾರಿಗೊಳಿಸುವುದರಿಂದ ಸಾಮಾನ್ಯ ವರ್ಗದವರ ಜೇಷ್ಠತೆಗೆ ಅಡ್ಡಿಯುಂಟಾಗುತ್ತದೆ. ಸಾಮಾನ್ಯ ವರ್ಗದವರು ತಮ್ಮ 56 ನೇ ವಯಸ್ಸಿಗೆ 3ನೇ ಹಂತದ ಜೇಷ್ಠತೆ ಪಡೆದರೆ, ಬಡ್ತಿ ಮೀಸಲಾತಿ ಹೊಂದಿದವರು 45 ನೇ ವಯಸ್ಸಿಗೇ ಮೂರು ಇಲ್ಲವೇ ನಾಲ್ಕನೇ ಹಂತದ ಪದೋನ್ನತಿ ಪಡೆಯುತ್ತಾರೆ. ಇದು ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಲಾಗಿತ್ತು.
ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ 2017ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ 2002ರಲ್ಲಿ ರೂಪಿಸಿದ್ದ ಜೇಷ್ಠತೆ ನಿರ್ಣಯ ಕಾಯ್ದೆಯನ್ನು ರದ್ದುಗೊಳಿಸಿತ್ತು. ಜೊತೆಗೆ, ಮೂರು ತಿಂಗಳಲ್ಲಿ ಹೊಸ ಕಾಯ್ದೆ ರೂಪಿಸುವಂತೆ ಸೂಚಿಸಿತ್ತು. ಹೊಸ ನಿಯಮ ಜಾರಿಗೊಳಿಸುವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಇದರನ್ವಯ ರಾಜ್ಯ ಸರ್ಕಾರ ಕೂಡ ಮುಚ್ಚಳಿಕೆ ಬರೆದುಕೊಟ್ಟಿತ್ತು.
ಆ ನಂತರ ಸಿದ್ದರಾಮಯ್ಯ ಅವಧಿಯಲ್ಲಿ ಬಡ್ತಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದು ರಾಷ್ಟ್ರಪತಿಗಳ ಅಂಕಿತ ಪಡೆಯಲಾಗಿತ್ತು. ಆದರೆ ಜಾರಿ ಮಾಡಿರಲಿಲ್ಲ. ಹಾಲಿ ಸರ್ಕಾರ ತಿದ್ದುಪಡಿ ಕಾಯ್ದೆಗೆ ಸಂಪುಟ ಸಭೆಯ ಅನುಮೋದನೆ ಪಡೆದು ಫೆ.27ರಂದು ಜಾರಿಗೊಳಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಅಡ್ಡಿಯಾಗುವುದಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.
.