ರಾಹುಲ್ ಗಾಂಧಿ ಮತ್ತೆ ಮುಖಭಂಗ: ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ, ಏಪ್ರಿಲ್ 23: ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಅಪರಾಧಿ' ಎಂದು ಕರೆದ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಏಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ಈ ಕುರಿತು ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ತೃಪ್ತಿಕರವಾಗಿ ಪ್ರತಿಕ್ರಿಯೆ ನೀಡಿಲ್ಲದ ಕಾರಣ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಚೌಕಿದಾರ್ ಚೋರ್ ಹೈ ಹೇಳಿಕೆ: ಸುಪ್ರೀಂಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿಷಾದ
ಮುಂದಿನ ವಿಚಾರಣೆಯನ್ನು ಏಪ್ರಿಲ್ 30 ರಂದು ನಡೆಯಲಿದೆ. ಇದೇ ದಿನ ರಫೇಲ್ ಡೀಲ್ ಗೆ ಸಂಬಂಧಿಸಿದ, ಮರುಪರಿಶಿಲನಾ ಅರ್ಜಿಯ ವಿಚಾರಣೆಯನ್ನೂ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಏನಿದು ವಿವಾದಾತ್ಮಕ ಹೇಳಿಕೆ
"ರಫೇಲ್ ವಿವಾದದ ಕುರಿತ ದಾಖಲೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪಿನಿಂದ ಚೌಕಿದಾರ ಚೋರ ಎಂಬುದು ಸಾಬೀತಾಗಿದೆ. ಇದರಿಂದಾಗಿ ಮತ್ತಷ್ಟು ಭ್ರಷ್ಟಾಚಾರದ ಪ್ರಕರಣಗಳು ಹೊರಬರಲಿವೆ. ಇದು ನ್ಯಾಯದ ಗೆಲುವು. ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ಅತ್ಯಂತ ಪ್ರಮುಖ ದಿನ" ಎಂದು ರಾಹುಲ್ ಗಾಂಧಿ ಹೇಳಿದ್ದರು.
ಮೋದಿ ಭ್ರಷ್ಟಾಚಾರ ಮಾಡಿದ್ದಾರೆ
"ನೀವು ಭ್ರಷ್ಟಾಚಾರ ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾನು ಈಗಲೂ ಮೋದಿಯವರಿಗೆ ಸವಾಲೆಸೆಯುತ್ತೇನೆ. ನನ್ನೊಂದಿಗೆ ಚರ್ಚೆಗೆ ಬನ್ನಿ. ಪ್ರೀತಿಯಿಂದ ಚರ್ಚಿಸೋಣ. ಈ ದೇಶದ ಜನರಿಗೆ ರಫೇಲ್ ಬಗ್ಗೆ ತಿಳಿಯಬೇಕಿದೆ. ಭ್ರಷ್ಟಾಚಾರದ ಬಗ್ಗೆ ತಿಳಿಯಬೇಕಿದೆ. ಅಪನಗದೀಕರಣದ ಬಗ್ಗೆ ತಿಳಿಯಬೇಕಿದೆ" ಎಂದು ರಾಹುಲ್ ಗಾಂಧಿ ಸವಾಲೆಸೆದಿದ್ದರು.
ರಫೇಲ್ ತೀರ್ಪು: ಮತ್ತೊಮ್ಮೆ 'ಚೌಕಿದಾರ್ ಚೋರ್' ಎಂದ ರಾಹುಲ್ ಗಾಂಧಿ
ಸಮಜಾಯಿಷಿ ನೀಡಿದ್ದ ರಾಹುಲ್
ರಫೇಲ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯಲ್ಲಿ ಸುಪ್ರೀಂಕೋರ್ಟ್ ಹೆಸರನ್ನು ಉಲ್ಲೇಖಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಹೇಳಿಕೆಯು ಪ್ರಚಾರದ ಆವೇಶದಲ್ಲಿ ಹೊರಬಂದಿರುವಂಥದ್ದು. ಇದನ್ನು ವಿರೋಧ ಪಕ್ಷದವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿ, ರಾಹುಲ್ ಗಾಂಧಿ ಸ್ಪಷ್ಟೀಕರಣ ನೀಡಿದ್ದರು.
ಏ.10 ಸುಪ್ರೀಂ ಆದೇಶ
ರಫೇಲ್ ಗೆ ಸಂಬಂಧಿಸಿದ 'ಕಳುವಾದ' ದಾಖಲೆಗಳನ್ನು ಪರಾಮರ್ಶೆಗಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಏ.10 ರಂದು ತೀರ್ಪು ನೀಡಿತ್ತು. ಇದರಿಂದ ಸೋರಿಕೆಯಾದ ದಾಖಲೆಗಳನ್ನು ತೀರ್ಪು ಮರುಪರಿಶೀಲನೆಗೆ ಬಳಸಿಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.