ಸಿಬಿಐ ಕಿತ್ತಾಟ: ಉದ್ಯಮಿ ಸತೀಶ್ ಬಾಬುಗೆ ರಕ್ಷಣೆ ನೀಡಲು ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ, ಅಕ್ಟೋಬರ್ 29: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ವಿರುದ್ಧದ ಲಂಚ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಉದ್ಯಮಿ ಸತೀಶ್ ಬಾಬು ಸನಾ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಪೊಲೀಸ್ ರಕ್ಷಣೆ ಒದಗಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಇದೇ ವೇಳೆ, ತನಿಖೆಗೆ ಒಳಪಡುವಂತೆ ಸಿಬಿಐ ನೀಡಿರುವ ನೋಟಿಸ್ಗೆ ತಡೆ ನೀಡಬೇಕೆಂದು ಕೋರಿ ಸತೀಶ್ ಬಾಬು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಿಬಿಐ ಸಂಸ್ಥೆಯ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧದ ಲಂಚ ಪ್ರಕರಣ ಆರೋಪದಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಬಾಬು ಅವರ ಹೆಸರಿದೆ.

ಉದ್ಯಮಿ ಮೊಯಿನ್ ಖುರೇಷಿ ಅವರ ವಿರುದ್ಧದ ಪ್ರಕರಣವನ್ನು ಕೈಬಿಡಲು ಮತ್ತೊಬ್ಬ ಉದ್ಯಮಿ ಮೂಲಕ ಅಸ್ಥಾನಾ ಅವರಿಗೆ ಲಂಚದ ಹಣ ನೀಡಿದ ಆರೋಪ ಸತೀಶ್ ಬಾಬು ಅವರ ಮೇಲಿದೆ.
ಈಗಾಗಲೇ ಸಿಬಿಐ ತಂಡ ಅವರನ್ನು ಹಲವು ಬಾರಿ ಪ್ರಶ್ನೆಗೆ ಒಳಪಡಿಸಿದೆ. ಜತೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೂಡ ಜಾರಿ ಮಾಡಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸತೀಶ್ ಬಾಬು, ತಮಗೆ ನೀಡಿದ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಕೋರಿದ್ದರು. ಅಲ್ಲದೆ, ತಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದರು.
ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಅಲೋಕ್ ವರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ವರ್ಮಾ ವಿರುದ್ಧದ ತನಿಖೆಯನ್ನು ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರ ಉಸ್ತುವಾರಿಯಲ್ಲಿ ನಡೆಸಬೇಕು ಎಂದು ಹೇಳಿತ್ತು.
ಇದರ ಆಧಾರದಲ್ಲಿ ತಮ್ಮ ಹೇಳಿಕೆಯನ್ನು ಕೂಡ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರ ಎದುರೇ ಸಲ್ಲಿಸಲು ಅವಕಾಶ ನೀಡುವಂತೆ ಸತೀಶ್ ಬಾಬು ಕೋರಿದ್ದರು. ಅಲ್ಲದೆ, ಪಟ್ನಾಯಕ್ ಅವರಿಗೂ ಪತ್ರ ಬರೆದು, ಅವರ ಉಸ್ತುವಾರಿಯಲ್ಲಿಯೇ ಹೇಳಿಕೆ ನೀಡಲು ಇಚ್ಛಿಸುವುದಾಗಿ ಹೇಳಿದ್ದರು.
ಸನಾ ಅವರ ದೂರಿನ ಅಡಿಯಲ್ಲಿ ಸಿಬಿಐ, ಅಸ್ಥಾನಾ ಅವರ ವಿರುದ್ಧ ಅ.15ರಂದು ಪ್ರಕರಣ ದಾಖಲಿಸಿತ್ತು. ಮಾಂಸ ರಫ್ತುದಾರ ಮೊಯಿನ್ ಖುರೇಷಿ ವಿರುದ್ಧದ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ 2017ರ ಪ್ರಕರಣದಲ್ಲಿ ಸತೀಶ್ ಬಾಬು ಕೂಡ ವಿಚಾರಣೆ ಎದುರಿಸುತ್ತಿದ್ದಾರೆ.
ತುರ್ತು ವಿಚಾರಣೆಗೆ ನಕಾರ
ವರ್ಗಾವಣೆಗೊಂಡಿರುವ ಸಿಬಿಐ ಅಧಿಕಾರಿ ಎ.ಕೆ. ಬಸ್ಸಿ ಅವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಒಳಪಡಿಸಿಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧದ ಲಂಚ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಬಸ್ಸಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದನ್ನು ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.












Click it and Unblock the Notifications