Just In: ಪಿಎಂಎಲ್ಎ ಆದೇಶ ಮರುಪರಿಶೀಲನೆ: ವಿಚಾರಣೆಗೆ ಸುಪ್ರೀಂ ಅಸ್ತು
ನವದೆಹಲಿ, ಆಗಸ್ಟ್ 23: ಸರ್ಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ವಾಸ್ತವಿಕವಾಗಿ ಕಡಿವಾಣವಿಲ್ಲದ ಅಧಿಕಾರವನ್ನು ನೀಡುವ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ (ಪಿಎಂಎಲ್ಎ) ಮಾಡಲಾದ ಪ್ರಮುಖ ತಿದ್ದುಪಡಿಗಳ ತೀರ್ಪು ಮರುಪರಿಶೀಲನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ (ಪಿಎಂಎಲ್ಎ) ಮಾಡಲಾದ ಪ್ರಮುಖ ತಿದ್ದುಪಡಿಗಳ ಎತ್ತಿಹಿಡಿದಿದ್ದ ಜುಲೈ 27 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿ ಸೂಚಿಸಿದೆ.
ಪಿಎಂಎಲ್ಎ ಪ್ರಕರಣ: ನವಾಬ್ ಮಲಿಕ್ಗೆ ಮಾರ್ಚ್ 21 ರವರೆಗೆ ನ್ಯಾಯಾಂಗ ಬಂಧನ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯು ಸರಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸಮನ್ಸ್ ನೀಡುವ, ಬಂಧನ ಮತ್ತು ದಾಳಿಗಳನ್ನು ನಡೆಡಸುವ ಅಧಿಕಾರವನ್ನು ನೀಡುತ್ತದೆ. ಜೊತೆಗೆ ಜಾಮೀನು ಪಡೆಯುವುದನ್ನು ಅಸಾಧ್ಯವಾಗಿಸುತ್ತದೆ.
ಈ ತಿದ್ದುಪಡಿ ತೀರ್ಪನ್ನು ಮರುಪರಿಶೀಲಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಮೌಖಿಕವಾಗಿ ಉಲ್ಲೇಖಿಸಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪಟ್ಟಿ ಮಾಡಿದೆ.
2019 ರಲ್ಲಿ ಹಣಕಾಸು ಕಾಯ್ದೆಯ ಮೂಲಕ 2002 ರ ಕಾಯಿದೆಗೆ ತಿದ್ದುಪಡಿಗಳನ್ನು ಮಾಡಲಾಗಿತ್ತು. ಈ ತಿದ್ದುಪಡಿಗಳ ವಿರುದ್ಧ ವ್ಯಾಪಕವಾದ ಪ್ರತಿರೋಧ ಉಂಟಾಗಿತ್ತು. ಇವುಗಳ ಬೆನ್ನಲ್ಲೆ ಸರ್ವೋಚ್ಚ ನ್ಯಾಯಾಲಯದ ಪೀಠ ತಿದ್ದುಪಡಿಗಳನ್ನು ಎತ್ತಿಹಿಡಿದು ತೀರ್ಪು ನೀಡಿತ್ತು.
ವೈಯಕ್ತಿಕ ಸ್ವಾತಂತ್ರ್ಯ, ಕಾನೂನಿನ ಕಾರ್ಯವಿಧಾನಗಳು ಮತ್ತು ಸಾಂವಿಧಾನಿಕ ಆದೇಶವನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ ಎಂದು ತಿದ್ದುಪಡಿಗಳ ವಿರುದ್ಧ 240 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಯಿತು. ಈ ಅರ್ಜಿದಾರರಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಮತ್ತು ಸಂಸದ ಕಾರ್ತಿ ಚಿದಂಬರಂ ಕೂಡ ಸೇರಿದ್ದಾರೆ.