ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಬಾಸ್ ಹೊಣೆಯಲ್ಲ!
ನವದೆಹಲಿ, ಜೂನ್ 27: 'ಯಪ್ಪಾ, ಈ ಕೆಲಸದ ಒತ್ತಡ ತಡ್ಯೋಕಾಗ್ತಿಲ್ಲ. ಒಂದಿನ ರಜೆಯೂ ಇಲ್ಲದೆ, ಗಡಿಯಾರ ನೋಡದೆ ಕೆಲಸ ಮಾಡಿಸೋ ಈ ಬಾಸ್ ಹೆಸರು ಬರ್ದಿಟ್ಟು ಆತ್ಮಹತ್ಯೆ ಮಾಡಿಕೊಂಡು ಪಾಠ ಕಲಿಸ್ಬೇಕು...' ಅಂತ ಅದೆಷ್ಟು ಜನ ಯೋಚಿಸುತ್ತಾರೋ ದೇವರೇ ಬಲ್ಲ!
ಆದರೆ ಹಾಗೇನಾದರೂ ಯೋಚಿಸಿದ್ದರೆ ಅಂಥ ಯೋಚನೆಗಳಿಗೆ ಇಂದೇ ಎಳ್ಳು ನೀರು ಬಿಟ್ಟು ಬಿಡಿ. ಆತ್ಮಹತ್ಯೆ ಮಹಾಪಾಪ ಅನ್ನೋದು ಒಂದು ಕಾರಣ. ಇನ್ನೊಂದು, 'ಉದ್ಯೋಗಿ ಕೆಲಸದ ಒತ್ತಡ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬಾಸ್ ನನ್ನು ಹೊಣೆ ಮಾಡುವುದಕ್ಕೆ ಬರುವುದಿಲ್ಲ' ಎಂಬ ಮಹತ್ವದ ಆದೇಶವೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ.
ಒತ್ತಡ ತಾಳಲಾರದೆ ಐಟಿ ಉದ್ಯೋಗಿ ಆತ್ಮಹತ್ಯೆ: ಸೂಕ್ತ ತನಿಖೆಗೆ ಮನವಿ
ಔರಂಗಾಬಾದ್ ಆಫೀಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಪರಾಶರ್ ಎಂಬ ವ್ಯಕ್ತಿಯೊಬ್ಬರು 2017ರ ಆಗಸ್ಟ್ ನಲ್ಲಿ ಆಫೀಸಿನಲ್ಲಿ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ನಂತರ ಅವರ ಪತ್ನಿ, 'ಪತಿಯ ಸಾವಿಗೆ ಕೆಲಸದ ಒತ್ತಡವೇ ಕಾರಣ. ಪತಿಯ ಆಫೀಸಿನ ಹಿರಿಯ ಅಧಿಕಾರಿಗೆ ಶಿಕ್ಷೆಯಾಗಬೇಕು' ಎಂದು ದೂರು ನೀಡಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಂಬೈ ಹೈಕೋರ್ಟ್, 'ಆತ್ಮಹತ್ಯೆಗೆ ಈ ಪ್ರಕರಣದಲ್ಲಿ ನೇರವಾಗಿ ಬಾಸ್ ಹೊಣೆಯಲ್ಲದಿದ್ದರೂ, ಅವರು ನೀಡಿದ ಮಾನಸಿಕ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಅವರೇ ಇದಕ್ಕೆ ಹೊಣೆ ಎನ್ನಬಹುದು' ಎಂದಿತ್ತು.
ನಂತರ ಹಿರಿಯ ಅಧಿಕಾರಿ ಸುಪ್ರೀಂ ಕೋರ್ಟಿನ ಮೊರೆಹೋಗಿದ್ದರು. ಈ ಕುರಿತಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಯಾವುದೇ ಉದ್ದೇಶ ಹಿರಿಯ ಅಧಿಕಾರಿಗೆ ಇಲ್ಲದ ಕಾರಣ ಇದಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲಸದ ಒತ್ತಡದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಬಾಸ್ ಗಳನ್ನು ದೂರುವುದಕ್ಕಾಗುವುದಿಲ್ಲ' ಎಂದಿದೆ.
ಎಲ್ಲಾ ಪ್ರಕರಣಗಳಲ್ಲೂ ಇದೇ ಆದೇಶ ಅನ್ವಯವಾಗುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಯನ್ನು ದೂರುವುದಕ್ಕೆ ಬರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.