ಸುನಂದಾ ಕೊಲೆ: ಫೋನ್ ಮೆಸೇಜ್, ಇಮೇಲ್ ನಾಶ
ನವದೆಹಲಿ, ಮಾ.25: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಕುರುಡು ಕಾಂಚಾಣದ ಕೈವಾಡ ಇರುವ ಬಗ್ಗೆ ಶಂಕೆ ಬಲವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಾಗ ಸಿಕ್ಕ ಶಂಕಿತರ ಹೆಸರು, ವಿವರಗಳಿದ್ದ ಸಂದೇಶಗಳು ಸುನಂದಾ ಫೋನಿನಲ್ಲಿತ್ತು. ಅದರೆ, ಈಗ ಎಲ್ಲವೂ ಡಿಲೀಟ್ ಆಗಿದೆ ಎಂದು ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸುನಂದಾ ಪುಷ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಬಂದಿದ್ದ ಸಂದೇಶಗಳನ್ನು ನೀಡುವಂತೆ ಸಾರ್ವಜನಿಕರಿಗೆ ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. [ಸುನಂದಾ ಹತ್ಯೆ : ಕುರುಡು ಕಾಂಚಾಣದ ಕೈವಾಡ?]
ಸುನಂದಾ ಪುಷ್ಕರ್ ಅವರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದರು. ಅನೇಕ ಗೆಳೆಯ, ಗೆಳತಿಯರ ಜೊತೆ ಚಾಟಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಯಾವುದಾದರೂ ಮಹತ್ವದ ಮಾತುಕತೆ ನಡೆಸಿರಬಹುದು. ನಿಮ್ಮ ಜೊತೆ ಮಾತುಕತೆ ನಡೆಸಿದ್ದರೆ ಧೈರ್ಯವಾಗಿ ನಿಮ್ಮ ಚಾಟ್ ಹಿಸ್ಟರಿ ತೆಗೆದು ಸಂದೇಶದ ಕಾಪಿಯನ್ನು ನಮಗೆ ನೀಡಿ ಎಂದು ದೆಹಲಿ ಪೊಲೀಸರು ಕೇಳಿಕೊಂಡಿದ್ದಾರೆ.

ಎಲ್ಲಿ ಹೋಯಿತು ಮಾಹಿತಿ:
ದೆಹಲಿ ಪೊಲೀಸರು ಸುನಂದಾ ಪುಷ್ಕರ್ ಬಳಸುತ್ತಿದ್ದ ಫೋನ್ ಇನ್ನಿತರ ಸಾಧನಗಳನ್ನು ವಿಶ್ಲೇಷಣೆ ಮಾಡಲು ಲ್ಯಾಬಿಗೆ ಕಳಿಸಿದ್ದರು. ಇದರಿಂದ ಕೆಲ ಮಾಹಿತಿ ಸಂಗ್ರಹಿಸಲಾಗಿದೆ.ಅದರೆ, ಅನೇಕ ಮಾಹಿತಿ ಡಿಲೀಟ್ ಆಗಿರುವುದು ಕಂಡು ಬಂದಿದೆ. ಈ ಸಂದೇಶಗಳು ಸುನಂದಾ ಸಾವಿಗೂ ಮುನ್ನ ಡಿಲೀಟ್ ಆಗಿದೆಯೇ? ಅಥವಾ ಸುನಂದಾ ಹತ್ಯೆ ನಂತರ ಯಾರಾದರೂ ಸಾಕ್ಷಿ ನಾಶ ಪಡಿಸಿದ್ದಾರೆಯೇ? ತಿಳಿದು ಬಂದಿಲ್ಲ. [ಬಟ್ಟೆ, ಶೂ ಹೊರಸಾಗಿಸಿದ್ದು ಯಾರು?]
ಹತ್ಯೆ ನಡೆದ ದಿನ ಸುನಂದಾ ಪುಷ್ಕರ್ ಅವರ ಶವವಿದ್ದ ರೂಮಿಗೆ ಪೊಲೀಸರು ಬಂದು ಪರಿಶೀಲನೆ ನಡೆಸುವುದಕ್ಕೂ ಮುನ್ನ ಕೆಲವು ಮಂದಿ ಬಂದು ಹೋಗಿರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಇಮೇಲ್ ಕೂಡಾ ಡಿಲೀಟ್ ಆಗಿದೆ:
ಸುನಂದಾ ಪುಷ್ಕರ್ ಬಳಸುತ್ತಿದ್ದ ಲ್ಯಾಪ್ ಟಾಪ್ ನಲ್ಲಿದ್ದ ಕೆಲವು ಮಹತ್ವದ ದಾಖಲೆಗಳು, ಆಕೆ ಬಳಸಿದ್ದ ಇಮೇಲ್ ಐಡಿಯಿಂದ ಕಳಿಸಿದ ಕೆಲವು ಸಂದೇಶಗಳು ಡಿಲೀಟ್ ಆಗಿರುವುದು ಕಂಡು ಬಂದಿದೆ. ಇದು ಯಾರ ಕೈವಾಡ ಎಂಬುದರ ತನಿಖೆ ನಡೆಯುತ್ತಿದೆ. [ಸುನಂದಾ ಹತ್ಯೆ ಸಾಕ್ಷಿ ನಾಶ : ನಾಲ್ವರ ಮೇಲಿದೆ ಶಂಕೆ]
ಜನವರಿ 20, 2015ರಂದು ಫೋರೆನ್ಸಿಕ್ ಸೈನ್ ಲ್ಯಾಬ್ ಗೆ ಸುನಂದಾ ಅವರ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳನ್ನು ಕಳಿಸಲಾಯಿತು. ಆದರೆ, ನಮ್ಮ ಕೈಗೆ ಕೆಲವು ಇ ಮೇಲ್ ಹಾಗೂ ಎಸ್ ಎಂಎಸ್ ಮಾತ್ರ ಸಿಕ್ಕಿದೆ. ದೆಹಲಿ ಪೊಲೀಸರ ವಶಕ್ಕೆ ಸುನಂದಾ ಬಳಸುತ್ತಿದ್ದ ಎಲೆಕ್ಟ್ರಾನಿಕ್ ಸಾಧನಗಳು ಸಿಗುವ ವೇಳೆಗೆ ಎಲ್ಲವೂ ನಾಶ ಪಡಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
ಒನ್ ಇಂಡಿಯಾ ಸುದ್ದಿ












Click it and Unblock the Notifications