ಸುನಂದಾ ಅಸಹಜ ಸಾವು ಹುಟ್ಟುಹಾಕಿದ 5 ಪಶ್ನೆಗಳು
ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಅಂತಿಮ ವೈದ್ಯಕೀಯ ವರದಿ ಆಧರಿಸಿ ನವದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ಪುನಃ ಆರಂಭಿಸಿರುವುದು ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಆದರೆ, ಪ್ರಕರಣ ಪಡೆದ ಹಲವು ತಿರುವುಗಳು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
1) ಒಂದು ಸಾವಿನ ಪ್ರಕರಣದಲ್ಲಿ ವೈದ್ಯಕೀಯ ವರದಿ ಸಲ್ಲಿಸಲು ವರ್ಷ ಕಾಲ ಬೇಕಾಯಿತು ಏಕೆ? [ಸುನಂದಾ ಕೊಲೆ ತನಿಖೆ ಕಬ್ಬಿಣದ ಕಡಲೆ]
2) ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ಮಧ್ಯದಲ್ಲೇ ವರ್ಗಾವಣೆ ಮಾಡಿದ್ದು ಏಕೆ? ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದ ಎಸಿಪಿ ಎರಡು ವಾರಗಳ ಹಿಂದಷ್ಟೇ ನಿವೃತ್ತರಾಗಿದ್ದರೆ, ಡಿಸಿಪಿ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ.
3) ಸುನಂದಾ ಹೋಟೆಲ್ನಲ್ಲಿ ಮೃತಪಟ್ಟಾಗ ಅವರನ್ನು ಓರ್ವ ವೈದ್ಯ ಪರೀಕ್ಷಿಸಿದ್ದರು. ಆದರೆ, ಪೊಲೀಸರು ವೈದ್ಯಕೀಯ ಮಂಡಳಿಗೆ ಸಲ್ಲಿಸಿದ್ದ ವರದಿಯಲ್ಲಿ ಈ ವೈದ್ಯನ ಅಭಿಪ್ರಾಯ ಏಕೆ ಇಲ್ಲ? [ಸುನಂದಾ ಕೊಲೆ ವಿಷ ಕೇಳಿ ದಿಗಿಲಾಯ್ತು]
4) ಸುನಂದಾ ತಂಗಿದ್ದ ಕೋಣೆಯಲ್ಲಿ ಅಪ್ರಾಕ್ಸ್ ಔಷಧಿಯ ಎರಡು ಪ್ಯಾಕೆಟ್ಗಳು ಸಿಕ್ಕಿವೆ. ಆದರೆ, ಅವರ ಶವ ಪರೀಕ್ಷೆಯಲ್ಲಿ ಈ ಔಷಧಗಳು ಪತ್ತೆಯಾಗಿರಲಿಲ್ಲ. ಹಾಗಿದ್ದರೆ ಖಾಲಿ ಪ್ಯಾಕೆಟ್ಗಳನ್ನು ಇಲ್ಲಿಟ್ಟವರು ಯಾರು?
5) ಎಐಐಎಂಎಸ್ ಆಡಳಿತ ಮಂಡಳಿಗೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಮೇಲ್ ಬಂದಿದ್ದು ಏಕೆ?
ಸುನಂದಾ ಜೀವನದಲ್ಲಾದ ತಿರುವುಗಳು : ಐಪಿಎಲ್ ಹರಾಜು ಸಂದರ್ಭ ಲಲಿತ್ ಮೋದಿ ಮಾಡಿದ್ದ ಟ್ವೀಟ್ ಸುನಂದಾ ಪುಷ್ಕರ್ ಹಾಗೂ ಶಶಿ ತರೂರ್ ಅವರ ಸಂಬಂಧವನ್ನು ಹೊರತಂದಿತ್ತು. ಇದೇ ಕಾರಣಕ್ಕಾಗಿ ಲಲಿತ್ ಮೋದಿ ತಲೆದಂಡವೂ ಆಗಿತ್ತು. [ಸುನಂದಾ ಸಾವಿನ ಹಿಂದೆ ವಿದೇಶೀಯನ ಕೈವಾಡ?]
ಇಳಿ ವಯಸ್ಸಿನಲ್ಲಿ ತನ್ನ ಮೂರು ಮಕ್ಕಳ ಎದುರು ಮೂರನೇ ಮದುವೆಯಾದ ಸುನಂದಾ ಅಕ್ಷರಶಃ ನವ ವಧುವಿನಂತೆಯೇ ಸಂಭ್ರಮಿಸಿದ್ದರು. ಶಶಿ ತರೂರ್ ಅವರಿಗೂ ಇದು ಮೂರನೇ ಮದುವೆಯಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರ ನಡುವಿನ ಜಗಳ ಜಗಜ್ಜಾಹೀರಾಗಿತ್ತು. ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್ ಮತ್ತು ಶಶಿ ತರೂರ್ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಆರೋಪಿಸಿ ಸುನಂದಾ ಜಗಳವೆಬ್ಬಿಸಿದ್ದರು.
ಸ್ವಲ್ಪ ದಿನಗಳಲ್ಲಿ ಸುನಂದಾ ಪುಷ್ಕರ್ ನವದೆಹಲಿಯ ಲೀಲಾ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾವಿನ ಕಾರಣ ಇದುವರೆಗೂ ಸ್ಪಷ್ಟಗೊಂಡಿರಲಿಲ್ಲ. ಈ ಮಧ್ಯೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಸುನಂದಾ ಪುಷ್ಕರ್ ಕೊಲೆಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.