ಹದಿನಾಲ್ಕು ವರ್ಷದಿಂದ ವಾಜಪೇಯಿ ಜತೆಗಿದ್ದವರು ಇವರು
Recommended Video

ನವದೆಹಲಿ, ಆಗಸ್ಟ್ 17: ಐದು ದಶಕದ ರಾಜಕಾರಣ, ಹೋರಾಟಗಳಿಂದ ದಣಿದರೂ, ಸುಮಾರು ಒಂಬತ್ತು ವರ್ಷಗಳಿಂದ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿಯೇ ಸಾವನ್ನು ಎದುರಿಸಿದ ದಿಟ್ಟ ದೇಹವದು.
'ಅಜಾತಶತ್ರು' ಆಗಿದ್ದರೂ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರಿಗೆ ನಿಯಮಗಳ ಪ್ರಕಾರ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಹಾಗೆ ಆ ಹಣ್ಣು ಜೀವಕ್ಕೆ 14 ವರ್ಷ ಸತತವಾಗಿ ಭದ್ರತೆ ಒದಗಿಸಿದ್ದ ವಿಶೇಷ ರಕ್ಷಣಾ ಸಮೂಹದ ಸಿಬ್ಬಂದಿಯ ಕಣ್ಣುಗಳು ಆರ್ದ್ರವಾಗಿದ್ದವು.
ಇಷ್ಟು ಸಮಯದಿಂದ ವಾಜಪೇಯಿ ಅವರನ್ನು ತೀರಾ ಹತ್ತಿರದಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದ ಎಸ್ಪಿಜಿ ಸಿಬ್ಬಂದಿ ಅತೀವ ನೋವಿನಿಂದ ಅವರಿಗೆ ವಿದಾಯ ಹೇಳಿದರು.

ಕ್ಯಾಮೆರಾಗಳು ಮತ್ತು ಜನಸಮೂಹದಿಂದ ದೂರವಿದ್ದ ಈ ಸಿಬ್ಬಂದಿಯ ತಂಡ ಮೌನವಾಗಿ ತೆರಳಿ ಗೌರವ ವಂದನೆ ಸಲ್ಲಿಸಿತು.
ಸ್ನೇಹಜೀವಿಯಾಗಿದ್ದ ವಾಜಪೇಯಿ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ನೋಡಿಕೊಳ್ಳುತ್ತಿದ್ದರು. ಅದರಿಂದ ಎಸ್ಪಿಜಿ ಸಿಬ್ಬಂದಿಯೂ ಹೊರತಲ್ಲ. ಈ ಸಿಬ್ಬಂದಿ ನಾಳೆಯಿಂದಲೇ ಬೇರೊಬ್ಬ ವಿಐಪಿಯ ಭದ್ರತೆಗೆ ನಿಯೋಜನೆಗೊಳ್ಳಬಹುದು. ಆದರೆ, ಮೃದುಮನಸ್ಸಿನ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಇಷ್ಟಕಾಲ ಕಳೆದ ದಿನಗಳನ್ನು ಅವರು ಮರೆಯಲಾರರು.
ಏಕೆಂದರೆ ಇಷ್ಟು ವರ್ಷ ತಮ್ಮ ನಡುವೆ ಇಡೀ ಗಮನವನ್ನು ಕೇಂದ್ರೀಕರಿಸಿಕೊಂಡಿದ್ದ ಮತ್ತು ತಮ್ಮ ಬದುಕಿನ ಮಹತ್ವದ ದಿನಗಳನ್ನು ತ್ಯಾಗ ಮಾಡಿ ನೋಡಿಕೊಂಡಿದ್ದ ವ್ಯಕ್ತಿ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅವರು ಒಪ್ಪಿಕೊಳ್ಳಬೇಕಾಗಿದೆ.
'ಅದು ನಮಗೆ ತುಂಬಾ ಆಘಾತಕಾರಿ. ಅವರ ಭದ್ರತೆಗಾಗಿ ಹಲವು ವರ್ಷಗಳಿಂದ ನಿಯೋಜನೆಗೊಂಡಿದ್ದೆವು. ಅವರೊಬ್ಬ ಅತಿ ಎತ್ತರದ ನಾಯಕ. ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ' ಎಂದು ಎಸ್ಪಿಜಿ ಅಧಿಕಾರಿಯೊಬ್ಬರು ತಿಳಿಸಿದರು.
ಮಾಧ್ಯಮಗಳ ಕಣ್ಣಿಗೆ ಬೀಳುವುದಕ್ಕೆ ಒಪ್ಪಿಕೊಳ್ಳದ ಅವರು, ತಮ್ಮ ಸಹೋದ್ಯೋಗಿಗಳ ಜತೆಗೆ ವಾಜಪೇಯಿ ಅವರಿಗೆ ಪುಷ್ಪ ನಮನ ಸಲ್ಲಿಸಿ ಮತ್ತೆ ಕರ್ತವ್ಯಕ್ಕೆ ಮರಳಿದರು. ವಾಜಪೇಯಿ ಅವರ ಅಂತ್ಯಸಂಸ್ಕಾರ ನಡೆದ ಸ್ಮೃತಿ ಸ್ಥಳದವರೆಗೂ ಭದ್ರತೆಗೆ ತೆರಳಿದರು.
6ಎ ಕೃಷ್ಣ ಮೆನನ್ ರಸ್ತೆಯಲ್ಲಿನ ವಾಜಪೇಯಿ ಅವರ ಮನೆಯಲ್ಲಿ ಎಸ್ಪಿಜಿಯ 20 ಸಿಬ್ಬಂದಿ ಎಂಟು ಗಂಟೆಗಳ ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು. ಗಣ್ಯರಿಗೆ ಮನೆಯ ಮುಖ್ಯದ್ವಾರದಿಂದ ಎಸ್ಕಾರ್ಟ್ ಮಾಡುವುದರಿಂದ, ಭದ್ರತೆ ಮತ್ತು ಚಲನೆಯ ಹೊಣೆಗಾರಿಕೆ, ಬಂದು ಹೋಗುವವರ ಮಾಹಿತಿ ದಾಖಲು ಸೇರಿದಂತೆ ವಾಜಪೇಯಿ ಅವರಿಗೆ ದಿನದ 24 ಗಂಟೆಯೂ ನೆರಳಾಗಿದ್ದರು.
ಅವರು ಮಲಗಿದ್ದಾಗಲೂ, ಎಚ್ಚರವಾಗಿದ್ದಾಗಲೂ ಕಾವಲು ಕಾದಿದ್ದರು.












Click it and Unblock the Notifications