ವಿಪಕ್ಷ ಸಭೆ ಕರೆದ ಸೋನಿಯಾ: ಮಮತಾರ ಟಿಎಂಸಿಗಿಲ್ಲ ಆಹ್ವಾನ!
ನವದೆಹಲಿ, ಡಿಸೆಂಬರ್ 14: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ದೆಹಲಿ ನಿವಾಸದಲ್ಲಿ ಮಂಗಳವಾರ ಸಂಜೆ ಕಾರ್ಯತಂತ್ರದ ಅಧಿವೇಶನ ನಡೆಸಲಾಗಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ ಐದು ವಿರೋಧ ಪಕ್ಷಗಳ ನಾಯಕರು ಇದ್ದರು. ಕಾಂಗ್ರೆಸ್ ಮಿತ್ರಪಕ್ಷಗಳಾದ ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಡಿಎಂಕೆ ಮತ್ತು ಶಿವಸೇನೆ ಇದ್ದವು. ಆದರೆ ಈ ಸಭೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮಾತ್ರ ಯಾವುದೇ ಆಹ್ವಾನ ನೀಡಲಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.
ಮುಂಗಾರು ಅಧಿವೇಶನದಲ್ಲಿ ದುರ್ವತನೆ ತೋರಿದ್ದಾರೆ ಎಂದು ಆರೋಪ ಮಾಡಿ ಚಳಿಗಾಲ ಅಧಿವೇಶನದಲ್ಲಿ ರಾಜ್ಯಸಭೆಯ 12 ಸಂಸದರ ಅಮಾನತು ಮಾಡಲಾಗಿದೆ. ಈ ಅಮಾನತ್ತನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮುಂದೆ ಯಾವ ಕ್ರಮವನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಈ ಸಭೆಯು ನಡೆದಿದೆ.
ಶರದ್ ಪವಾರ್, ಶಿವಸೇನೆ ನಾಯಕ ಸಂಜಯ್ ರಾವತ್, ಡಿಎಂಕೆ ನಾಯಕ ಟಿಆರ್ ಬಾಲು, ಸಿಪಿಐಎಂ ನಾಯಕ ಸೀತಾರಾಮ್ ಯೆಚ್ಯೂರಿ, ಎನ್ಸಿಪಿಯ ಫಾರೂಕ್ ಅಬ್ದುಲ್ಲಾ ಈ ಸಭೆಯಲ್ಲಿ ಭಾಗಿಯಾಗಿದ್ದರು, ಆದರೆ ಸಭೆಗೆ ಮಮತಾ ಬ್ಯಾನರ್ಜಿಯ ಪಕ್ಷಕ್ಕೆ ಯಾವುದೇ ಆಹ್ವಾನವನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿದೆ.

ಈ ವಿಷಯದ ಬಗ್ಗೆ ಮುಂದಿನ ಮಾರ್ಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಜೊತೆಯಲ್ಲಿ ಮಾತನಾಡಲು ನಾಯಕರು ಶರದ್ ಪವಾರ್ಗೆ ಹೇಳಿದ್ದಾ ಎಂದು ಮೂಲಗಳು ತಿಳಿಸಿದೆ. ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಈ ಹಿಂದೆ ಸದನಸ ಸುಗಮ ಕಾರ್ಯ ನಿರ್ವಹಣೆಯ ಅಗತ್ಯವನ್ನು ಒತ್ತಿ ಹೇಳಿದ್ದರು, ಈ ವಿಷಯವನ್ನು ಚರ್ಚಿಸಲು ಸದನದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಲ್ಲಿ ಹೇಳಿದ್ದರು.
"ಸಂಸತ್ ಸದಸ್ಯರೊಂದಿಗೆ ಸರ್ಕಾರವು ಇಷ್ಟೊಂದು ಕಠಿಣವಾಗಿ ಇರಬಾರದು. ಅಷ್ಟಕ್ಕೂ ಅವರೆಲ್ಲರೂ ಈ ದೇಶದ ಚುನಾಯಿತ ಪ್ರತಿನಿಧಿಗಳು. ಸರ್ಕಾರವೇ ಎಲ್ಲಾ ವಿಚಾರದಲ್ಲಿಯೂ ಪರಿಹಾರವನ್ನು ತನಗೆ ಬೇಕಾದಂತೆ ಕಂಡು ಕೊಳ್ಳುವುದು ಅಲ್ಲ. ಇದು ಸರಿಯಲ್ಲ, ಈ ಬಗ್ಗೆ ಈಗಲೇ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕು," ಎಂದು ಡಿಎಂಕೆ ನಾಯಕ ಟಿಆರ್ ಬಾಲು ಹೇಳಿದರು.
"ನಾವು ಸಮಾನ ಮನಸ್ಕರು"
ಇನ್ನು ಈ ಸಭೆಗೆ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷವು ಇಲ್ಲದಿರುವ ಬಗ್ಗೆ ಈ ನಾಯಕರನ್ನು ಪ್ರಶ್ನೆ ಮಾಡಿದಾಗ, "ದೇಶದ ಉದ್ದ ಅಗಲಕ್ಕೂ ಇರುವ ಎಲ್ಲಾ ಪಕ್ಷಗಳು ಸೇರಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ಬೇರೆ ಬೇರೆ ರೀತಿಯ ಅಭಿಪ್ರಾಯ ಇರುತ್ತದೆ. ನಾವು ಸಮಾನ ಮನಸ್ಕರು," ಎಂದು ತಿಳಿಸಿದ್ದಾರೆ.
ಮುಂಗಾರು ಅಧಿವೇಶನದ ಸಂದರ್ಭದಲ್ಲಿ ದುರ್ನಡತೆ ತೋರಿದ್ದಾರೆ ಎಂದು ಆರೋಪ ಮಾಡಿ ರಾಜ್ಯ ಸಭೆಯ ಸುಮಾರು 12 ವಿರೋಧ ಪಕ್ಷದ ನಾಯಕರುಗಳನ್ನು ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧ ಮಾಡಿದೆ. ನಿರಂತರವಾಗಿ ಪ್ರತಿಭಟನೆಯನ್ನು ನಡೆಸುತ್ತಿದೆ. ಇಂದು ಕೂಡಾ ವಿರೋಧ ಪಕ್ಷಗಳು ಪ್ರತಿಭಟನಾ ರ್ಯಾಲಿಯನ್ನು ನಡೆಸಿದೆ. ಈ ಸಂಸದರುಗಳು ಕ್ಷಮೆ ಕೇಳಿಲ್ಲ ಎಂದು ಹೇಳಿ ಈ ಸದಸ್ಯರ ಅಮಾನತು ರದ್ದು ಮಾಡಲು ಸರ್ಕಾರ ನಕಾರ ಎಂದಿದೆ.
ಇನ್ನು ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನು ಬರೆದಿದ್ದಾರೆ. ಸಂವಿಧಾನದ 83 ನೇ ವಿಧಿಯ ಅಡಿಯಲ್ಲಿ, "ರಾಜ್ಯಗಳ ಪರಿಷತ್ತು ಸದಸ್ಯರಿಗಿಂತ ಭಿನ್ನವಾಗಿ ಸದನವಾಗಿದೆ," ಎಂದು ವಾದ ಮಾಡಿದ್ದಾರೆ. ಇನ್ನು ವಿರೋಧ ಪಕ್ಷಗಳು ಎಬ್ಬಿಸಿದ ಗದ್ದಲದಿಂದಾಗಿ ಮುಂಗಾರು ಅಧಿವೇಶನವನ್ನು ಆಗಸ್ಟ್ 31 ರಂದು ಭಾರತದ ರಾಷ್ಟ್ರಪತಿಗಳು ಮುಂದೂಡಿದರು. ಅಮಾನತುಗೊಂಡ ಸದಸ್ಯರಿಗೆ ತಮ್ಮ ವಾದವನ್ನು ಮಂಡಿಸಲು ಯಾವುದೇ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.












Click it and Unblock the Notifications