ಭಾರತದಾದ್ಯಂತ ರೈತರಿಂದ 'ದ್ರೋಹದ ದಿನ' ಆಚರಣೆ
ನವದೆಹಲಿ, ಜನವರಿ 31: ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಜನವರಿ 31 ರಂದು ಭಾರತದಾದ್ಯಂತ 'ದ್ರೋಹದ ದಿನ' ಎಂದು ಆಚರಿಸುತ್ತಿದೆ. ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನಾ ಪ್ರದರ್ಶನಗಳೊಂದಿಗೆ 'ದ್ರೋಹದ ದಿನ' ಆಚರಿಸಲಿದೆ. ಈ ಕುರಿತು ಹೇಳಿಕೆ ನೀಡಿರುವ ಎಸ್ಕೆಎಂ, ದೇಶದ ಕನಿಷ್ಠ 500 ಜಿಲ್ಲೆಗಳಲ್ಲಿ ಎಲ್ಲಾ ರೈತ ಸಂಘಗಳು ಈ ಪ್ರತಿಭಟನೆಯನ್ನು ಮಾಡಲಿದ್ದಾರೆ. ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವನ್ನೂ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ನಮಗೆ ಮೋಸ ಮಾಡಿದೆ ಎಂದು ರೈತರು ಕಿಡಿಕಾರಿದರು.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಧರಣಿ ನಡೆಸಿದ್ದರು. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರವು ಘೋಷಿಸಿದ ನಂತರ ಆಂದೋಲನವನ್ನು ಹಿಂಪಡೆಯಲಾಯಿತು. ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನು ಬೆಂಬಲವು ಪ್ರಮುಖವಾದುದಾಗಿದ್ದು, ತಮ್ಮ ಇತರೆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದಲ್ಲಿ ಆಂದೋಲನವನ್ನು ಪುನರಾರಂಭಿಸಬಹುದು ಎಂದು SKM ಘೋಷಿಸಿತು.
ಜನವರಿ 15ರ ನಂತರ 2021ರ ಡಿಸೆಂಬರ್ 9ರ ಪತ್ರದಲ್ಲಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸದಿರುವುದು ಸರಕಾರದ ರೈತ ವಿರೋಧಿ ನಿಲುವು ಸ್ಪಷ್ಟವಾಗಿದೆ ಎಂದು ಎಸ್ಕೆಎಂ ಹೇಳಿದೆ.
ಪ್ರತಿಭಟನಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯುವ ಭರವಸೆ ಅಥವಾ ವರ್ಷಪೂರ್ತಿ ಆಂದೋಲನದಲ್ಲಿ ಮಡಿದ ಹುತಾತ್ಮರ ಕುಟುಂಬಗಳಿಗೆ ಪರಿಹಾರ ನೀಡುವ ಭರವಸೆಯ ಮೇಲೆ ಕಳೆದ ಎರಡು ವಾರಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅದು ಹೇಳಿದೆ. ಎಂಎಸ್ಪಿ ವಿಚಾರವಾಗಿಯೂ ಸಮಿತಿ ರಚನೆ ಮಾಡಿಲ್ಲ ಎಂದು ರೈತ ಸಂಘ ಕೇಂದ್ರದ ವಿರುದ್ಧ ಕಿಡಿಕಾರಿದೆ. ಈ ಮೂಲಕ "ಈ ರೈತ ವಿರೋಧಿ ಬಿಜೆಪಿ ಆಡಳಿತಕ್ಕೆ ತಕ್ಕ ಪಾಠ ಕಲಿಸಲಾಗುವುದು" ಎಂದು ಎಸ್ಕೆಎಂ ಸ್ಪಷ್ಟಪಡಿಸಿದೆ.

ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯುವುದು ಮತ್ತು ರೈತರ MSP ಗಾಗಿ ಫೆಬ್ರುವರಿ 23 ಮತ್ತು 24 ರಂದು ಕೇಂದ್ರ ಟ್ರೇಡ್ ಯೂನಿಯನ್ಗಳು ಕರೆದಿರುವ ರಾಷ್ಟ್ರವ್ಯಾಪಿ ಮುಷ್ಕರವನ್ನು ಸಂಪೂರ್ಣವಾಗಿ ಅನುಮೋದಿಸುತ್ತದೆ ಮತ್ತು ಬೆಂಬಲಿಸುತ್ತದೆ ಎಂದು SKM ಪುನರುಚ್ಚರಿಸಿದೆ.
ಜೊತೆಗೆ ಲಖಿಂಪುರ ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕೂಡ ರೈತರು ಇಂದು 'ದ್ರೋಹದ ದಿನ' ಆಚರಿಸಲು ಹಲವಾರು ಕಾರಣಗಳಲ್ಲಿ ಒಂದಾಗಿದೆ. ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿದೆ. ರೈತರ ಪ್ರತಿಭಟನೆ ಹಿಂಪಡೆಯಲು ಮೋದಿ ಮನವಿ ಮಾಡಿದರು. ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ನೀಡಿದರು. ಆದರೆ ಈವರೆಗೆ ಯಾವುದೇ ಬೇಡಿಕೆಗಳಲಾಗಲಿ ಅದಕ್ಕೆ ಬೇಕಾದ ಕಾರ್ಯಗಳಾಗಲಿ ಮುನ್ನಲೆಗೆ ಬಂದಿರುವ ಕುಹುಗಳಿಲ್ಲ. ಮಾತ್ರವಲ್ಲದೆ ಪ್ರತಿಭಟನೆ ವೇಳೆ ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಕೈಬಿಡಲು ಒತ್ತಾಯಿಸಲಾಗಿತ್ತು. ಅದೂ ಕೂಡ ಆಗಿಲ್ಲ.

ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಿದೆಯಾದರೂ ಅದು ಚುನಾವಣೆ ದೃಚ್ಟಿಯಿಂದ ಮಾತ್ರ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಚುನಾವಣೆ ಬಳಿಕ ಮತ್ತೆ ಕೃಷಿ ವಿರೋಧಿ ಕಾನೂನುಗಳು ಜಾರಿಯಾಗಲಿವೆ ಎನ್ನುವ ಮಾತುಗಳನ್ನ ಕೂಡ ವಿರೋಧ ಪಕ್ಷಗಳಾಡುತ್ತಿವೆ.












Click it and Unblock the Notifications