ಮೋದಿ ಹೊಗಳಿ ಹುದ್ದೆ ಕಳೆದುಕೊಂಡ ಶಶಿ ತರೂರ್
ನವದೆಹಲಿ, ಅ.13: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕೆ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಶಶಿತರೂರ್ ತಲೆದಂಡವಾಗಿದೆ. ಕೇರಳ ಕಾಂಗ್ರೆಸ್ ನೀಡಿದ ದೂರಿನ ಮೇರೆಗೆ ತರೂರ್ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ಸೋಮವಾರ ವಜಾಗೊಳಿಸಿ ಕಾಂಗ್ರೆಸ್ ಹೈಕಮಾಂಡ್ ಅದೇಶ ನೀಡಿದೆ.
ಶಶಿತರೂರ್ ಪದೇ ಪದೇ ಪ್ರಧಾನಿ ಮೋದಿಯನ್ನು ಹೊಗಳಿ ಪಕ್ಷ ನಿಷ್ಠೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಕೇರಳ ಕಾಂಗ್ರೆಸ್ ನಾಯಕರು ಆಗ್ರಹಪೂರ್ವಕ ದೂರನ್ನು ಕಾಂಗ್ರೆಸ್ ಹೈಕಮಾಂಡಿಗೆ ನೀಡಿದ್ದರು. ಈ ದೂರು ಆಧಾರಿಸಿ ಕಾಂಗ್ರೆಸ್ ಹೈಕಮಾಂಡ್ ತರೂರನ್ನು ವಕ್ತಾರ ಸ್ಥಾನದಿಂದ ವಜಾಗೊಳಿಸಿದೆ.

ಶಶಿತರೂರ್ ಅವರನ್ನು ಮೋದಿ ಅವರು ಸ್ವಚ್ಛತಾ ಅಭಿಯಾನಕ್ಕೆ ನಾಮಾಂಕಿತ ಮಾಡಿದ್ದರು. ಮೋದಿ ಅವರ ಯೋಜನೆಗಳು ಜನೋಪಕಾರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಶಶಿ ಅವರು ಆಗಾಗ ಟ್ವೀಟ್ ಮಾಡುತ್ತಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಅವರು ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಎಂ ಶ್ರೀಧರನ್ ಅವರು ಶಶಿ ತರೂರ್ ವಿರುದ್ಧ ಹರಿಹಾಯ್ದಿದ್ದಾರೆ. ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಯುಡಿಎಫ್ ಕಾರ್ಯಕರ್ತರು ನಿಷ್ಠೆಯಿಂದ ದುಡಿದು ಗೆಲುವು ದಾಖಲಿಸಿದರೆ ಶಶಿ ಅವರು ಮೋದಿ ಅವರ ಭಜನೆಯಲ್ಲಿ ತೊಡಗಿರುವುದು ದುರಂತ ಎಂದಿದ್ದಾರೆ.
Kerala Congress complaining about discipline is the real story here. pic.twitter.com/o5l44aeRF8
— Shiv Aroor (@ShivAroor) October 13, 2014 ಕೇರಳ ಕಾಂಗ್ರೆಸ್ ನೀಡಿದ ದೂರನ್ನು ಪರಿಶೀಲಿಸಿದ ಎಕೆ ಅಂಟನಿ, ಮೋತಿಲಾಲ್ ವೋರಾ, ಸುಶೀಲ್ ಕುಮಾರ್ ಶಿಂಧೆ ಅವರಿದ್ದ ಮೂವರು ಸದಸ್ಯರ ಶಿಸ್ತು ಪಾಲನ ಸಮಿತಿ ತನ್ನ ವರದಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಿದೆ. ಸಮಿತಿ ಶಿಫಾರಸಿನ ಮೇರೆಗೆ ಶಶಿ ತರೂರ್ ಅವರನ್ನು ಸೋನಿಯಾ ಗಾಂಧಿ ಅವರು ವಕ್ತಾರ ಸ್ಥಾನದಿಂದ ವಜಾ ಮಾಡಿದ್ದಾರೆ.
ಅದರೆ, ಶಶಿ ಅವರಂತೆ ಸದಾ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರತಿಕ್ರಿಯಿಸಿ, 'ಶಶಿ ಅವರು ಸ್ವಚ್ಛ ಭಾರತ್ ಅಭಿಯಾನವನ್ನು ಒಪ್ಪಿಕೊಂಡಿದ್ದರಲ್ಲಿ ಯಾವ ತಪ್ಪಿಲ್ಲ. ಇಷ್ಟಕ್ಕೂ ಅದು ಕಾಂಗ್ರೆಸ್ ಪಕ್ಷದ ಯೋಜನೆಯನ್ನು ಮೋದಿ ಅವರು ಹೊಸ ಹೆಸರಿನಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ ಅಷ್ಟೆ' ಎಂದಿದ್ದಾರೆ.












Click it and Unblock the Notifications