ಯೋಜನೆಗಳನ್ನು ಶಟಪ್ ಇಂಡಿಯಾ, ಸಿಟ್ ಡೌನ್ ಇಂಡಿಯಾ ಎಂದು ಬದಲಿಸಿ: ತರೂರ್ ಲೇವಡಿ
ನವದೆಹಲಿ, ಫೆಬ್ರವರಿ 4: ಭಾರತದ ಆತ್ಮವನ್ನು ಛಿದ್ರ ಮಾಡಿರುವುದಕ್ಕೆ ಸರ್ಕಾರ ಹೊಣೆ ಹೊತ್ತುಕೊಳ್ಳಬೇಕು ಎಂದು ಕೇಂದ್ರವನ್ನು ಆಗ್ರಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಅದು ತನ್ನ ಯೋಜನೆಗಳನ್ನು 'ಶಟ್ಡೌನ್ ಇಂಡಿಯಾ', 'ಸಿಟ್ ಡೌನ್ ಇಂಡಿಯಾ' ಮತ್ತು 'ಶಟ್ಅಪ್ ಇಂಡಿಯಾ' ಎಂದು ಮರುನಾಮಕರಣ ಮಾಡುವುದು ಒಳಿತು ಎಂದು ಲೇವಡಿ ಮಾಡಿದ್ದಾರೆ.
ಸಂಸತ್ನಲ್ಲಿ ಮಂಗಳವಾರ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಚನೆಯ ಮೇಲೆ ಹಲ್ಲೆ ನಡೆಸುತ್ತಿದೆ. ದೇಶವನ್ನು 'ಹಿಂದೂಗಳು Vs ಮುಸ್ಲಿಮರು', 'ನಾವು Vs ಅವರು' ಎಂದು ಬಿಜೆಪಿ ವಿಭಜಿಸಿದೆ ಎಂದು ಆರೋಪಿಸಿದರು.
ಬಜೆಟ್ ಅಧಿವೇಶನಕ್ಕೂ ಮುನ್ನ ರಾಷ್ಟ್ರಪತಿಗಳು ಸಂಸತ್ನಲ್ಲಿ ಮಾಡಿದ ಸರ್ಕಾರದ ನೀತಿಗಳು, ಸಾಧನೆಗಳ ಕುರಿತಾದ ಭಾಷಣದ ಕುರಿತಾದ ಚರ್ಚೆ ವೇಳೆ ಈ ಹೇಳಿಕೆ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಮೇಲಿನ ನಿರ್ಬಂಧಗಳ ಕುರಿತು ಪ್ರಸ್ತಾಪಿಸಿದ ತರೂರ್, ದೇಶ ಎದುರಿಸುತ್ತಿರುವ ಸಂವಿಧಾನಾತ್ಮಕ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ನಿಭಾಯಿಸಬೇಕಾದ ತನ್ನ ನೈತಿಕ ಜವಾಬ್ದಾರಿಯನ್ನೇ ಸರ್ಕಾರ ಮುಚ್ಚಿಹಾಕುತ್ತಿದೆ ಎಂದು ಆರೋಪಿಸಿದರು.
ಎಡಪಂಥೀಯರು ಮತ್ತು ಕಾರ್ಯಕರ್ತರನ್ನು ಗುರುತಿಸಲು ಬಿಜೆಪಿ ಹಾಗೂ ಅದರ ಬೆಂಬಲಿಗರು 'ತುಕ್ಡೆ ತುಕ್ಡೆ ಗ್ಯಾಂಗ್' ಪದ ಬಳಸುವುದುನ್ನು ಪ್ರಶ್ನಿಸಿದರು. '1947ರಲ್ಲಿ ಭಾರತ ತನ್ನ ನೆಲದ ವಿಭಜನೆಯನ್ನು ಕಂಡಿತು. 2020ರಲ್ಲಿ ಸರ್ಕಾರವು ಭಾರತದ ಆತ್ಮವನ್ನು ವಿಭಜಿಸುತ್ತಿದೆ' ಎಂದು ಕಿಡಿಕಾರಿದರು.












Click it and Unblock the Notifications