ಲಿಂಗಾಯತ ಪ್ರತ್ಯೇಕ ಧರ್ಮ: SC ಗಳಿಗಂತೂ ಸಿಹಿಸುದ್ದಿಯಲ್ಲ..!
ನವದೆಹಲಿ, ಮಾರ್ಚ್ 21: 'ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಕೇಂದ್ರ ಒಪ್ಪಿದ್ದೇ ಆದಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯದ ಪರಿಶಿಷ್ಟ ಜಾತಿ(ಎಸ್ಸಿ)ಯ ಜನರು ತಮಗೆ ಈಗಾಗಲೇ ಸಿಕ್ಕುತ್ತಿರುವ ಮೀಸಲಾತಿಯ ಸೌಲಭ್ಯವನ್ನು ಕಳೆದುಕೊಳ್ಳಬೇಕಾಗುತ್ತದೆಯೇ?'
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
'ಹೌದು, ಅವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ' ಎಂದಿದ್ದಾರೆ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಗ್ವಾಲ್. ಇದೇ ಕಾರಣಕ್ಕಾಗಿಯೇ 2013 ರಲ್ಲೂ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಇದ್ದಾಗಲೂ ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒಪ್ಪಿಗೆ ನೀಡಿದಲ್ಲಿ ಸಮಾಜ ಒಡೆಯುತ್ತದೆ ಎಂದು ಮನಮೋಹನ್ ಸಿಂಗ್ ಸರ್ಕಾರವೇ ಹೇಳಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರವೇ ಇದಕ್ಕೆ ಬೆಂಬಲ ನೀಡುತ್ತಿರುವುದು ಆಶ್ಚರ್ಯ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರವೇ ನಿರಾಕರಿಸಿತ್ತು!
2013 ರಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಿದ್ದಾಗ, ನವೆಂಬರ್ 14, 2013 ರಲ್ಲಿ ಕರ್ನಾಟಕ ಸರ್ಕಾರಕ್ಕೆ ಭಾರತೀಯ ರಿಜಿಸ್ಟ್ರಾರ್ ಜನರಲ್ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವೀರಶೈವ ಮತ್ತು ಲಿಂಗಾಯತಗಳೆರಡೂ ಹಿಂದು ಧರ್ಮದ ಪಂಥಗಳೇ ಹೊರತು ಅವು ಸ್ವತಂತ್ರ ಧರ್ಮವಲ್ಲ ಎಂದು ಹೇಳಿದ್ದರು. ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಈ ಸ್ವತಂತ್ರ ಧರ್ಮದ ಪರಿಕಲ್ಪನೆಯನ್ನು ಸಾರಾಸಗಟಾಗಿ ನಿರಾಕರಿಸಿತ್ತು. ಆದರೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಧರ್ಮದ ವಿಷಯ ಈಗ ರಾಜಕೀಯ ಸ್ವರೂಪ ಪಡೆಯುತ್ತಿದೆ. ಇದು ಒಡೆದು ಆಳುವ ನೀತಿ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಪರಿಶಿಷ್ಟ ಜಾತಿ ಜನರಿಗೆ ನಷ್ಟ
ಈ ನಿರ್ಧಾರದಿಂದ ಪರಿಶಿಷ್ಟ ಜಾತಿಯ ಜನರಿಗೆ ನಷ್ಟವಾಗಲಿದೆ ಎಂದು ಆಗಿನ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಹೇಳಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮವಾದರೆ ವೀರಶೈವ ಮತ್ತು ಲಿಂಗಾಯತ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಜನರು ತಮಗೆ ಈಗಾಗಲೇ ಸಿಗುತ್ತಿರುವ ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಲಿಂಗಾಯತರು ಅಲ್ಪಸಂಖ್ಯಾತ ವಿಭಾಗದಲ್ಲಿ ಬರುವುದರಿಂದ, ಅಲ್ಪಸಂಖ್ಯಾತರಿಗೆ ಭಾರತ ಸರ್ಕಾರ ಏನೆಲ್ಲ ಸೌಲಭ್ಯ ನೀಡುತ್ತದೆಯೋ ಆ ಸೌಲಭ್ಯವನ್ನು ಲಿಂಗಾಯತ ಧರ್ಮದ ಎಲ್ಲರೂ ಪಡೆಯುತ್ತಾರೆ. ಆದ್ದರಿಂದ ಎಸ್ಸಿಗಳಿಗೆ ಪ್ರತ್ಯೇಕ ಮೀಸಲಾತಿ ಇರುವುದಿಲ್ಲ. ಇದರಿಂದ ನಷ್ಟವಾಗುವುದು ಎಸ್ಸಿಗಳಿಗೇ. ಈ ಕಾರಣಕ್ಕಾಗಿಯೇ ಯುಪಿಎ ಸರ್ಕಾರ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡಲು ಹಿಂದೇಟು ಹಾಕಿತ್ತು. ಇದರಿಂದ ಎಸ್ಸಿಗಳ ಮತ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿ ಕಾಂಗ್ರೆಸ್ಸಿಗಿತ್ತು ಎಂದು ಅರ್ಜುನ್ ರಾಮ್ ಮೇಗ್ವಾಲ್ ಹೇಳಿದ್ದಾರೆ.

ಯಡಿಯೂರಪ್ಪನವರ ಯಶಸ್ಸು ತಡೆಯಲು ಯತ್ನ!
ಕರ್ನಾಟಕ ಸರ್ಕಾರ ಧರ್ಮದ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ಲಿಂಗಾಯತ ಸ್ವತಂತ್ರ್ಯ ಧರ್ಮ ಎಂಬ ವಿಷಯವನ್ನು ತನ್ನ ರಾಜಕೀಯ ದಾಳಕ್ಕೆ ಬಳಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಈ ಕೂಗು ಎದ್ದಿರುವುದಕ್ಕೆ ಪ್ರಮುಖ ಕಾರಣ ಲಿಂಗಾಯತ ನಾಯಕರಾದ ಬಿಜೆಪಿಯ ಬಿ ಎಸ್ ಯಡಿಯೂರಪ್ಪನವರ ಯಶಸ್ಸಿಗೆ ತಡೆಯೊಡ್ಡುವುದೇ ಆಗಿದೆ ಎಂದು ಅವರು ಸಿದ್ದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದಲ್ಲಿ ಇನ್ನು ಕೆಲವೇ ವಾರಗಳಲಲ್ಲಿ ಚುನಾವಣೆ ನಡೆಯಲಿರುವುದರಿಂದ ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅಂಗಳದಲ್ಲಿ ಚೆಂಡು!
ಬಸವ ತತ್ತ್ವವನ್ನು ಪಾಲಿಸುವ ವೀರಶೈವ ಮತ್ತು ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ನೀಡಬೇಕೆಂದು ನ್ಯಾ. ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯನ್ನು ರ್ನಾಟಕ ಸಚಿವ ಸಂಪುಟ ಮಾ.19 ರಂದು ಅಂಗೀಕರಿಸಿತ್ತು. ಒಂದು ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಿ ಅದಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುವುದರಿಂದ ಈ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಸದ್ಯಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ.












Click it and Unblock the Notifications