ಕೊರೊನಾದಿಂದ ರೈತರನ್ನು ರಕ್ಷಿಸಲು ಏನು ಮಾಡುತ್ತಿದ್ದೀರಿ?; ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ನವದೆಹಲಿ, ಜನವರಿ 7: ದೆಹಲಿ ಗಡಿ ಪ್ರದೇಶದಲ್ಲಿ ಸುಮಾರು ಒಂದೂವರೆ ತಿಂಗಳಿನಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದಾರೆ. ಆದರೆ ಕೊರೊನಾ ಸೋಂಕಿನಿಂದ ಇವರನ್ನು ರಕ್ಷಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಸೋಂಕಿನ ಸ್ಫೋಟಕ್ಕೆ ಕಾರಣವಾಗಿದ್ದ ತಬ್ಲಿಘಿ ಜಮಾತ್ ಕುರಿತ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ರೈತರ ಪ್ರತಿಭಟನೆ ಕುರಿತು ಮಾತನಾಡಿ, ಸಾವಿರಾರು ರೈತರು ಜಮಾಯಿಸಿರುವ ಪ್ರತಿಭಟನಾ ಸ್ಥಳಗಳಲ್ಲಿಯೂ ಇದೇ ರೀತಿ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಸಾಧ್ಯತೆಯನ್ನು ತಡೆಯಲು ಕೇಂದ್ರ ಯಾವ ಮಾರ್ಗಸೂಚಿಯನ್ನು ಅನುಸರಿಸುತ್ತಿದೆ ಎಂದು ಪ್ರಶ್ನಿಸಿದೆ.
ಇದರೊಂದಿಗೆ, ಎರಡು ವಾರಗಳ ಒಳಗೆ ಕೇಂದ್ರ ಸರ್ಕಾರದಿಂದ ಉತ್ತರ ನಿರೀಕ್ಷಿಸಿ ನೋಟೀಸ್ ನೀಡಿದೆ.

"ತಬ್ಲಿಘಿ ಜಮಾತ್ ಸಭೆಯಿಂದಾದ ಸಮಸ್ಯೆ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿರುವ ಈ ಪ್ರತಿಭಟನೆಯಿಂದ ಪುನರ್ ಸೃಷ್ಟಿಯಾಗಬಹುದು. ಕೇಂದ್ರ ಇದಕ್ಕೆ ಯಾವ ಕ್ರಮ ಕೈಗೊಂಡಿದೆ" ಎಂದು ಮುಖ್ಯನ್ಯಾಯಮೂರ್ತಿ ಎಸ್ ಎ ಬೊಬ್ಡೆ ಪ್ರಶ್ನಿಸಿದ್ದಾರೆ.
ಬೊಬ್ಡೆ, ಎಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಹ್ಮಣಿಯನ್ ಒಳಗೊಂಡ ತ್ರಿಸದಸ್ಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿ, ತಬ್ಲಿಘಿ ಜಮಾತ್ ನಿಂದಾದ ಅನುಭವದಿಂದ ನೀವು ಕಲಿತಿದ್ದೀರಾ? ಅಲ್ಲಿಂದ ಕೊರೊನಾ ಸ್ಫೋಟ ಹೇಗೆ ಆಯಿತು ಎಂಬುದನ್ನು ಅರಿತಿದ್ದೀರಾ ಎಂದು ಪ್ರಶ್ನಿಸಿತು.
ರೈತರನ್ನು ಕೊರೊನಾದಿಂದ ದೂರವುಳಿಸಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಮುಂದೆ ಆಗಬೇಕಿರುವುದೇನು ಎಂಬುದರ ಕುರಿತು ಎರಡು ವಾರಗಗಳ ಒಳಗೆ ವರದಿ ನೀಡುವುದಾಗಿ ಮೆಹ್ತಾ ತಿಳಿಸಿದ್ದಾರೆ.












Click it and Unblock the Notifications