ಲೈಂಗಿಕ ಕಿರುಕುಳ ಕೇಸ್: ಅಸಾರಾಮ್ ಬಾಪು ಜಾಮೀನು ಅರ್ಜಿ ತಿರಸ್ಕೃತ
ನವದೆಹಲಿ, ಜುಲೈ 15: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಗುಜರಾತಿನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅಸಾರಾಂ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ(ಜುಲೈ 15)ದಂದು ತಿರಸ್ಕರಿಸಿದೆ.
'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಜಾರಿಯಲ್ಲಿದ್ದು, 210 ಸಾಕ್ಷಿಗಳ ಹೇಳಿಕೆ ಪಡೆಯುವುದು ಬಾಕಿಯಿದೆ' ಎಂದು ಗುಜರಾತ್ ಸರ್ಕಾರದ ಪರ ಕೋರ್ಟಿಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಸ್ಟೀಸ್ ಎನ್. ವಿ ರಮಣ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಈ ಬಗ್ಗೆ ಕೆಳ ಹಂತದ ನ್ಯಾಯಾಲವು ವಿಚಾರಣೆಯನ್ನು ಮುಂದುವರೆಸುವಂತೆ ಸೂಚಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಅಸಾರಾಂ ಬಾಪು ಅರ್ಜಿಯನ್ನು ತಿರಸ್ಕರಿಸಿತು.

ಅಸಾರಾಂ ಬಾಪು ಹಾಗೂ ಅವರ ಪುತ್ರ ನಾರಾಯಣ ಸಾಯಿ ವಿರುದ್ಧ ಸೂರತ್ ಮೂಲದ ಇಬ್ಬರು ಸೋದರಿಯರು ಸಲ್ಲಿಸಿರುವ ಪ್ರತ್ಯೇಕ ಅರ್ಜಿ ಇದಾಗಿದೆ. ಅಸಾರಾಂ ಹಾಗೂ ನಾರಾಯಣ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ, ಬೆದರಿಸಿ ಒತ್ತೆಯಾಳಾಗಿ ಇಟ್ಟುಕೊಂಡ ಆರೋಪಗಳನ್ನು ಹೊರೆಸಲಾಗಿದೆ.
ಜೈಲಿನಲ್ಲಿರುವ ಅಸಾರಾಂ ಬಾಪು: 2013ರ ಅತ್ಯಾಚಾರ ಪ್ರಕರಣದಲ್ಲಿ ಏಪ್ರಿಲ್ 25,2018ರಂದು ಜೋಧಪುರದ ನ್ಯಾಯಾಲಯವು ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪ್ರಾಪ್ತ ಬಾಲಕಿಯ ಮೇಲೆ ಐದು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿದೆ.
ಚಹಾದಂಗಡಿಯೊಂದರಲ್ಲಿ ಎಂಜಲಿನ ಗ್ಲಾಸು ತೊಳೆದು, ಗ್ರಾಹಕರಿಗೆ ಟೀ ಕೊಡುತ್ತಿದ್ದ ಅಸುಮಲ್ ಅಲಿಯಾಸ್ ಅಸಾರಾಮ್ ನಂತರ ಜ್ಞಾನೋದಯ ಪಡೆದು ಅಸಾರಾಂ ಬಾಪು ಆಗಿ ಬೆಳೆದರು. 200ಕ್ಕೂ ಅಧಿಕ ಆಶ್ರಮ, ಸಾವಿರಾರು ಕೋಟಿ ರು ಒಡೆಯ. ಸ್ವಯಂ ಘೋಷಿತ ದೇವ ಮಾನವನಾಗಿ ಹಲವಾರು ದೇಶಗಳಲ್ಲಿ ಭಕ್ತರನ್ನು ಹೊಂದಿರುವ ಬಾಪುಗೆ ಮೈತುಂಬಾ ಹಗರಣಗಳೇ ತುಂಬಿದೆ, ಶ್ರೀಮಂತ ಧಾರ್ಮಿಕ ಗುರುವಿನ ಎಲ್ಲಾ ಕುಕೃತ್ಯಗಳಲ್ಲಿ ಆತನ ಪುತ್ರ ನಾರಾಯಣ ಸಾಯಿ ಕೂಡಾ ಭಾಗಿಯಾಗಿ, ಜೈಲುವಾಸಿಯಾಗಿದ್ದಾರೆ.












Click it and Unblock the Notifications