ಸೌದಿ ಯುವರಾಜನ ವೆಲ್ ಕಮ್ ಗೆ ಖುದ್ದು ಮೋದಿಯೇ ಏರ್ ಪೋರ್ಟ್ ಗೆ
Recommended Video
ನವದೆಹಲಿ, ಫೆಬ್ರವರಿ 19: ಸೌದಿಯ ಯುವ ರಾಜ ಮೊಹ್ಮದ್ ಬಿನ್ ಸಲ್ಮಾನ್ ಮಂಗಳವಾರ ನವದೆಹಲಿಗೆ ಆಗಮಿಸಿದ್ದಾರೆ. ಎರಡು ದಿನಗಳ ಅವರ ಭೇಟಿಯ ವೇಳೆ ಎರಡೂ ದೇಶಗಳ ಮಧ್ಯೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುತ್ತದೆ. ಹಾಗೂ ಇದೇ ಸಂದರ್ಭದಲ್ಲಿ ಭಯೋತ್ಪಾದನೆ ವಿರುದ್ಧ ಪ್ರಬಲ ಸಂದೇಶ ರವಾನಿಸಲಾಗುತ್ತದೆ.
ರಾತ್ರಿ ಒಂಬತ್ತು ಗಂಟೆಗೆ ಸ್ವಲ್ಪ ಮುಂಚೆ ನವದೆಹಲಿ ತಲುಪಿದ ಸೌದಿಯ ಯುವರಾಜ ಸಲ್ಮಾನ್ ಗೆ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು. ಇತರ ಮುಖ್ಯ ಅಧಿಕಾರಿಗಳ ಜತೆಗೆ ಸ್ವತಃ ಪ್ರಧಾನಿಯೇ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರಿದರು. ವಿಮಾನದಿಂದ ಸಲ್ಮಾನ್ ಇಳಿಯುತ್ತಿದ್ದಂತೆ ಆಲಂಗಿಸಿಕೊಂಡು ಸ್ವಾಗತಿಸಿದರು.
ಭಾರತದಲ್ಲಿ 44 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿರುವ ಸೌದಿ
ಆ ನಂತರ, ಸೌದಿ ಅರೇಬಿಯಾದ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರಿಗೆ ಸ್ವಾಗತ ಕೋರಲು ಭಾರತ ಸಂತೋಷ ಪಡುತ್ತದೆ ಎಂಬ ಟ್ವೀಟ್ ಕೂಡ ಪ್ರಧಾನಿ ಮೋದಿ ಮಾಡಿದ್ದಾರೆ. ವಿದೇಶಾಂಗ ಸಚಿವಾಲಯವು ಈ ಭೇಟಿಯನ್ನು, ಯುವರಾಜರ ಮೊದಲ ದ್ವಿಪಕ್ಷೀಯ ಭೇಟಿ- ಎರಡು ದೇಶಗಳ ಮಧ್ಯದ ದ್ವಿಪಕ್ಷೀಯ ಸಂಬಂಧದಲ್ಲಿ "ಹೊಸ ಅಧ್ಯಾಯ" ಎಂದು ಬಣ್ಣಿಸಿದೆ.
ಎರಡು ದೇಶಗಳ ಮಧ್ಯೆ ಉದ್ವಿಗ್ನತೆ ಶಮನ ಅಗಬೇಕು
ಕಳೆದ ಸಂಜೆ ಅಂದರೆ ಸೋಮವಾರದಂದು ಮೊಹ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನ ಪ್ರವಾಸ ಮುಗಿಸಿದ್ದರು. ಅದು ಅವರ ದಕ್ಷಿಣ ಏಷ್ಯಾ ಹಾಗೂ ಚೀನಾ ಪ್ರವಾಸದ ಮೊದಲ ನಿಲುಗಡೆ ಆಗಿತ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾದ ಭಯೋತ್ಪಾದನಾ ದಾಳಿ ಬಗ್ಗೆ ಮಾತನಾಡಿದ್ದ ಅವರು, ಎರಡು ದೇಶಗಳ ಮಧ್ಯೆ ಉದ್ವಿಗ್ನ ವಾತಾವರಣ ಶಮನ ಆಗಬೇಕು ಎಂದಿದ್ದರು.
ಮೂರು ಸಾವಿರ ಕಿಲೋಮೀಟರ್ ವಿಮಾನದಲ್ಲಿ ಪ್ರಯಾಣ
ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ರನ್ನು ಎಂಬಿಎಸ್ ಅಂತ ಕೂಡ ಕರೆಯಲಾಗುತ್ತದೆ. ಪಾಕಿಸ್ತಾನದಿಂದ ಸೌದಿ ಅರೇಬಿಯಾಗೆ ತೆರಳಿದ್ದ ಅವರು, ಮನೆಯಲ್ಲಿ ಕೆಲ ಕಾಲ ಕಳೆದು, ಮತ್ತೆ ಭಾರತ ಉಪ ಖಂಡಕ್ಕೆ ಬರುವ ಸಲುವಾಗಿಯೇ ಮೂರು ಸಾವಿರ ಕಿಲೋಮೀಟರ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಪಾಕಿಸ್ತಾನವೆಂದರೆ ಲವ್ವೋ ಲವ್ವು ಎಂದ ಸೌದಿ ದೊರೆ
ವಿವಿಧ ಒಪ್ಪಂದಗಳಿಗೆ ಎರಡೂ ದೇಶದ ಸಹಿ
ಮುಂದಿನ ಇಪ್ಪತ್ತಾರು ಗಂಟೆಗಳ ಕಾಲ ನವದೆಹಲಿಯಲ್ಲಿ ಅವರು ಇರಲಿದ್ದಾರೆ. ಹೂಡಿಕೆ, ಪ್ರವಾಸೋದ್ಯಮ, ವಸತಿ, ಪ್ರಸಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕುವ ಸಾಧ್ಯತೆಗಳಿವೆ. ಮೂರು ವರ್ಷದ ಹಿಂದೆ ಪ್ರಧಾನಿ ಮೋದಿ ರಿಯಾದ್ ಗೆ ತೆರಳಿದ್ದಾಗ ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವವರ ಬಗ್ಗೆ ಗುಪ್ತಚರ ಮಾಹಿತಿ ಕಲೆ ಹಾಕುವ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗಿನಿಂದ ಸಕ್ರಿಯವಾದ ಗುಪ್ತಚರ ಹಾಗೂ ಭದ್ರತಾ ಸಹಕಾರ ಎರಡೂ ದೇಶಗಳ ಮಧ್ಯೆ ಇದೆ. ಲಷ್ಕರ್ ಇ ತೈಬಾದ ಅಬು ಸೂಪ್ಯಾನ್ ಹಾಗೂ ಇಂಡಿಯನ್ ಮುಜಾಹಿದೀನ್ ಸದಸ್ಯ ಝೈನುಲ್ ಅಬೆದಿನ್ ನನ್ನು ಭಾರತಕ್ಕೆ ಕಳುಹಿಸಿದ್ದು ಸೇರಿ ನಾನಾ ಉದಾಹರಣೆಗಳಿವೆ.
ಭಾರತದ ಜತೆಗೆ ಪಾಕಿಸ್ತಾನದ ಹೋಲಿಕೆ ಬೇಡ
ಪಾಕಿಸ್ತಾನಕ್ಕೆ ಬಂದಿದ್ದ ಯುವರಾಜ ನೇರವಾಗಿ ಭಾರತಕ್ಕೆ ಬಾರದೆ, ವಾಪಸ್ ರಿಯಾದ್ ಗೆ ತೆರಳಿ, ಅಲ್ಲಿಂದ ದೆಹಲಿಗೆ ಬಂದಿದ್ದಾರೆ. ಭಾರತದ ಭಾವನೆಗಳಿಗೆ ಸ್ಪಂದಿಸುವ ಬಗೆ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ವೇಳೆ ಸೌದಿ ಅಧಿಕಾರಿಗಳು ಕೂಡ, ಭಾರತದೊಂದಿಗಿನ ಸಂಬಂಧವನ್ನು ಪಾಕಿಸ್ತಾನದ ಜೊತೆಗೆ ಹೋಲಿಕೆ ಮಾಡಬೇಡಿ ಎಂದಿದ್ದಾರೆ. ಪಾಕಿಸ್ತಾನದ ಆರ್ಥಿಕತೆಯ ನಗದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಪ್ಪತ್ತು ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಅಲ್ಲಿ ಮಾಡಲಾಗಿದೆ. ಭಾರತಕ್ಕೆ ಆರ್ಥಿಕತೆ ಸಮಸ್ಯೆ ಏನಿಲ್ಲ. ಇನ್ನಷ್ಟು ಚೈತನ್ಯ ತುಂಬುವ ಸಲುವಾಗಿ ಹೂಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.