ಸತ್ಯೇಂದ್ರ ಜೈನ್ ಬಂಧನ: ಬಿಜೆಪಿ ವ್ಯಂಗ್ಯ, ರಾಜಕೀಯ ಪ್ರೇರಿತ ಎಂದ ಆಪ್
ನವದೆಹಲಿ, ಮೇ 30; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾದ ಸತ್ಯೇಂದ್ರ ಜೈನ್ 2015-16ರಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ಜೈನ್ ಮತ್ತು ಅವರ ಕುಟುಂಬದ ವಿರುದ್ಧ ಆಗಸ್ಟ್ 2017 ರಲ್ಲಿ 1.62 ಕೋಟಿ ರೂಪಾಯಿವರೆಗಿನ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು. ಈಗ ಸಚಿವರ ಬಂಧನವಾಗಿರುವುದು ರಾಜಕೀಯ ಆರೋಪಗಳಿಗೆ ಕಾರಣವಾಗಿದೆ.
2011-12ರಲ್ಲಿ 11.78 ಕೋಟಿ ರೂಪಾಯಿ ಮತ್ತು 2015-16 ರಲ್ಲಿ 4.63 ಕೋಟಿ ರೂಪಾಯಿ ಲಾಂಡ್ರಿಂಗ್ ಮಾಡಲು ಜೈನ್ ಮತ್ತು ಅವರ ಕುಟುಂಬವು ನಾಲ್ಕು ಶೆಲ್ ಸಂಸ್ಥೆಗಳನ್ನು ಯಾವುದೇ ನೈಜ ವ್ಯವಹಾರವಿಲ್ಲದ ಕಂಪನಿಗಳನ್ನು ಸ್ಥಾಪಿಸಿದೆ ಎಂದು ಸಿಬಿಐ ಆರೋಪಿಸಿದೆ. ಸಿಬಿಐನ ಪ್ರಥಮ ಮಾಹಿತಿ ವರದಿ ಅಥವಾ ಪ್ರಾಥಮಿಕ ತನಿಖಾ ವರದಿ (ಎಫ್ಐಆರ್) ಆಧರಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.

ಹೊಸ ಸಂಘರ್ಷಕ್ಕೆ ನಾಂದಿ
ಸಚಿವ ಸತ್ಯೇಂದ್ರ ಜೈನ್ ಬಂಧನದಿಂದ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕೇಂದ್ರ ಸರ್ಕಾರದ ನಡುವೆ ಹೊಸ ಸಂಘರ್ಷವನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ರಾಜಕೀಯ ಉದ್ದೇಶಕ್ಕಾಗಿಯೇ ಬಿಜೆಪಿ ಆಪ್ ಸಚಿವರನ್ನು ಬಂಧಿಸಿದೆ ಎಂದು ಆಪ್ ಮುಖಂಡರು ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಇತರ ವಿರೋಧ ಪಕ್ಷದ ನಾಯಕರಾದ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣದ ಕೆ ಚಂದ್ರಶೇಖರ ರಾವ್ ಕೇಂದ್ರ ಸರ್ಕಾರ ಕಿರುಕುಳ ನೀಡಲು ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ಸಚಿವರ ಬಂಧನ ರಾಜಕೀಯ ಪ್ರೇರಿತ
ಸತ್ಯೇಂದ್ರ ಜೈನ್ ಎಎಪಿ ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
"ಸತ್ಯೇಂದ್ರ ಜೈನ್ ವಿರುದ್ಧ ಎಂಟು ವರ್ಷಗಳಿಂದ ನಕಲಿ ಕೇಸ್ ನಡೆಸಲಾಗುತ್ತಿದೆ. ಇದುವರೆಗೆ ಜಾರಿ ನಿರ್ದೇಶನಾಲಯ (ಇಡಿ) ಹಲವು ಬಾರಿ ವಿಚಾರಣೆ ಮಾಡಿತ್ತು. ಈ ನಡುವೆ ಏನೂ ಸಿಗದ ಕಾರಣ ಇಡಿ ಹಲವು ವರ್ಷಗಳಿಂದ ವಿಚಾರಣೆ ಮಾಡುವುದನ್ನು ನಿಲ್ಲಿಸಿತ್ತು. ಸತ್ಯೇಂದ್ರ ಜೈನ್ ಹಿಮಾಚಲದ ಚುನಾವಣಾ ಉಸ್ತುವಾರಿಯಾದ ಬಳಿಕೆ ಮತ್ತೆ ಶುರು ಮಾಡಿದೆ" ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಹಿಮಾಚಲ ಪ್ರದೇಶ ಚುನಾವಣೆಗೆ ಆಪ್ ತಯಾರಿ
ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಆಪ್ ಗೆಲುವಿನ ಮೇಲೆ ಕಣ್ಣಿಟ್ಟಿದೆ, ಪಂಜಾಬ್ನಲ್ಲಿ ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಆಪ್ ತನ್ನ ವಿಜಯದ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.
ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಅವರ ಕುಟುಂಬದ ಒಡೆತನದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಸುಮಾರು ಎರಡು ತಿಂಗಳ ನಂತರ ಬಂಧಿಸಿದೆ.

ಆಪ್ಗೆ ಹಿನ್ನೆಡೆ, ವ್ಯಂಗ್ಯವಾಡಿದ ಬಿಜೆಪಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸತ್ಯೇಂದ್ರ ಜೈನ್, ದೆಹಲಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೈಗಾರಿಕೆ, ಗೃಹ, ವಿದ್ಯುತ್, ನೀರು, ನಗರಾಭಿವೃದ್ದಿ, ನೀರಾವರಿ ಖಾತೆಗಳನ್ನು ಹೊಂದಿರುವ ಸತ್ಯೇಂದ್ರ ಜೈನ್ ಬಂಧನ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆ ತಂದಿದೆ.
ಆಪ್ ಸಚಿವ ಸತ್ಯೇಂದ್ರ ಜೈನ್ ಬಂಧನಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪ್ರಾಮಾಣಿಕ ಪಕ್ಷದ ಪ್ರಾಮಾಣಿಕ ಶಾಸಕನನ್ನು ಇಡಿ ಬಂಧಿಸಿದೆ ಎಂದು ವ್ಯಂಗ್ಯವಾಡಿದೆ.












Click it and Unblock the Notifications