ಲೋಕಸಭೆಯಲ್ಲಿ ಗದ್ದಲ: ಇಬ್ಬರು ಸಂಸದರ ಅಮಾನತು
ನವದೆಹಲಿ, ನವೆಂಬರ್ 25: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದನ್ನು ವಿರೋಧಿಸಿ ಲೋಕಸಭೆಯಲ್ಲಿ ಬಾವಿಗಿಳಿದು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ನ ಇಬ್ಬರು ಸಂಸದರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೋಮವಾರ ಅಮಾನತುಗೊಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ಸಂಸತ್ ಎದುರು ಸೋಮವಾರ ಪ್ರತಿಭಟನೆ ನಡೆಸಿತ್ತು, ಬಳಿಕ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲಿಯೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
'ಸಂವಿಧಾನ ಉಳಿಸಿ' ಮತ್ತು 'ಪ್ರಜಾಪ್ರಭುತ್ವ ಉಳಿಸಿ' ಎಂಬ ಬರಹಗಳನ್ನು ಹೊಂದಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. 'ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನಿಲ್ಲಿಸಿ' ಎಂಬ ಕಪ್ಪು ಬ್ಯಾನರ್ ಹಿಡಿದು ಸದನದ ಬಾವಿಗಿಳಿಯಲು ಮುಂದಾದರು. ಮಾರ್ಷಲ್ಗಳ ಜತೆ ಕಾದಾಟಕ್ಕೆ ನಿಂತರು. ಪ್ರತಿಭಟನಾನಿರತ ಸಂಸದರ ಪೈಕಿ ಸಂಸದರಾದ ಹಿಬಿ ಎಡಿನ್ ಮತ್ತು ಟಿ.ಎನ್. ಪ್ರತಾಪನ್ ವರ್ತನೆ ಬಗ್ಗೆ ಅಸಮಾಧಾನಗೊಂಡ ಬಿರ್ಲಾ, ಅವರು ಕ್ಷಮೆ ಕೋರುವಂತೆ ಸೂಚಿಸಿದರು. ಆದರೆ ಅದಕ್ಕೆ ನಿರಾಕರಿಸಿದ್ದರಿಂದ ಅವರನ್ನು ಅಮಾನತುಗೊಳಿಸಿದರು.

ಸದನದಲ್ಲಿ ಅನುಚಿತವಾಗಿ ವರ್ತಿಸುವ ಮೂಲಕ ಕಾಂಗ್ರೆಸ್ ಸದಸ್ಯರು ಲೋಕಸಭೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಮಾನತುಗೊಂಡ ಇಬ್ಬರೂ ಸಂಸದರು ಕೇರಳದವರಾಗಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸೋಮವಾರ ಗದ್ದಲ ಜೋರಾಗಿದ್ದರಿಂದ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ನಂತರ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರಿಯಿತು. ಹೀಗಾಗಿ ಎರಡೂ ಸದನಗಳನ್ನು ಮಂಗಳವಾರ 2 ಗಂಟೆಯವರೆಗೆ ಮುಂದೂಡಲಾಗಿದೆ.
ಸಂಸತ್ತಿನ ಜಂಟಿ ಅಧಿವೇಶನವನ್ನು ಮಂಗಳವಾರ ಬಹಿಷ್ಕರಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಸಂಸತ್ನ ಅಂಬೇಡ್ಕರ್ ಪ್ರತಿಮೆ ಬಳಿ ಬೆಳಿಗ್ಗೆ 10 ಗಂಟೆಯಿಂದ ಪ್ರತಿಭಟನೆ ಆಯೋಜಿಸಿದೆ.
ಕಲಾಪ ಬಹಿಷ್ಕರಿಸುವ ನಿರ್ಧಾರವನ್ನು ಖಂಡಿಸಿರುವ ಬಿಜೆಪಿ, '70ನೇ ಸಂವಿಧಾನದ ದಿನದಂದೇ (ನ.26) ಜಂಟಿ ಸದನವನ್ನು ಬಹಿಷ್ಕರಿಸಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧಪಕ್ಷಗಳು ತೀರ್ಮಾನಿಸಿವೆ. ಇದು ಈ ಪಕ್ಷಗಳಿಂದ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಉಂಟಾಗುತ್ತಿರುವ ಮತ್ತೊಂದು ಅವಮಾನ' ಎಂದು ಹೇಳಿದೆ.












Click it and Unblock the Notifications