ಆ್ಯಸಿಡ್ ಮಾರಾಟಕ್ಕೆ ಕಠಿಣ ನಿಯಮ : ರಾಜನಾಥ ಸಿಂಗ್
ನವದೆಹಲಿ, ಡಿ. 24: ಮಹಿಳೆಯರ ಮೇಲೆ ಪದೇ ಪದೆ ನಡೆಯುತ್ತಿರುವ ಆ್ಯಸಿಡ್ ದಾಳಿ ಹಿನ್ನೆಲೆಯಲ್ಲಿ ಆ್ಯಸಿಡ್ ಮಾರಾಟಕ್ಕೆ ಕಠಿಣ ನಿಯಮಗಳನ್ನು ರೂಪಿಸಬೇಕೆಂಬ ಆಗ್ರಹ ದೇಶದಲ್ಲಿ ಬಹಳ ದಿನಗಳಿಂದ ಕೇಳಿಬರುತ್ತಿದೆ.
ನವದೆಹಲಿಯಲ್ಲಿ ಈಚೆಗಷ್ಟೇ ವೈದ್ಯೆಯೊಬ್ಬರ ಮೇಲೆ ನಡೆದ ಆ್ಯಸಿಡ್ ದಾಳಿ ಹಿನ್ನೆಲೆಯಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ್ಯಸಿಡ್ ಮಾರಾಟಕ್ಕಾಗಿ ಹೊಸ ನಿಯಮ ರೂಪಿಸಲಾಗುವುದು ಎಂದು ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್ ಬುಧವಾರ ತಿಳಿಸಿದ್ದಾರೆ. [ಯುವತಿಯ ರೇಪ್, ಆ್ಯಸಿಡ್ ಕುಡಿಸಿ ಹತ್ಯೆ]
ಆ್ಯಸಿಡ್ ಮಾರಾಟಕ್ಕೆ ನಿಯಮಗಳು ಯಾವುವು..?
- ಸಂಗ್ರಹಕಾರರು ಹಾಗೂ ಮಾರಾಟಗಾರರು ಹೆಸರು ನೋಂದಾಯಿಸಿಕೊಂಡು ಅನುಮತಿ ಪಡೆಯಬೇಕು
- ಜಿಲ್ಲಾ ಆಡಳಿತದಿಂದ ಪರವಾನಗಿ ಪಡೆಯಬೇಕು
- ಖರೀದಿದಾರರ ಗುರುತು ಪತ್ರ, ವಿಳಾಸ, ವೈಯಕ್ತಿಕ ವಿವರಗಳನ್ನು ಮಾರಾಟಗಾರರು ದಾಖಲಿಸಿಕೊಳ್ಳಬೇಕು

ಜೀವಾವಧಿ ಅಥವಾ ಮರಣದಂಡನೆ : ಆ್ಯಸಿಡ್ ದಾಳಿಯನ್ನು ಘೋರ ಅಪರಾಧ ಎಂದು ಪರಿಗಣಿಸಲಾಗುವುದು. ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ನೀಡುವ ಕುರಿತು ಯೋಚಿಸಲಾಗುತ್ತಿದೆ. ಘೋರ ಅಪರಾಧಗಳ ತನಿಖೆ ಹಾಗೂ ಈ ಕುರಿತು ಸಲ್ಲಿಸಿದ ಮೇಲ್ಮನವಿ ಕುರಿತು ಸಮಯ ನಿಗದಿಪಡಿಸಲಾಗುವುದು ಎಂದು ರಾಜನಾಥ ಸಿಂಗ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 376A-D ಕಾನೂನಿನಡಿ ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ ನಡೆಸಬೇಕು. 60 ದಿನಗಳೊಳಗೆ ವಿಚಾರಣೆ ಅಂತ್ಯಗೊಳ್ಳಬೇಕು. ಜೊತೆಗೆ ಇತರ ಸೌಲಭ್ಯಗಳನ್ನು ನೀಡಲು ಕೇಂದ್ರ ಗೃಹ ಸಚಿವಾಲಯ ಯೋಚಿಸುತ್ತಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯದೊಂದಿಗೆ ಚರ್ಚಿಸಲಾಗುವುದು ಎಂದು ರಾಜನಾಥ ಸಿಂಗ್ ತಿಳಿಸಿದ್ದಾರೆ. [ಯುವತಿಗೆ ಆ್ಯಸಿಡ್ ಕುಡಿಸಿ ಸಮುದ್ರಕ್ಕೆ ತಳ್ಳಿದರು]
ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಏನೇನು ಪರಿಹಾರ?
- ಅಂಗವಿಕಲರು ಅಥವಾ ಸಾಮರ್ಥ್ಯ ರಹಿತರ ವರ್ಗದಲ್ಲಿ ಸೇರ್ಪಡೆ
- ಉಚಿತ ಚಿಕಿತ್ಸೆಗಾಗಿ ಕೇಂದ್ರ ಪರಿಹಾರ ನಿಧಿಯಿಂದ ಹಣ
- ಸ್ವ ಉದ್ಯೋಗ ಅವಕಾಶ, ವಿವಿಧ ಉದ್ಯೋಗಗಳ ತರಬೇತಿ,
- ಮೀಸಲಾತಿ ಇನ್ನಿತರ ಸೌಲಭ್ಯ
- ಪುನರ್ವಸತಿ ಕೇಂದ್ರ ನಿರ್ಮಾಣ












Click it and Unblock the Notifications