ಅಸಮಾಧಾನಗೊಂಡು ರಕ್ಷಣಾ ಸಮಿತಿ ಸಭೆಯಿಂದ ಹೊರನಡೆದ ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 17: ಬುಧವಾರ ನಡೆದ ಸಂಸದೀಯ ರಕ್ಷಣಾ ಸಮಿತಿಯ ಸಭೆಯಿಂದ ಅಸಮಾಧಾನಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊರನಡೆದಿದ್ದಾರೆ. ಪೂರ್ವ ಲಡಾಖ್ ಗಡಿಯಲ್ಲಿ ಚೀನಾದ ಅತಿಕ್ರಮಣ ಮತ್ತು ಸೈನಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ಸಂಬಂಧ ವಿಚಾರ ಪ್ರಸ್ತಾಪಿಸಲು ಅವಕಾಶವೇ ನೀಡದ ಕಾರಣದಿಂದ ಅವರು ಕೋಪಗೊಂದು ಸಭಾತ್ಯಾಗ ಮಾಡಿದರು ಎನ್ನಲಾಗಿದೆ.
ರಾಷ್ಟ್ರೀಯ ಭದ್ರತೆಯಂತಹ ಗಂಭೀರ ಸಂಗತಿಗಳನ್ನು ಚರ್ಚಿಸುವ ಬದಲು ಸೇನಾ ಪಡೆಗಳ ಸಮವಸ್ತ್ರದ ಬದಲು ಚರ್ಚೆ ಮಾಡುವ ಮೂಲಕ ಸಮಿತಿಯ ವೇಳೆಯನ್ನು ವಿನಾಕಾರಣ ವ್ಯರ್ಥ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬುಧವಾರ ನಡೆದ ಸಭೆಯ ವೇಳೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹಾಜರಾತಿಯಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಮವಸ್ತ್ರಗಳ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು. ಇದರ ಮಧ್ಯಪ್ರವೇಶ ಮಾಡಿದ ರಾಹುಲ್ ಗಾಂಧಿ, ರಾಜಕೀಯ ನಾಯಕತ್ವವು ಸಮವಸ್ತ್ರದ ಬಗ್ಗೆ ಚರ್ಚಿಸುವ ಬದಲು ಮೊದಲು ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಚರ್ಚಿಸಬೇಕು ಮತ್ತು ಲಡಾಖ್ನಲ್ಲಿ ಚೀನಾ ಜತೆ ಕಾದಾಡುತ್ತಿರುವ ಸೈನಿಕರ ಬಲವನ್ನು ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ಸಮಾಲೋಚಿಸಬೇಕು ಎಂದು ಸಲಹೆ ನೀಡಿದರು.

ಆದರೆ ಸಮಿತಿ ಅಧ್ಯಕ್ಷ, ಬಿಜೆಪಿಯ ಜುವಲ್ ಒರಾಮ್ ಅವರು ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ರಾಹುಲ್ ಸಭೆಯಿಂದ ಹೊರನಡೆದರು. ಕಾಂಗ್ರೆಸ್ನ ಇನ್ನಿಬ್ಬರು ಸದಸ್ಯರಾದ ರಾಜೀವ್ ಸಟಾವ್ ಮತ್ತು ರೇವಂತ್ ರೆಡ್ಡಿ ಕೂಡ ತಮ್ಮ ನಾಯಕನನ್ನು ಅನುಸರಿಸಿದರು.












Click it and Unblock the Notifications