ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ಬಗ್ಗೆ ಕೇಂದ್ರಕ್ಕೆ 3 ಪ್ರಶ್ನೆ ಕೇಳಿದ ರಾಹುಲ್ ಗಾಂಧಿ
ನವದೆಹಲಿ, ಜೂನ್ 1: ಭಾರತದಲ್ಲಿ ಕೊರೊನಾ ವೈರಸ್ನಿಂದ ಚೇತರಿಸಿಕೊಂಡವರಲ್ಲಿ ಬ್ಲ್ಯಾಕ್ಫಂಗಸ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಈ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರಕ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡದ ಪರಿಣಾಮವಾಗಿ ರೋಗಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಮಂಗಳವಾರ ಟ್ವೀಟ್ಟರ್ನಲ್ಲಿ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲ ಪ್ರಶ್ನೆಯ ರೂಪದಲ್ಲಿ "ಬ್ಲ್ಯಾಕ್ ಫಂಗಸ್ ರೋಗದ ಪರಿಸ್ಥಿತಿಯ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನು ನೀಡಬೇಕು" ಎಂದು ಆಗ್ರಹಿಸಿದ್ದಾರೆ. "ಆಂಫೊಟೆರಿಸಿನ್ ಬಿ ಕೊರತೆಯಾಗಿರುವ ಕಾರಣದಿಂದಾಗಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಮತ್ತು ಈ ಸೋಂಕಿಗೆ ಒಳಗಾದ ರೋಗಿಗಳಿಗೆ ನೀಡಲಾಗುತ್ತಿರುವ ಔಷಧಿಯ ವಿಧಾನ ಯಾವುದು?" ಮತ್ತು ಮೂರನೆಯದಾಗಿ "ಈ ಸಂದರ್ಭದಲ್ಲಿ ಸರ್ಕಾರ ಔಪಚಾರಿಕತೆಯನ್ನಷ್ಟೇ ಮಾಡುತ್ತಿದ್ದು ಸೂಕ್ತ ಚಿಕಿತ್ಸೆಯನ್ನು ಯಾವ ಕಾರಣಕ್ಕೆ ನೀಡುತ್ತಿಲ್ಲ?" ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸಚಿವ ಸದಾನಂದ ಗೌಡ ಸೋಮವಾರ ಆಂಫೊಟೆರಿಸಿನ್ ಬಿ ಲಸಿಕೆಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. 30,100 ವಯಲ್ಸ್ಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೀರ್ಘಕಾಲದವರೆಗೆ ಸ್ಟಿರಾಯ್ಡ್ ನೀಡಿದ ರೋಗಿಗಳಲ್ಲಿ ಈ ಬ್ಲ್ಯಾಕ್ ಫಂಗಸ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ತೀವ್ರ ಮದುಮೇಹ ಸಮಸ್ಯೆಯಿಂದ ಬಳಲುತ್ತಿರುವವರು, ದೀರ್ಘಕಾಲದವರೆಗೆ ಆಸ್ಪತ್ರೆಗೆ ದಾಖಲಾದವರು, ಆಮ್ಲಜನಕದ ಬೆಂಬಲ ಅಥವಾ ವೆಂಟಿಲೇಟರ್ನಲ್ಲಿದ್ದವರು ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಚತೆಯ ಕೊರತೆಯೂ ಬ್ಲ್ಯಾಕ್ ಫಂಗಸ್ಗೆ ಕಾರಣವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಾಕಷ್ಟು ಜನರಗೆ ಇದು ಮಾರಕವಾಗಿದೆ.
ಕರ್ನಾಟಕದಲ್ಲಿಯೂ ಬ್ಲ್ಯಾಕ್ ಫಂಗಸ್ ಸೋಂಕಿಗೆ ಲಸಿಕೆಯ ಕೊರತೆಯಿರುವುದನ್ನು ಆರೋಗ್ಯ ಸಚಿವ ಡಿ ಸುಧಾಕರ್ ಸೋಮವಾರ ತಿಳಿಸಿದ್ದಾರೆ. ರಾಜ್ಯದಲ್ಲಿ 1250 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕಾಣಿಸಿಕೊಂಡಿದೆ. ನಿತ್ಯವೂ 8-10 ಸಾವಿರ ವಯಲ್ಸ್ಗಳಷ್ಟು ಲಸಿಕೆ ರಾಜ್ಯಕ್ಕೆ ಅಗತ್ಯವಿದ್ದು ಪೂರೈಕೆಗಾಗಿ ಕೇಂದ್ರ ಸಚಿವ ಸದಾನಂದ ಗೌಡರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವ ಸುಧಾಕರ್ ಹೇಳಿದ್ದಾರೆ.












Click it and Unblock the Notifications