ರಾಹುಲ್ ಯುಗಾರಂಭ: ಶುಭಹಾರೈಕೆ ಜೊತೆಯಲ್ಲೇ ಕಾಲೆಳೆತವೂ ಜೋರು!
ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರು ಇಂದು(ಡಿ.16) ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದು, ಇಂದಿನಿಂದ ರಾಹುಲ್ ಯುಗಾರಂಭವಾಗಲಿದೆ. ನವದೆಹಲಿಯಲ್ಲಿಂದು ರಾಹುಲ್ ಪಟ್ಟಾಭಿಷೇಕವಿರುವದರಿಂದ ಈಗಾಗಲೇ ಎಐಸಿಸಿ ಮುಖ್ಯಕಚೇರಿ ಮುಂದೆ ರಾಹುಲ್ ಅಭಿಮಾನಿಗಳು ಜಮಾಯಿಸಿದ್ದಾರೆ.
ಕಾಂಗ್ರೆಸ್ ನ ಅತ್ಯುನ್ನತೆ ಹುದ್ದೆ ಪಡೆಯಲಿರುವ ರಾಹುಲ್ ಗಾಂಧಿಯವರಿಗೆ ಒಂದೆಡೆ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದ್ದರೆ, ಅಷ್ಟೇ ಪ್ರಮಾಣದ ಟೀಕೆಯೂ ಎದ್ದಿದೆ. ಕುಟುಂಬ ರಾಜಕಾರಣದ ಕುರಿತು ಸಾಮಾಜಿಕ ಜಾಲತಾಣದಗಳಲ್ಲಿ ದನಿ ಎತ್ತಿರುವ ಹಲವರು, 'ಇಂಥದೊಂದು ದಿನ ಬಂದೇ ಬರುತ್ತದೆಂದು ರಾಹುಲ್ ಗಾಂಧಿ ಹುಟ್ಟಿದಾಗಲೇ ಗೊತ್ತಿತ್ತು' ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಅನ್ನು ರಾಹುಲ್ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಮತ್ತಷ್ಟು ಜನ ಕೊಂಡಾಡಿದ್ದಾರೆ ಕೂಡ. ಒಟ್ಟಿನಲ್ಲಿ ಈ ಎಲ್ಲ ಶುಭಹಾರೈಕೆ, ಟೀಕೆ, ಕಾಲೆಳೆತಗಳ ನಡುವಲ್ಲೇ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
|
ರಾಹುಲ್ ಗಾಂಧಿ ಪ್ರಧಾನಿಯಾಗಬೇಕಿದೆ!
ಭಾರತದಲ್ಲಿರುವ ಜನರಿಗೆ ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ನೋಡುವ ಆಸೆ. ಅವರು ಅವರ ತಂದೆಯ ಹಾದಿಯನ್ನು ಪಾಲಿಸುತ್ತಾರೆಂದು ನನಗೆ ಗೊತ್ತು. ಅವರು ತಮ್ಮ ದೇಶದ ಜನರ ಶ್ರೇಯಸ್ಸಿಗೆ ಶ್ರಮಿಸಲಿದ್ದಾರೆ. 2014 ರ ಚುನಾವಣೆಯಲ್ಲಿ ಏನಾಯಿತೋ ಆ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಕಾಂಗ್ರೆಸ್ ಅನ್ನು ಹೊಸ ಔನ್ನತ್ಯಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಆಯೇಶ್ ಎಂಬುವವರು ಟ್ವೀಟ್ ಮಾಡಿ ಶುಭಹಾರೈಸಿದ್ದಾರೆ.
|
ಅಭಿನಂದನೆಗಳು ರಾಹುಲ್ ಗಾಂಧಿಯವರಿಗೆ
ಪ್ರತಿದಿನವೂ ನಿನ್ನೆಯ ಆತಂಕವನ್ನು ಮರೆತು ಬದುಕಲು ಒಂದು ಹೊಸ ಅವಕಾಶ. ಹೊಸದಿನದ ಅವಕಾಶವನ್ನು ಬಳಸಿಕೊಂಡು ನಾಳೆಯನ್ನು ಸುಂದರಗೊಳಿಸುವ ಸಂಕಲ್ಪ ಮಾಡಬೇಕಿದೆ. ನಿಮ್ಮ ನಿನ್ನೆಗಳು ನಿಮ್ಮ ನಾಳೆಯನ್ನು ಹಾಳುಮಾಡದಿರಲಿ. ಅಭಿನಂದನೆಗಳು ರಾಹುಲ್ ಗಾಂಧಿಯವರಿಗೆ ಎಂದು ಅಮರ್ ಸಿಂಗ್ ಚೌಹಾಣ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ರಾಹುಲ್ ನೇತೃತ್ವದಲ್ಲಿ ಉನ್ನತಿಗೇರಲಿ ಕಾಂಗ್ರೆಸ್
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಮತ್ತಷ್ಟು ಪ್ರಗತಿ ಹೊಂದಲಿದೆ. ನಾವೆಲ್ಲರೂ ಒಟ್ಟಾಗಿ ನಿಂತು ದೇಶ ಸೇವೆ ಮಾಡಬೇಕಿದೆ. ಎಲ್ಲರ ಉದ್ದೇಶವೂ ಕಾಂಗ್ರೆಸ್ ಅನ್ನು ಬೆಳೆಸುವುದೇ ಆಗಿದೆ ಎಂದು ಅಲೋಕ್ ರಾಜನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
47 ವರ್ಷದ ಹಿಂದೇ ಗೊತ್ತಿತ್ತು!
ಇಂಥದೊಂದು ದಿನ ಬರುತ್ತೆ ಅಂತ 47 ವರ್ಷದ ಹಿಂದೆ ರಾಹುಲ್ ಗಾಂಧಿ ಜನಿಸಿದಾಗಲೇ ಗೊತ್ತಿತ್ತು! ಅಂದಮೇಲೆ ಈ ನಾಟಕಗಳೆಲ್ಲ ಯಾಕೆ? ಕಾಂಗ್ರೆಸ್ಸಿನಲ್ಲಿ ಪ್ರತಿಭೆ, ಸಾಧನೆಗಿಂತ 'ಹುಟ್ಟು' ಬಹಳ ಮಹತ್ವದ್ದು. 2014 ರಲ್ಲಿ ಈ ಕುಟುಂಬ ರಾಜಕಾರಣಕ್ಕೆ ಉತ್ತರ ನೀಡಿದ್ದ ಜನರೇ ಮುಂದೆಯೂ ಉತ್ತರ ನೀಡುತ್ತಾರೆ ಎಂದು ಸಚಿವ್ ಸಿಂಗ್ ಸೆಂಗರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಮನರಂಜನೆ ನಿರೀಕ್ಷಿಸಿ!
ಸರ್ಕಸ್ಸು ಆರಂಭವಾಗಿದೆ. ಜೋಕರ್ ಅನ್ನು ಆರಿಸಿಯಾಗಿದೆ. ಮುಂಬರುವ ಮನರಂಜನೆಗಾಗಿ ಎಲ್ಲ ಭಾರತೀಯರಿಗೂ ಅಭಿನಂದನೆಗಳು ಎಂದು ಕುಚೋದ್ಯ ಮಾಡಿದ್ದಾರೆ ದ್ರುಪದ್ ಮಥುರ್ ಎಂಬುವವರು.
|
ಕಾಂಗ್ರೆಸ್ ಯುಗಾಂತ್ಯ ಆರಂಭ!
ಈ ದಿನ ಭಾರತೀಯರಿಗೆ ನಿಜಕ್ಕೂ ಶುಭದಿನ. ಇನ್ನು ಕೆಲವೇ ದಿನದಲ್ಲಿ ಹಿಂದುಸ್ಥಾನದಲ್ಲಿ ಕಾಂಗ್ರೆಸ್ ಯುಗಾಂತ್ಯವಾಗಲಿದೆ ಎಂದು ವಾರಿಯರ್ ಪ್ರಿನ್ಸೆಸ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.












Click it and Unblock the Notifications