ಸರ್ವೋಚ್ಚ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಬೇಷರತ್ ಕ್ಷಮೆ ಯಾಚನೆ
Recommended Video
ನವದೆಹಲಿ, ಮೇ 08 : 'ಚೌಕಿದಾರ್ ಚೋರ್ ಹೈ' ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ ಎಂದು ಹೇಳಿಕೆ ನೀಡಿ, ನ್ಯಾಯಾಂಗ ನಿಂದನೆ ಆರೋಪಕ್ಕೆ ಒಳಗಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಡೆಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ರಫೇಲ್ ಡೀಲ್ ಹಗರಣದ ಮರುವಿಮರ್ಶಾ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಮರುಪರಿಶೀಲನೆಗೆ ಸ್ವೀಕರಿಸಿದಾಗ, ದೇಶದ ಅತ್ಯುನ್ನತ ನ್ಯಾಯಾಲಯವೇ ನರೇಂದ್ರ ಮೋದಿಯವರು ಚೋರ್ ಎಂದು ಹೇಳಿದಂತಾಗಿದೆ ಎಂದು ಮಾತಿನ ಆವೇಗದಲ್ಲಿ ಹೇಳಿಕೆ ನೀಡಿದ್ದರು. ಆದರೆ, ನ್ಯಾಯಾಲಯ 'ಚೌಕಿದಾರ್ ಚೋರ್' ಎಂದು ಎಲ್ಲೂ ಹೇಳಿರಲಿಲ್ಲ.
'ಚೌಕಿದಾರ್ ಚೋರ್ ಹೈ' ಅಂದ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ನೋಟಿಸ್
ರಾಹುಲ್ ಗಾಂಧಿ ಅವರ ಈ ಹೇಳಿಕೆ ದೇಶದಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿತ್ತು. ಸರ್ವೋಚ್ಚ ನ್ಯಾಯಾಲಯ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸಬೇಕೆಂದು ಬಿಜೆಪಿ ದುಂಬಾಲು ಬಿದ್ದಿತ್ತು. ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದಾಗಲೂ ರಾಹುಲ್ ಗಾಂಧಿ ಅವರು ವಿಷಾದ ವ್ಯಕ್ತಪಡಿಸಿದ್ದರೇ ಹೊರತು ಕೋರ್ಟಿನ ಕ್ಷಮೆ ಯಾಚಿಸಿರಲಿಲ್ಲ.
ಇದೀಗ ಶುಕ್ರವಾರ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಅವರು ಮೂರು ಪುಟಗಳ ಅಫಿಡವಿಟ್ ಸಲ್ಲಿಸಿದ್ದು, 'ಉದ್ದೇಶವಿಲ್ಲದೆ' ನೀಡಿದ ಹೇಳಿಕೆಗಾಗಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಮತ್ತು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಹೂಡಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೈಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಹೇಳಿಕೆ ಹಿಂದೆ ದುರುದ್ದೇಶವಿರಲಿಲ್ಲ : ರಾಹುಲ್
ರಾಹುಲ್ ಗಾಂಧಿ ಅವರು ತಮ್ಮ ಅಫಿಡವಿಟ್ ನಲ್ಲಿ, ಚೌಕಿದಾರ್ ಚೋರ್ ಹೈ ಎಂದು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ ಎಂದು ಅಪಾರ್ಥ ಬರುವಂತೆ ಹೇಳಿಕೆ ನೀಡಿದ್ದಕ್ಕಾಗಿ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಸರ್ವೋಚ್ಚ ನ್ಯಾಯಾಲಯದ ಬಗ್ಗೆ ತಮಗೆ ಅಪಾರ ಗೌರವವಿದ್ದು, ಆ ಹೇಳಿಕೆಯಲ್ಲಿ ಯಾವುದೇ ದುರುದ್ದೇಶವಿರಲಿಲ್ಲ, ಉದ್ದೇಶಪೂರ್ವಕವಾಗಿಯೂ ಮಾಡಿರಲಿಲ್ಲ. ತಮ್ಮ ಹೇಳಿಕೆಯನ್ನು ಗೌರವಾನ್ವಿತ ನ್ಯಾಯಾಲಯ ಸ್ವೀಕರಿಸಬೇಕು ಮತ್ತು ನ್ಯಾಯಾಂಗ ನಿಂದನೆ ಅರ್ಜಿಯನ್ನು ಕ್ಲೋಸ್ ಮಾಡಬೇಕು ಎಂದು ಯಾಚಿಸಿದ್ದಾರೆ. ಇದರಿಂದಾಗಿ, ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಭಾರೀ ಮುಖಭಂಗ ಆದಂತಾಗಿದೆ.
ಮೀನಾಕ್ಷಿ ಲೇಖಿಯಿಂದ ನ್ಯಾಯಾಂಗ ನಿಂದನೆ ಅರ್ಜಿ
ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದಕ್ಕೆ ಪ್ರತಿಯಾಗಿ, ಭಾರತೀಯ ಜನತಾ ಪಕ್ಷದ ಸಂಸದೆ ಮೀನಾಕ್ಷಿ ಲೇಖಿ ಅವರು, ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದರು. ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿ ವಿವರಣೆ ನೀಡಬೇಕೆಂದು ಏಪ್ರಿಲ್ 15ರಂದು ರಾಹುಲ್ ಗಾಂಧಿ ಅವರಿಗೆ ನೋಟೀಸ್ ಜಾರಿ ಮಾಡಿತ್ತು. ಮೊದಲು ಸಲ್ಲಿಸಲಾಗಿದ್ದ ಅಫಿಡವಿಟ್ ನಲ್ಲಿ, ರಾಹುಲ್ ಅವರು, ನರೇಂದ್ರ ಮೋದಿ ಅವರ ಮೇಲಿರುವ ಕೋಪದಿಂದಾಗಿ ಆ ರೀತಿ ಹೇಳಿಕೆ ನೀಡಿದ್ದಾಗಿ, ಅದಕ್ಕೆ ವಿಷಾದಿಸುವುದಾಗಿ ಹೇಳಿದ್ದರು. ಆದರೆ, ರಾಹುಲ್ ಅವರ ವಿಷಾದಕ್ಕೆ ಕೋರ್ಟ್ ಮನ್ನಣೆ ನೀಡಿರಲಿಲ್ಲ.
ಸುಪ್ರೀಂಕೋರ್ಟ್ ನೋಟಿಸ್: ಟ್ವಿಟ್ಟಿಗರ ಬಾಯಿಗೆ ಆಹಾರವಾದ ರಾಹುಲ್ ಗಾಂಧಿ
ವಿಷಾದವನ್ನು ಬ್ರಾಕೆಟ್ ನಲ್ಲಿ ವ್ಯಕ್ತಪಡಿಸಿದ್ದ ರಾಹುಲ್
ಏಪ್ರಿಲ್ 30ರಂದು ನಡೆಸಲಾಗಿದ್ದ ವಿಚಾರಣೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಮುಂದೆ ರಾಹುಲ್ ಗಾಂಧಿ ಅವರು ವ್ಯಕ್ತಪಡಿಸಿದ್ದ 'ವಿಷಾದ'ವನ್ನೂ ಬ್ರಾಕೆಟ್ ನಲ್ಲಿ ಹಾಕಿದ್ದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ನ್ಯಾಯಮೂರ್ತಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ವಿಚಲಿತರಾಗಿದ್ದ ರಾಹುಲ್ ಪರ ವಾದಿಸುತ್ತಿದ್ದ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು, ಸೂಕ್ತವಾದ ಮತ್ತೊಂದು ಅಫಿಡವಿಟ್ ಸಲ್ಲಿಸುವುದಾಗಿ ಕೋರ್ಟಿಗೆ ವಾಗ್ದಾನ ನೀಡಿದ್ದರು. ಅದರಂತೆ, ಬುಧವಾರ ರಾಹುಲ್ ಗಾಂಧಿ ಅವರ ಬೇಷರತ್ ಕ್ಷಮೆ ಯಾಚಿಸಿರುವ ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ.
ರಫೇಲ್ ಡೀಲ್ ನಲ್ಲಿ ಯಾವುದೇ ಹುಳುಕಿಲ್ಲ
ರಫೇಲ್ ಡೀಲ್ ನಲ್ಲಿ ಯಾವುದೇ ಹುಳುಕಿಲ್ಲ ಎಂದು ಕಳೆದ ಡಿಸೆಂಬರ್ ನಲ್ಲಿಯೇ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ, ಬಿಜೆಪಿ ಕೆಲ ಸಂಗತಿಗಳನ್ನು ಸರ್ವೋಚ್ಚ ನ್ಯಾಯಾಲಯದಿಂದ ಮುಚ್ಚಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲ ಆಂಗ್ಲ ಪತ್ರಿಕೆಗಳು, ರಫೇಲ್ ಡೀಲ್ ಪಾರದರ್ಶಕವಾಗಿ ನಡೆದಿಲ್ಲ ಎಂಬುದನ್ನು ಸೂಚಿಸುವ ಕೆಲ ರಹಸ್ಯ ದಾಖಲೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ ನಂತರ, ಸುಪ್ರೀಂ ಕೋರ್ಟ್ ಮರುಪರಿಶೀಲನಾ ಅರ್ಜಿಯನ್ನು ಮರುವಿಚಾರಣೆಗೆ ತೆಗೆದುಕೊಂಡಿದೆ. ಮರುವಿಚಾರಣೆಗೆ ಸ್ವೀಕರಿಸಿದ್ದನ್ನೇ, ಚೌಕಿದಾರ್ ಚೋರ್ ಹೈ ಎಂಬುದು ಸಾಬೀತಾಗಿದೆ, ಇದನ್ನು ಸ್ವತಃ ನ್ಯಾಯಾಲಯವೇ ಹೇಳಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿಕೆ ನೀಡಿದ್ದರು. ಇದೇ ಅವರಿಗೆ ಈಗ ಮುಳುವಾಗಿದೆ. ನ್ಯಾಯಾಂಗ ನಿಂದನೆ ಅರ್ಜಿ ಮತ್ತು ರಫೇಲ್ ಡೀಲ್ ಮರುಪರಿಶೀಲನಾ ಅರ್ಜಿ ಶುಕ್ರವಾರ ವಿಚಾರಣೆಗೆ ಬರುತ್ತಿದೆ.