ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಏನು ಕ್ರಮ ಜರುಗಿಸಲಿದೆ?
Recommended Video

ನವದೆಹಲಿ, ಫೆಬ್ರವರಿ 14 : ನಲವತ್ತನಾಲ್ಕು ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ರಕ್ಕಸ ದಾಳಿಯ ವಿರುದ್ಧ ಏನು ಕ್ರಮ ಜರುಗಿಸಬೇಕು ಎಂದು ನಿರ್ಧರಿಸಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತಾ ಸಂಪುಟ ಸಮಿತಿ ಸಭೆ ನಡೆಸುತ್ತಿದೆ.
ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭದ್ರತಾ ಸಲಹೆಗಾರ ಅಜಿತ್ ಡೋವಲ್, ಗುಪ್ತದಳ ಇಲಾಖೆಯ ಅಧಿಕಾರಿಗಳು ಮುಂತಾದವರು ಅತ್ಯಂತ ಮಹತ್ವದ ಚರ್ಚೆ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಜೆ 3.45ರ ಸುಮಾರಿಗೆ ನಡೆದಿದ್ದ ಹೇಯ ಭಯೋತ್ಪಾದಕ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದಾರೆ. 350 ಕೆಜಿ ಸ್ಫೋಟಕಗಳನ್ನು ತುಂಬಿದ್ದ ಎಸ್ಯುವಿ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಎಲ್ಲ ಯೋಧರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ಉರಿ ದಾಳಿಯ ನಂತರ ನಡೆದಿರುವ ಅತ್ಯಂತ ಭಯಾನಕ ಭಯೋತ್ಪಾದನಾ ದಾಳಿಯಿಂದ, ಭಾರತವನ್ನು ಪ್ರೀತಿಸುವ ಪ್ರತಿ ಭಾರತೀಯನ ರಕ್ತ ಕುದಿಯುವಂತಾಗಿದೆ. ಪ್ರತೀಕಾರ ತೆಗೆದುಕೊಳ್ಳದೆ ಅನ್ಯ ಮಾರ್ಗವೇ ಇಲ್ಲ ಎಂಬಂತಹ ಸನ್ನಿವೇಶವನ್ನು ಪಾಕ್ ಬೆಂಬಲಿತ ಉಗ್ರರು ಸೃಷ್ಟಿಸಿದ್ದಾರೆ.
ಈ ಹೇಯ ದಾಳಿಯ ಹಿನ್ನೆಲೆಯಲ್ಲಿ ಸ್ವೀಡನ್ ನಲ್ಲಿದ್ದ ರಕ್ಷಣಾ ಸಚಿವೆ ವಾಪಸ್ ಭಾರತಕ್ಕೆ ಬಂದಿದ್ದಾರೆ. ಮಧ್ಯ ಪ್ರದೇಶದಲ್ಲಿ ಇಂದು ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ. ಹಾಗೆಯೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ತಮ್ಮೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿದ್ದು, ಆ ಸಂಘಟನೆಯ ಉಗ್ರ ಆದಿಲ್ ಅಹ್ಮದ್ ದಾರ್ ಎಂಬಾತನೇ ಈ ಕೃತ್ಯವೆಸಗಿದ್ದು. ನಮ್ಮ ಯೋಧರ ಒಂದೊಂದು ರಕ್ತದ ಹನಿಗೂ ಪ್ರತೀಕಾರ ತೆಗೆದುಕೊಳ್ಳಲಿದ್ದೇವೆ, ನಮ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕೆ? ಪಾಕಿಸ್ತಾನದ ಜೊತೆ ಎಲ್ಲ ರೀತಿಯ ಸಂಬಂಧ, ಸಂಪರ್ಕಗಳನ್ನು ಕಳೆದುಕೊಳ್ಳಬೇಕೆ? ಅಥವಾ ಯುದ್ಧವನ್ನೇ ಸಾರಬೇಕೆ?












Click it and Unblock the Notifications