'ಸಭ್ಯವಾಗಿ ವರ್ತಿಸಿ, ಇಲ್ಲ ಮನೆಗೆ ಹೋಗಿ': ಪ್ರಿಯಾಂಕಾ ಸಿಡಿಮಿಡಿ!
Recommended Video

ನವದೆಹಲಿ, ಏಪ್ರಿಲ್ 13: ಉನ್ನಾವೋ(ಉತ್ತರ ಪ್ರದೇಶ) ಮತ್ತು ಕತುವಾ(ಜಮ್ಮು-ಕಾಶ್ಮೀರ)ದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಧ್ಯರಾತ್ರಿ ಪ್ರತಿಭಟನೆಯಲ್ಲಿ ಉಂಟಾದ ನೂಕು ನುಗ್ಗಲು, ತಳ್ಳಾಟದಿಂದ ಕಿರಿಕಿರಿಗೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೋಪಗೊಂಡು ಕೂಗಾಡಿದ ಘಟನೆ ನಡೆದಿದೆ.
'ಯಾರೂ ಯಾರನ್ನೂ ತಳ್ಳಬೇಕಿಲ್ಲ. ನಾವೆಲ್ಲ ಯಾವ ಕಾರಣಕ್ಕಾಗಿ ಇಲ್ಲಿ ಸೇರಿದ್ದೇವೆ ಎಂಬುದು ನಿಮಗೆಲ್ಲರಿಗೂ ಗೊತ್ತು. ಆದ್ದರಿಂದ ಸಭ್ಯತೆಯಿಂದ ವರ್ತಿಸಿ, ಇಲ್ಲವೇ ಮನೆಗೆ ತೆರಳಿ' ಎಂದು ಅವರು ನೆರೆದಿದ್ದ ಜನರಿಗೆ ನೇರವಾಗಿ ಕಿಡಿಕಾರಿದರು. ಇದರಿಂದ ಜನರೂ ಇರಿಸುಮುರಿಸು ಅನುಭವಿಸುವಂತಾಯಿತು.
ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಸಹ ಭಾಗವಹಿಸಿದ್ದರು.

ಉತ್ತರ ಪ್ರದೇಶದ ಉನ್ನಾವೋದಲ್ಲಿ 2017 ರ ಜೂನ್ ನಲ್ಲಿ 16 ವರ್ಷದ ಅಪ್ರಾಪ್ತೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್ ಅವರನ್ನು ಆರೋಪಿ ಎನ್ನಲಾಗಿದೆ. ಈ ಪ್ರಕರಣವನ್ನು ಈಗಾಗಲೇ ಸಿಬಿಐ ಗೆ ವಹಿಸಲಾಗಿದ್ದು, ಇಂದು ಬೆಳಿಗ್ಗೆಯಷ್ಟೇ ಸೆನ್ಗಾರ್ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.
ಜಮ್ಮು ಕಾಶ್ಮೀರದ ಕತುವಾ ಎಂಬಲ್ಲಿ ಜನವರಿ ತಿಂಗಳಿನಲ್ಲಿ ಒಂಬತ್ತು ವರ್ಷದ ಮಗುವನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಎರಡು ಘಟನೆಯಿಂದಾಗಿ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ಸಿಗರು ದೂರಿದ್ದಾರೆ.












Click it and Unblock the Notifications