ವಿವಾದ ಅಂತ್ಯ, ಯಡಿಯೂರಪ್ಪ ಕೈಗೆ ಸಿಕ್ತು ಕೆಜೆಪಿ!
ನವದೆಹಲಿ, ಸೆ.14 : ಕರ್ನಾಟಕ ಜನತಾ ಪಕ್ಷ ಸಂಸ್ಥಾಪನೆ ಕುರಿತ ವಿವಾದಕ್ಕೆ ಕೇಂದ್ರ ಚುನಾವಣಾ ಆಯೋಗ ಇತಿಶ್ರೀ ಹಾಡಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ತೀರ್ಪು ನೀಡಿದೆ. ಇದರಿಂದ ಕೆಜೆಪಿ ಯಡಿಯೂರಪ್ಪ ಅವರಿಗೆ ಸಿಕ್ಕಿದೆ.
ಪ್ರಸನ್ನಕುಮಾರ್ ಎಂಬುವರು ಸುಳ್ಳು ಪ್ರಮಾಣ ಪತ್ರ ನೀಡಿ ಕೆಜೆಪಿ ನೋಂದಣಿ ಮಾಡಿದ್ದು, ನೋಂದಣಿ ರದ್ದುಪಡಿಸಬೇಕು ಎಂದು ಹೊಟ್ಟೆಪಕ್ಷದ ರಂಗಸ್ವಾಮಿ ಅವರ ಪುತ್ರ ರಾಜೇಂದ್ರಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಆಯೋಗ ವಜಾಗೊಳಿಸಿದೆ.

ನೋಂದಣಿ ಪ್ರಕ್ರಿಯೆ ನಿಯಮಾವಳಿ ಪ್ರಕಾರವೇ ನಡೆದಿದೆ. ಪ್ರಸನ್ನಕುಮಾರ್ ಅವರು ಕಾನೂನಿನ ಅನ್ವಯ ಕೆಜೆಪಿಯ ಧನಂಜಯ್ ಕುಮಾರ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರಿಸಿದ್ದಾರೆ. ನಂತರ ಕೆಜೆಪಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಪ್ರಕರಣವೇನು : ಹೊಟ್ಟೆ ಪಕ್ಷದ ರಂಗಸ್ವಾಮಿ ಪುತ್ರ ರಾಜೇಂದ್ರಪ್ರಸಾದ್ ಅವರು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಪದ್ಮನಾಭ ಪ್ರಸನ್ನಕುಮಾರ್ ಅವರು ಕೆಜೆಪಿ ನೋಂದಣಿ ಮಾಡುವ ಸಂದರ್ಭದಲ್ಲಿ ತಂದೆಯ ಹೆಸರು ಹೊಟ್ಟೆ ಪಕ್ಷದ ರಂಗಸ್ವಾಮಿ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಅವರು ರಂಗಸ್ವಾಮಿ ಪುತ್ರರಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ತಪ್ಪು ಪ್ರಮಾಣ ಪತ್ರ ನೀಡಿರುವುದರಿಂದ ಕೆಜೆಪಿ ಪಕ್ಷದ ನೋಂದಣಿ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು. ಈ ಬಗ್ಗೆ ಹೈಕೋರ್ಟ್ನಲ್ಲೂ ಪ್ರಕರಣ ದಾಖಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಚುನಾವಣಾ ಆಯೋಗದಲ್ಲೇ ಅರ್ಜಿ ಸಲ್ಲಿಸಿ, ಇತ್ಯರ್ಥಪಡಿಸಿಕೊಳ್ಳಿ ಎಂದು ಆದೇಶಿಸಿತ್ತು. ಆದ್ದರಿಂದ ರಾಜೇಂದ್ರಕುಮಾರ್ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಆಯೋಗ ಕೆಜೆಪಿಯ ಮಾಜಿ ಅಧ್ಯಕ್ಷ ಧನಂಜಯಕುಮಾರ್ ಅವರಿಂದ ಅಧಿಕಾರ ಹಸ್ತಾಂತರದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿ, ರಾಜೇಂದ್ರಪ್ರಸಾದ್ ಅರ್ಜಿ ತಿರಸ್ಕರಿಸಿದೆ. ಇದರಿಂದ ಕೆಜೆಪಿ ಪಕ್ಷ ಯಡಿಯೂರಪ್ಪ ಅವರ ಕೈಯಲ್ಲೇ ಉಳಿದಂತಾಗಿದೆ.












Click it and Unblock the Notifications