ನೋಟ್ ಬ್ಯಾನ್: ಮೋದಿ ವಿರೋಧಿಗಳ ಟೀಕಾ ಪ್ರಹಾರ
ನವದೆಹಲಿ, ನವೆಂಬರ್, 9: 500 ರೂ. ಮತ್ತು 1000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ದಿಟ್ಟ ನಿರ್ಧಾರವನ್ನು ಹಲವು ನಾಯಕರು ಸ್ವಾಗತಿಸಿದ್ದರೆ, ಇನ್ನೂ ಕೆಲವು ಪ್ರಮುಖ ಮುಖಂಡರು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ಉದ್ಯಮ ಹಾಗೂ ರಾಜಕೀಯ ವಲಯದಿಂದಲೇ ಹೆಚ್ಚು ವಿರೋದ ವ್ಯಕ್ತವಾಗುತ್ತಿದೆ. ಆದರೂ ಕೆಲವು ರಾಜಕೀಯ ಮುಖಂಡರು, ಉದ್ಯಮಿಗಳು ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಮುಖಂಡರು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸರ್ಕಾರದ ನಿರ್ಧಾರ ಸರಿಯಿಲ್ಲ ಎಂದು ಹೇಳಿದ್ದಾರೆ. ಆದರೆ ಹಲವು ಮಂದಿ ನಟರು, ಕ್ರೀಡಾಪಟುಗಳು ಮೋದಿಯವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೇರವಾಗಿ ವಿರೋಧ ವ್ಯಕ್ತಪಡಿಸದಿದ್ದರೂ ಸಹ ನೋಟುಗಳ ನಿಷೇಧವನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಟ್ವೀಟನ್ನು ರೀಟ್ವೀಟ್ ಮಾಡಿ ಪರೋಕ್ಷವಾಗಿ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಮೋದಿ ದೇಹಕ್ಕೆ ತುಘಲಕ್ ಆತ್ಮ ಹೊಕ್ಕಿದೆ: ತಿವಾರಿ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ಮೊಹಮ್ಮದ್ ಬಿನ್ ತುಘಲಕ್ ಆತ್ಮ ಪ್ರಧಾನಿ ಮೋದಿ ದೇಹಕ್ಕೆ ಹೊಕ್ಕಿದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಭಾರತದಲ್ಲಿ ಶೇ. 65ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತರ ಹೊಟ್ಟೆ ಮೇಲೆ ಕೇಂದ್ರ ಸರ್ಕಾರ ಹೊಡಿದೆದೆ. ಪ್ರಧಾನಿಯವರು ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ತೀವ್ರ ವಿರೋಧ
ಇನ್ನು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು "ಕೇಂದ್ರ ಸರ್ಕಾರದ ಈ ನಡೆ ಆರ್ಥಿಕ ಗೊಂದಲಗಳಿಂದ ಕೂಡಿದೆ. ಸಾಮಾನ್ಯ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ.
"ಭ್ರಷ್ಟಾಚಾರ ವಿರುದ್ಧ ಹೋರಾಡುವ ಹೆಸರಿನಲ್ಲಿ ಕೇಂದ್ರ ಸರ್ಕಾರ ಜನಸಾಮನ್ಯರೊಂದಿಗೆ ಚೆಲ್ಲಾಟವಾಡುತ್ತಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು" ಎಂದು ಅವರು ಆಗ್ರಹಿಸಿದ್ದಾರೆ.
ಜನ ಸಾಮನ್ಯರಿಗೆ ತೊಂದರೆ: ಮೊಹಮ್ಮದ್ ಸಲೀಂ
ಸಿಪಿಎಂ ಮುಖಂಡ ಮೊಹಮ್ಮದ್ ಸಲೀಂ ಅವರು ಪ್ರತಿಕ್ರಿಯೆ ನೀಡಿ " ಕಪ್ಪು ಹಣ ತಡೆಗೆ ನಮ್ಮ ಪಕ್ಷ ಯಾವಾಗಲೂ ಸಕಾರಾತ್ಮಕವಾಗಿಯೇ ಚಿಂತಿಸುತ್ತಿದೆ. ಆದರೆ ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ಈ ಕಠಿಣ ನಿರ್ಧಾರದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ" ಎಂದು ಹೇಳಿದ್ದಾರೆ.
ಅಧಿಕಾರಕ್ಕೆ ಬಂದು ಎರಡು ವರ್ಷ ಸುಮ್ಮನಿದ್ದ ಸರ್ಕಾರ ಇದ್ದಕ್ಕಿದ್ದಂತೆ ನೋಟುಗಳ ಮೇಲೆ ನಿಷೇಧ ಹೇರಿದೆ. ಇದರಿಂದ ಮಧ್ಯಮ ವಾಣಿಜ್ಯೋದ್ಯಮಿಗಳು, ಸಣ್ಣ ವ್ಯಾಪಾರಸ್ಥರು ಪರದಾಡುವಂತಹ ಪರಿಸ್ಥತಿ ನಿರ್ಮಾಣವಾಗಿದೆ. ಎಂದು ಕಿಡಿಕಾರಿದ್ದಾರೆ.
ಜನ ಸಾಮಾನ್ಯರು ಅರಗಿಸಿಕೊಳ್ಳುವುದು ಕಷ್ಟ
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಸಹ ನೋಟುಗಳ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವನ್ನು ಜನಸಾಮಾನ್ಯರು ಅರಗಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ.
ಏಕಾಏಕಿ ಈ ರೀತಿ ನಿರ್ಧಾರತೆಗೆದುಕೊಂಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.