ತೀರ್ಪು ಸ್ವಾಗತಿಸಿ, ಕುಲಭೂಷಣ್ ಗೆ ನ್ಯಾಯದ ಭರವಸೆ ನೀಡಿದ ಮೋದಿ
ನವದೆಹಲಿ, ಜುಲೈ 17: ಕುಲಭೂಷಣ್ ಯಾದವ್ ಅವರಿಗೆ ಪಾಕಿಸ್ತಾನ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಅಮಾನತು ಮಾಡಿದ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.
" ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಸತ್ಯ ಮತ್ತು ನ್ಯಾಯ ಉಳಿಸಿದೆ. ಸಂಪೂರ್ಣ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯದ ನಡೆಗೆ ನನ್ನ ಅಭಿನಂದನೆಗಳು. ಕುಲಭೂಷಣ್ ಜಾಧವ್ ಅವರಿಗೆ ಖಂಡಿತ ನ್ಯಾಯ ದೊರಕುತ್ತದೆ ಎಂಬ ಭರವಸೆ ನನಗಿದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಜೊತೆಗೆ, "ನಮ್ಮ ಸರ್ಕಾರ ಎಂದಿಗೂ ಪ್ರತಿ ಭಾರತೀಯನ ಭದ್ರತೆ ಮತ್ತು ಯೋಗಕ್ಷೇಮಕ್ಕಾಗಿ ಕೆಲಸ ಮಾಡುತ್ತದೆ" ಎಂದು ಸಹ ಅವರು ಹೇಳಿದ್ದಾರೆ.

ಬೇಹುಗಾರಿಕೆಯ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿತರಾಗಿ,ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಕುಲಭೂಷಣ್ ಯಾದವ್ ಅವರ ಮರಣದಂಡನೆಯ ವಿಚಾರಣೆಯನ್ನು ಖಾಯಂಗೊಳಿಸಬೇಕೆ ಬೇಡವೆ ಎಂಬ ಕುರಿತಂತೆ ನೆದರ್ಲೆಂಡ್ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಂದು ತೀರ್ಪು ಹೊರಬಿದ್ದಿದೆ. ಜಾಧವ್ ಅವರಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ತಾನಕ್ಕೆ ಸೂಚಿಸಿದೆ.
ಕುಲಭೂಷಣ್ ಜಾಧವ್ ಅವರು ಭಾರತ 'ರಾ' ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ನಂತರ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತದ ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದ ಜಾಧವ್ ಅವರನ್ನು 2016 ರ ಮಾರ್ಚ್ 3 ರದು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು.












Click it and Unblock the Notifications