'ಮೃತ ರೈತರಿಗೆ ಮೋದಿ ಸಂಸತ್ತಿನಲ್ಲಿ ಒಮ್ಮೆಯಾದರೂ ಸಂತಾಪ ಸೂಚಿಸಲಿ': ಟಿಕಾಯತ್
ನವದೆಹಲಿ, ಅಕ್ಟೋಬರ್ 10: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಹಲವಾರು ತಿಂಗಳುಗಳಿಂದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ 750 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಮೃತ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಒಮ್ಮೆಯಾದರೂ ಸಂತಾಪ ಸೂಚಿಸಲಿ," ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಶನಿವಾರ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಹೌಹಾರಿದ ರೈತ ಮುಖಂಡ ರಾಕೇಶ್ ಟಿಕಾಯತ್, "ಈ ಕನಿಷ್ಠ ಬೆಂಬಲ ಬೆಲೆ ನೀಡುವ ಭರವಸೆಯು ಕೇವಲ ಕಾಗದದಲ್ಲಿ ಉಳಿದಿದೆ. ಆದರೆ ರೈತರು ಇದನ್ನು ವಾಸ್ತವವಾಗಿ ಬಯಸುತ್ತಾರೆ," ಎಂದಿದ್ದಾರೆ.
"ಕ್ರೋಧದ ಬೀಜಗಳು: ಭಯ ಹಾಗೂ ಸತ್ಯಗಳು: ಕೃಷಿ ಬಿಕ್ಕಟ್ಟನ್ನು ಪರಿಹರಿಸುವುದು ಹೇಗೆ" ಎಂದು ಇಂಡಿಯಾ ಟುಡೇಯ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾದ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ಗೆ ಬಿಜೆಪಿ ಸಂಸದ ರಾಜೇಂದ್ರ ಅಗರ್ವಾಲ್ ತಿರುಗೇಟು ನೀಡಿದ್ದಾರೆ. "ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಮುಂದಿಟ್ಟು ರೈತರನ್ನು ಬಳಸಿಕೊಂಡು ರಾಜಕೀಯ ಮಾಡಲಾಗುತ್ತಿದೆ," ಎಂದು ಆರೋಪ ಮಾಡಿದರು.

"ತಾವು ಬೆಳೆದ ಬೆಲೆಗೆ ಸರಿಯಾದ ಬೆಲೆಯನ್ನು ಪಡೆಯಲು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರವು ಈ ಹೊಸ ಕಾಯ್ದೆ ಬಂದರೆ ಕನಿಷ್ಠ ಬೆಂಬಲ ಬೆಲೆ ಇರಲಿದೆ, ಈಗಲೂ ಇದೆ ಹಾಗೂ ಮುಂದೆಯೂ ಇರಲಿದೆ ಎಂದು ಹೇಳಿದೆ. ಆದರೆ ರೈತರಿಗೆ ಇದು ಬರೀ ಲಿಖಿತ ರೂಪದಲ್ಲಿ ಬೇಡ ವಾಸ್ತವವಾಗಿ ಬೇಕು," ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಕಳೆದ ಹನ್ನೊಂದು ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯನ್ನು ಸಾವನ್ನಪ್ಪಿದ 750 ಮಂದಿಯ ಬಗ್ಗೆ ಕೇಂದರ್ ಸರ್ಕಾರ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಒಂದು ಬಾರಿ ಆದರೂ ಮಾತನಾಡಬೇಕು," ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆಗ್ರಹ ಮಾಡಿದ್ದಾರೆ.
"ದೆಹಲಿಯ ಗಡಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಸಂತಾಪ ಸೂಚಿಸಬೇಕು," ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮೀರತ್ ಸಂಸದ ರಾಜೇಂದ್ರ ಅಗರ್ವಾಲ್, "ಪ್ರಧಾನಿ ಮೋದಿ ಎಂದಿಗೂ ರೈತರ ಪರವಾಗಿ ಮಾತನಾಡುತ್ತಲಿರುತ್ತಾರೆ ಹಾಗೂ ಸಂಸತ್ತಿನಲ್ಲೂ ರೈತರ ಬಗ್ಗೆ ಮಾತನಾಡಿದ್ದಾರೆ. ಈ ಪ್ರತಿಭಟನೆ ನಡೆಯಲು ಆರಂಭವಾಗಿ ಈಗ ಹನ್ನೊಂದು ತಿಂಗಳು ಆಗಿದೆ. ಆದರೆ ಈ ಬಗ್ಗೆಯೇ ಹಲವಾರು ಗೊಂದಲಗಳು ಇದೆ. ರೈತರಲ್ಲಿ ಈ ಕಾಯ್ದೆಯ ಬಗ್ಗೆ ತಪ್ಪು ಅಭಿಪ್ರಾಯವಿದೆ. ಹಾಗೆಯೇ ಈ ವಿಚಾರದಲ್ಲಿ ಹಲವಾರು ಬಾರಿ ಚರ್ಚೆ ನಡೆಸಲಾಗಿದೆ. ಈ ವಿಚಾರವು ಸುಪ್ರೀಂ ಕೋರ್ಟ್ಗೂ ತಲುಪಿದೆ," ಎಂದು ಹೇಳಿದ್ದಾರೆ.
"ಈ ಕಾಯ್ದೆಯಲ್ಲಿ ಯಾವ ವಿಚಾರದಲ್ಲಿ ಅವರಿಗೆ ಆಕ್ಷೇಪಣೆ ಇದೆ ಎಂದು ಹೇಳಬೇಕು. ಈ ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿ ರೈತರನ್ನು ತಪ್ಪು ದಾರಿಗೆ ಎಳೆಯಲಾಗುತ್ತದೆ. ಈ ಪ್ರತಿಭಟನೆಯು ಕೆಲವು ರಾಜಕೀಯ ಪಕ್ಷಗಳೊಂದಿಗೆ ಲಿಂಕ್ ಹೊಂದಿದೆ," ಎಂದು ಆರೋಪ ಮಾಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ "ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ ಹಾಗೂ ಕೇಂದ್ರ ಸರ್ಕಾರ ರೈತರ ಪರವಾಗಿ ಇದೆ ಎಂಬುವುದು ಕಳೆದ 2014 ರಿಂದ ಸರ್ಕಾರ ನಡೆಸಿದ ಆಡಳಿತದಿಂದ ಖಚಿತವಾಗಿದೆ," ಎಂದಿದ್ದಾರೆ.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧ ಆರೋಪ ಇರುವ ಹಿನ್ನೆಲೆ ಅವರು ತನ್ನ ಸ್ಥಾನದಿಂದ ಕೆಳಕ್ಕೆ ಇಳಿಯಬೇಕು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಈ ಹಿಂಸಾಚಾರ ಪ್ರಕರಣದಲ್ಲಿ ಆರೋಪವಿದ್ದು, ಪುತ್ರ ಆಶೀಶ್ನ ಬಂಧನವಾಗಿದೆ.
(ಒನ್ಇಂಡಿಯಾ ಸುದ್ದಿಗಳು)












Click it and Unblock the Notifications