ದಾಳಿಯ ಸಾಕ್ಷ್ಯ ಕೇಳುವವರು ಪಾಕಿಸ್ತಾನದ ದಲ್ಲಾಳಿಗಳು: ಮೋದಿ
Recommended Video

ನವದೆಹಲಿ, ಮಾರ್ಚ್ 05: ಭಾರತವು ಪಾಕ್ನ ಉಗ್ರರ ಅಡಗುತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಸಾಕ್ಷ್ಯ ಕೇಳುವವರು ಪಾಕಿಸ್ತಾನದ ದಲ್ಲಾಳಿಗಳು ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆ ಜೈಶೆ-ಎ-ಮೊಹಮ್ಮದ್ ಉಗ್ರರ ಅಡಗುತಾಣಗಳ ಮೇಲೆ ಮಾಡಿದ ದಾಳಿಗೆ ಸಾಕ್ಷ್ಯ ಕೇಳುವವರು ಭಾರತದ ಪರ ಕೆಲಸ ಮಾಡುತ್ತಿಲ್ಲದ, ಪಾಕಿಸ್ತಾನದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಭಾರತೀಯ ವಾಯುಸೇನೆಯು ಪಾಕಿಸ್ತಾನದ ಬಾಲಾಕೋಟ್ ಹಾಗೂ ಇನ್ನೂ ಕೆಲವು ಉಗ್ರರ ಅಡಗುತಾಣಗಳ ಮೇಲೆ ನಡೆಸಿದ್ದ ದಾಳಿಯಲ್ಲಿ ಹತರಾದವರ ಬಗ್ಗೆ ಸಾಕ್ಷ್ಯಗಳನ್ನು ವಿಪಕ್ಷಗಳು ಕೇಳುತ್ತಿದ್ದವು. ಇದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ನಾನು ಭಯೋತ್ಪಾದಕರ ವಿರುದ್ಧ ಹೋರಾಟ ಮಾಡುತ್ತಿದ್ದರೆ, ವಿಪಕ್ಷಗಳು ನನ್ನ ವಿರುದ್ಧ ಹೋರಾಟ ಮಾಡುತ್ತಿವೆ, ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿದೆವು ಆದರೆ ಅದರ ಪರಿಣಾಮ ಭಾರತದಲ್ಲಿ ಕೂತಿದ್ದ ಕೆಲವರ ಮೇಲೆ ಆಗಿದೆ ಎಂದು ಮೋದಿ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮಹಾಘಟಬಂಧನ್ ನ ಸದಸ್ಯರನ್ನು 'ಮಹಾಕಲಬೆರಕೆ' ಎಂದ ಮೋದಿ, ಇವರು ಪಾಕಿಸ್ತಾನದ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ. ಅವರಿಗೆ ಪಾಕಿಸ್ತಾನವು ಶಾಂತಿಯ ರಾಯಭಾರಿಯಂತೆ ಕಾಣುತ್ತಿದೆ. ಅವರು ದೇಶದ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ನಮ್ಮ ಸೇನೆಯ ಶಕ್ತಿಯನ್ನು ಅವರು ಅನುಮಾನಿಸುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.












Click it and Unblock the Notifications