ರಾಜಧಾನಿ ದೆಹಲಿ ಜನರಿಗೆ ಮತ್ತೆ ಸಮ-ಬೆಸ ಪರೀಕ್ಷೆ?
ನವದೆಹಲಿ, ಫೆಬ್ರವರಿ, 10: ದೆಹಲಿ ಜನತೆ ಮೇಲೆ ಮತ್ತೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಮ-ಬೆಸ ವಾಹನ ಸಂಚಾರದ ನಿಯಮವನ್ನು ಜಾರಿ ಮಾಡಲಿದೆ. ಜನವರಿ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ವ್ಯವಸ್ಥೆಗೆ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು.
ಫೆಬ್ರವರಿ 11 ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮ-ಬೆಸ ನಿಯಮ ಮತ್ತೆ ಜಾರಿಯಾಗಬೇಕು ಎಂದು ಒತ್ತಾಯಿಸಿ ದೆಹಲಿಗರು ಮನವಿ ಸಲ್ಲಿಸಿದ್ದಾರೆ. ಈ ಮೇಲ್ ಮುಖಾಂತರ ಕೋರಿಕೊಂಡಿದ್ದಾರೆ. ಇದೆಲ್ಲವನ್ನ ಆಧರಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ತಿಳಿಸಿದ್ದಾರೆ.[ಸಮ-ಬೆಸ ಯಾರಿಗೆ ಲಾಭ? ಕೇಜ್ರಿಗೆ ದಿಲ್ಲಿ ಹೈಕೋರ್ಟ್ ಪ್ರಶ್ನೆ]
ಪ್ರಾಯೋಗಿಕವಾಗಿ ಜನವರಿ 1ರಿಂದ 15 ದಿನಗಳ ಕಾಲ ಸಮ-ಬೆಸ ನಿಯಮ ಜಾರಿಗೆ ಮಾಡಲಾಗಿತ್ತು. ನಂತರ ಇದರ ಕುರಿತಾಗಿ ಸರ್ಕಾರಿ ವೆಬ್ ಸೈಟ್ ನಲ್ಲಿ ಸುಮಾರು 12 ಲಕ್ಷ ಸಲಹೆಗಳು ಬಂದಿದ್ದವು. ಜನರ ಸಲಹೆ ಸೂಚನೆಗಳನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಸೋಡಿಯಾ ತಿಳಿಸಿದ್ದಾರೆ.[ದೆಹಲಿ ಸಮ-ಬೆಸ ಸಂಚಾರ ನಿಯಮದ ಪ್ರಮುಖ ಅಂಶಗಳು]
ವ್ಯಾಪಕ ವಿರೋಧ: ಸಾಮಾಜಿಕ ತಾಣಗಳಲ್ಲಿ ದೆಹಲಿ ಸರ್ಕಾರದ ಸಮ-ಬೆಸ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾಲಿನ್ಯ ನಿಯಂತ್ರಣ ಮತ್ತು ಟ್ರಾಫಿಕ್ ಸಮಸ್ಯೆಗೆ ಇದರಿಂದ ಮುಕ್ತಿ ಸಾಧ್ಯವೇ ಎಂಬ ಪ್ರಶ್ನೆಯೂ ಎದ್ದಿತ್ತು. ಅಲ್ಲದೇ ದೆಹಲಿ ನ್ಯಾಯಾಲಯ ಶೀಘ್ರವಾಗಿ ವ್ಯವಸ್ಥೆಯ ಪರಿಣಾಮಗಳ ಕುರಿತು ಸಮಗ್ರ ವರದಿ ನೀಡುವಂತೆ ದೆಹಲಿ ಸರ್ಕಾರಕ್ಕೆ ಆದೇಶ ನೀಡಿತ್ತು.