ಮಸೀದಿಗಳಿಂದ ಶಬ್ದ ಮಾಲಿನ್ಯ : ಪರಿಶೀಲನೆಗೆ ಕೋರ್ಟ್ ಆದೇಶ
ನವದೆಹಲಿ, ಆಗಸ್ಟ್ 11 : ದೆಹಲಿ ಪೂರ್ವದಲ್ಲಿರುವ ಮಸೀದಿಗಳ ಆಜಾನ್ ನಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆಯೆ ಎಂದು ಪರಿಶೀಲಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣಾ ಮಂಡಳಿಗಳಿಗೆ ಮಸೀದಿಗಳಿಂದ ಹೊರಬರುವ ಶಬ್ದದ ಮಟ್ಟವನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಶನಿವಾರ ಆದೇಶಿಸಿದೆ.
ಪರಿಶೀಲನೆಯನ್ನು ವಿವಿಧ ಸಮಯಗಳಲ್ಲಿ ಮಾಡಿ, ಅದು ಕಾನೂನು ಕಟ್ಟಳೆಗಳನ್ನು ಉಲ್ಲಂಘಿಸುತ್ತಿದೆಯೆ ಎಂಬುದನ್ನೂ ಅಧ್ಯಯನ ಮಾಡಿ ವರದಿ ನೀಡುವಂತೆ ಕೋರ್ಟ್ ಎರಡೂ ಮಂಡಳಿಗಳಿಗೆ ಹೇಳಿದೆ.

ಆದರೆ, ಈ ಆದೇಶ ಸಾರ್ವಜನಿಕರಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಹುಟ್ಟಿಸಿದೆ. ಕೆಲವರು, ಆಜಾನ್ ನಿಂದ ತುಂಬಾ ತೊಂದರೆಯಾಗುತ್ತಿದ್ದು, ಇದು ಉತ್ತಮ ಆದೇಶ ಎಂದಿದ್ದರೆ, ಕೆಲವರು, ದಸರಾ, ದೀಪಾವಳಿಯಂಥ ಹಬ್ಬಗಳಲ್ಲಿ ಉಂಟಾಗುವ ಶಬ್ದಗಳಿಂದಲೂ ಮಾಲಿನ್ಯ ಆಗದಂತೆ ಕೋರ್ಟ್ ತಡೆಯಬೇಕು ಎಂದು ಟಾಂಗ್ ನೀಡಿದ್ದಾರೆ.
ಪೂರ್ವ ದೆಹಲಿಯಲ್ಲಿ ಸ್ವಚ್ಛತೆಯನ್ನುವುದೇ ಇಲ್ಲ, ಅಲ್ಲದೆ ಬೈಕ್, ಕಾರು, ಟ್ರಕ್ಕುಗಳು ಮಾಡುವ ಶಬ್ದಗಳಿಂದಲೂ ತುಂಬಾ ಕಿರಿಕಿರಿಯಾಗುತ್ತಿದೆ. ಬುಲೆಟ್ ಗಳು ಕೂಡ ಅತೀವ ಶಬ್ದ ಮಾಡುತ್ತಿದ್ದ ಸಾಮಾನ್ಯರಿಗೆ ತೊಂದರೆ ನೀಡುತ್ತಿವೆ. ಅದರ ಬಗ್ಗೆ ಕೋರ್ಟ್ ಏಕೆ ಗಮನ ಹರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಆದೇಶಕ್ಕೆ ಜಾತಿಯ ಬಣ್ಣವನ್ನೂ ನೀಡಲು ಸಾರ್ವಜನಿಕರು ಆರಂಭಿಸಿದ್ದಾರೆ. ಮುಸ್ಲಿಂ ಆಚರಣೆಗಳು ಶಬ್ದ ಮಾಲಿನ್ಯ ಉಂಟು ಮಾಡಿದರೆ, ಹಿಂದೂಗಳ ಹಬ್ಬಹರಿದಿನಗಳೂ ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ. ಯಾಕೆ ಕೋರ್ಟ್ ಈ ರೀತಿ ತಾರತಮ್ಯ ಮಾಡಲು ಆರಂಭಿಸಿದೆ ಎಂದು ಮತ್ತೊಬ್ಬರು ಕೇಳಿದ್ದಾರೆ.












Click it and Unblock the Notifications