ಸರ್ಕಾರಿ ಜಾಹೀರಾತಿನಿಂದ ಮಂತ್ರಿ, ಪುಢಾರಿಗಳಿಗೆ ಕೊಕ್
ನವದೆಹಲಿ, ಮೇ.13: ಸರ್ಕಾರಿ ಯೋಜನೆ, ಜಾಹೀರಾತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊಸದಾಗಿ ನಿರ್ದೇಶನ ಹೊರಡಿಸಿದೆ. ಸರ್ಕಾರಕ್ಕೆ ಸಂಬಂಧಿಸಿದ ಜಾಹೀರಾತುಗಳಿಂದ ಮಂತ್ರಿಗಳು, ಶಾಸಕರುಗಳು, ಪುಡಿ ರಾಜಕಾರಣಿಗಳ ಫೋಟೋಕ್ಕೆ ಕೊಕ್ ನೀಡಿ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಇನ್ಮುಂದೆ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿಗಳ ಫೋಟೋ ಮಾತ್ರ ಬಳಸಬೇಕಾಗುತ್ತದೆ. ಅಲ್ಲದೆ ಜಾಹೀರಾತು ಮುದ್ರಣಕ್ಕೂ ಮುನ್ನ ಈ ಮೂವರ ಪೂರ್ವಾನುಮತಿ ಅಗತ್ಯ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಸಾರ್ವಜನಿಕರ ತೆರಿಗೆ ಹಣವನ್ನು ಜಾಹೀರಾತುಗಳು ಪ್ರಚಾರ ಸಾಮಾಗ್ರಿಗಳಿಗಾಗಿ ಕೆಲ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರಿ ಜಾಹೀರಾತು ಪ್ರಕಟಣೆಗೆ ವಿರುದ್ಧ ಕಠಿಣ ನಿಯಮ ಅಗತ್ಯವಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು.
ಇದರಿಂದ ಜಾಹೀರಾತು ಕಾಯ್ದೆ ಉಲ್ಲಂಘನೆಯಾಗಲಿದೆ. ಅಲ್ಲದೆ, ಸರ್ಕಾರದ ಯೋಜನೆಗಳನ್ನು ತಮ್ಮದೇ ಯೋಜನೆ ಎಂದು ಬಿಂಬಿಸಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ರಾಜಕಾರಣಿಗಳು ವರ್ತಿಸುತ್ತಿದ್ದು, ರಾಜಕೀಯ ದುರುದ್ದೇಶ, ವೈಯಕ್ತಿಕ ಲಾಭಕ್ಕೆ ಸರ್ಕಾರಿ ಜಾಹೀರಾತುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಮೇಲ್ಕಂಡ ಆದೇಶ ಹೊರಡಿಸಿದೆ.












Click it and Unblock the Notifications