ಬಿಜೆಪಿಯಲ್ಲಿ ಯಾರಿಗೂ ಅಸಮಾಧಾನವಿಲ್ಲ : ಸುಷ್ಮಾ ಸ್ವರಾಜ್

ಶನಿವಾರ ಸುಷ್ಮಾ ಸ್ವರಾಜ್, ಅನಂತ್ ಕುಮಾರ್ ಹಾಗೂ ಬಲಬೀರ್ ಪುಂಜ್ ಅವರು ಅಡ್ವಾಣಿ ನಿವಾಸಕ್ಕೆ ಭೇಟಿನೀಡಿ ಅರ್ಧಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಅಡ್ವಾಣಿ ಮನವೊಲಿಕೆ ಮಾಡಲು ಯತ್ನಿಸಿದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್, ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಪಕ್ಷದಲ್ಲಿ "ಯಾರು ಕೂಡ ಅಸಂತೃಪ್ತರಾಗಿಲ್ಲ" ಎಂದು ಪ್ರತಿಕ್ರಿಯೆ ನೀಡಿದರು.
ಆದರೆ, ಉನ್ನತ ಮೂಲಗಳ ಮಾಹಿತಿ ಪ್ರಕಾರ ಅಡ್ವಾಣಿ ಅವರ ಕೋಪ ಇನ್ನೂ ಶಮನಗೊಂಡಿಲ್ಲ. ಸುಷ್ಮಾ ಭೇಟಿ ವೇಳೆ ಪ್ರಧಾನಿ ಅಭ್ಯರ್ಥಿ ಆಯ್ಕೆ ಕುರಿತು ಇಂದೂ ಅಡ್ವಾಣಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಡ್ವಾಣಿ ಅವರು ಬಿಜೆಪಿ ರಾಷ್ಟ್ರಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದ ಬಗ್ಗೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ ಎಂದು ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅಡ್ವಾಣಿ ಮನವೊಲಿಸುವ ಕಾರ್ಯ ಇಂದು ಫಲಪ್ರದವಾಗಿಲ್ಲ. (ಮೋದಿಗೆ ಪಟ್ಟ ಯಾರು ಏನಾಂತಾರೆ?)
ಶುಕ್ರವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ಸಂಸದೀಯ ಮಂಡಳಿ ಸಭೆಗೂ ಅಡ್ವಾಣಿ ಗೈರು ಹಾಜರಾಗಿದ್ದರು. ಅಲ್ಲದೆ ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದ ಅಡ್ವಾಣಿ, ಅದ್ಯಕ್ಷರ ವರ್ತನೆ ಮತ್ತು ಪಕ್ಷದಲ್ಲಿನ ಇತ್ತೀಚೆಗಿನ ಚಟುವಟಿಕೆಗಳ ಬಗ್ಗೆ ಕಿಡಿಕಾರಿದ್ದರು.
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. (ಪಿಟಿಐ)












Click it and Unblock the Notifications