ಎಲ್ಎಸಿಯಲ್ಲಿ ಗಸ್ತು ತಿರುಗದಂತೆ ತಡೆಯಲು ಚೀನಾ ಪ್ರಯತ್ನ:ರಾಜನಾಥ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 17: ಪೂರ್ವ ಲಡಾಖ್ನ ಗಡಿ ವಾಸ್ತವ ರೇಖೆಯ ಬಳಿ ಭಾರತೀಯ ಸೇನೆ ಗಸ್ತು ತಿರುಗದಂತೆ ಚೀನಾ ತಡೆಯುತ್ತಿದೆ, ಆದರೆ ಅದು ಅಸಾಧ್ಯವಾದದ್ದು ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೈನಿಕರನ್ನು ತಡೆಯುವ ಶಕ್ತಿ ಜಗತ್ತಿನಲ್ಲಿ ಯಾರಿಗೂ ಇಲ್ಲ ಎಂದು ಹೇಳಿದರು. ಸೈನಿಕರ ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಭಾರತ-ಚೀನಾ ಸೇನೆ ನಿಲುಗಡೆ ಸಂಬಂಧ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಅವರು, ಭಾರತೀಯ ಸೇನೆಯ ಸಾಂಪ್ರದಾಯಿಕ ಮತ್ತು ಗಸ್ತು ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದರು.

ನಮ್ಮ ಸೈನಿಕರ ಚಲನವಲನಗಳನ್ನು ತಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಹೇಳುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.
ರಾಜ್ಯಸಭೆಯಲ್ಲಿ ಇಂದು ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ಅವರು ಈ ಹಿಂದೆ ಗಸ್ತು ತಿರುಗುತ್ತಿದ್ದ ಪ್ರದೇಶಕ್ಕೆ ಇನ್ನು ಮುಂದೆ ಭಾರತೀಯ ಸೈನಿಕರನ್ನು ಪ್ರವೇಶಿಸಲು ಬಿಡುವುದಿಲ್ಲವೇ ಎಂದು ಕೇಳಿದ್ದಕ್ಕೆ, ಭಾರತ-ಚೀನಾ ಗಡಿ ಸಂಘರ್ಷ ನಡೆಯುತ್ತಿರುವುದು ಇಲ್ಲಿಯೇ ಮತ್ತು ಇದೇ ಕಾರಣಕ್ಕೆ. ಹೀಗಾಗಿ ಸಾಂಪ್ರದಾಯಿಕ ಮಾದರಿಯಲ್ಲಿಯೇ ಗಸ್ತು ನಡೆಸಲಾಗುತ್ತದೆ.
ಈ ವಿಚಾರ ತುಂಬಾ ಸೂಕ್ಷ್ಮವಾಗಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ವಿವರವನ್ನು ಈ ಸಂದರ್ಭದಲ್ಲಿ ನೀಡಲು ಸಾಧ್ಯವಿಲ್ಲ ಎಂದು ಕೂಡ ರಾಜನಾಥ್ ಸಿಂಗ್ ತಿಳಿಸಿದರು.
ಇದಕ್ಕೆ ರಾಜ್ಯಸಭೆಯಲ್ಲಿ ಸದಸ್ಯರು ಸಹಮತಿ ಸೂಚಿಸಿದರು. ಭಾರತೀಯ ಸೇನೆಗೆ ಪಕ್ಷಭೇದ ಮರೆತು ಬೆಂಬಲ ಸೂಚಿಸಿದ ಸದಸ್ಯರು ದೇಶಕ್ಕಾಗಿ ಸೈನಿಕರ ಪರವಾಗಿ ನಿಲ್ಲುತ್ತೇವೆ ಎಂದರು.












Click it and Unblock the Notifications