ಮೋದಿ ಪ್ರಧಾನಿಯಾಗಿರುವವರೆಗೂ ಕಂಪನಿಗಳಿಗೆ ರೈತರ ಜಮೀನು ಸಿಗುವುದಿಲ್ಲ: ಅಮಿತ್ ಶಾ
ನವದೆಹಲಿ, ಡಿಸೆಂಬರ್ 25: ನರೇಂದ್ರ ಮೋದಿ ಪ್ರಧಾನಿಯಾಗಿರುವವರೆಗೂ ಯಾವುದೇ ಕಂಪನಿಗಳಿಗೆ ರೈತರ ಜಮೀನನ್ನು ಕಸಿಯಲು ಬಿಡುವುದಿಲ್ಲ ಎಂದು ಅಮಿತ್ ಶಾ ಭರವಸೆಯ ಮಾತುಗಳನ್ನಾಡಿದ್ದಾರೆ.
ಕಿಸಾನ್ಗಢ ಗ್ರಾಮದ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಹೊಸ ಕೃಷಿ ಕಾಯ್ದೆಗಳು ಜಾರಿಯಾದರೂ ಕೂಡ ಬೆಂಬಲ ಬೆಲೆ ಮುಂದುವರೆಯಲಿದೆ. ಮಂಡಿಗಳು ಕೂಡ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದರು.
ರೈತರ ಖಾತೆಗೆ 18000 ಕೋಟಿ ರೂ ನೇರ ಜಮಾ; ಮೋದಿ
ಬೆಂಬಲ ಬೆಲೆ ಸೇರಿದಂತೆ ನೂತನ ಕಾಯ್ದೆಗಳಲ್ಲಿ ಅಡಿಗಿರುವ ಅಂಶಗಳ ಬಗ್ಗೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ. ರೈತರ ಅಭಿವೃದ್ಧಿಯೇ ಮೋದಿ ನೇತೃತ್ವದ ಸರ್ಕಾರ ಪ್ರಮುಖ ಆದ್ಯತೆಯಾಗಿರಲಿದೆ.
ಹೊಸ ಕೃಷಿ ಕಾಯ್ದೆಗಳು ರೈತರ ಹಿತವನ್ನು ಕಾಪಾಡುವುದಿಲ್ಲ, ಅವುಗಳು ರೈತ ವಿರೋಧಿ ಎಂಬ ಸಂದೇಹಗಳು ಇದ್ದರೆ ಅವರ ನಿವಾರಣೆಗಾಗಿ ರೈತರ ಜತೆ ತೆರೆದ ಮನಸ್ಸಿನಿಂದ ಕೂರಲು ಸರ್ಕಾರ ಸಿದ್ಧವಿದೆ.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತ ಕುಟುಂಬಗಳಿಗೆ ಹಣಕಾಸು ನೆರವು ನೀಡಿ, ರೈತ ಕುಟುಂಬಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನಡೆಸಿರುವ ಸಂವಾದವನ್ನು ಅಮಿತ್ ಶಾ ವೀಕ್ಷಿಸಿದ್ದಾರೆ.
ಶುಕ್ರವಾರ, ಡಿ.25ರಂದು 18,000 ಕೋಟಿ ರೂ ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗಿದೆ. ಯಾವುದೇ ಮಧ್ಯವರ್ತಿ, ಕಮಿಷನ್ ಇಲ್ಲದೇ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಂಗಾಳದ ರೈತರು ಈ ಯೋಜನೆಯಿಂದ ವಂಚಿತವಾಗಿದ್ದಾರೆ. ರೈತರಿಗೆ ಈ ಕೇಂದ್ರದ ಯೋಜನೆಗಳನ್ನು ತಲುಪಿಸದ ಏಕೈಕ ರಾಜ್ಯವೆಂದರೆ ಬಂಗಾಳ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಮತಾ ಬ್ಯಾನರ್ಜಿ ಸಿದ್ಧಾಂತಗಳು ಬಂಗಾಳವನ್ನು ನಾಶಪಡಿಸುತ್ತಿವೆ. ರೈತರ ಕುರಿತ ಆಕೆಯ ಕ್ರಮಗಳು ನನ್ನನ್ನು ನೋಯಿಸಿವೆ ಎಂದರು.