ಭಾನುವಾರ ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಕಡಿತ, ಯಾರಿಗೆಲ್ಲ ತೊಂದರೆ
ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರಿನಾದ್ಯಂತ ವಿಸ್ತರಣೆ ಆಗುತ್ತಿದೆ. ಹಾಲಿ ನೆಟ್ವರ್ಕ್ನಲ್ಲಿ ವಿವಿಧ ಕಾರಣಗಳಿಗೆ ಆಗಾಗ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ನಾಳೆ ಭಾನುವಾರ (ಮೇ 17) ಕಾಮಗಾರಿ ನಡೆಸುವ ಪ್ರಯುಕ್ತ ನೇರಳೆ ಮಾರ್ಗದಲ್ಲಿ (Namma Metro Purple Line) ಎರಡು ಗಂಟೆಗಳ ಕಾಲ ಮೆಟ್ರೋ ಸೇವೆಯಲ್ಲಿ (Metro Service Disruption) ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ರೈಲು (Bengaluru Metro) ನಿಗಮದ ವತಿಯಿಂದ ಭಾನುವಾರ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ನಡುವಿನ ನೇರಳೆ ಮಾರ್ಗದಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತದೆ. ಈ ಸಂಬಂಧ ಸಂಚಾರ ಸೇವೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ಈ ನಿಲ್ದಾಣಗಳ ಮಧ್ಯ ಸಂಚಾರ ಬಂದ್
ತುರ್ತು ನಿರ್ವಹಣಾ ಕಾಮಗಾರಿಗಾಗಿ ನೇರಳೆ ಮಾರ್ಗದಲ್ಲಿನ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ-ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಾಲ್ಕು ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ 2 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಸಂಚಾರ ಇರುವುದಿಲ್ಲ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರಿಗೆ ಸಂಚಾರ ಅಡಚರಣೆ ಎದುರಾಗಲಿದೆ. ಬದಲಾವಣೆ ನೋಡಿಕೊಂಡು ಪ್ರಯಾಣಿಕರು ಪ್ರಯಾಣ ಯೋಜಿಸುವಂತೆ ತಿಳಿಸಲಾಗಿದೆ.
ಈ ಅವಧಿಯಲ್ಲಿ ಮೆಟ್ರೋ ರೈಲು ಸೇವೆಗಳು ಸಂಬಂಧಿತ ಟರ್ಮಿನಲ್ ನಿಲ್ದಾಣಗಳಿಂದ ಪ್ರತಿ ಭಾನುವಾರದ ವೇಳಾಪಟ್ಟಿಯಂತೆ ಬೆಳಗ್ಗೆ 7 ಗಂಟೆಗೆ ನಿಯಮಿತ ವೇಳಾಪಟ್ಟಿಯಂತೆ ಪ್ರಾರಂಭವಾಗಿ, ಕೆಳಕಂಡ ಮಾರ್ಗಗಳಲ್ಲಿ ಎಂದಿನ ಸಂಚರಿಸಲಿವೆ.
ಇಲ್ಲಿಂದ ಇಲ್ಲಿಗೆ ಸುಗಮ ಸಂಚಾರ, ಗಮನಿಸಿ
* ಚಲ್ಲಘಟ್ಟ - ವಿಜಯನಗರವರೆಗೆ ಸಂಚಾರ ಎಂದಿನಂತೆ ಇರಲಿದೆ.
* ಎಂ.ಜಿ. ರಸ್ತೆ -ವೈಟ್ಫೀಲ್ಡ್ (ಕಾಡುಗೋಡಿ) ವರೆಗೆ ಸೇವೆ ಲಭ್ಯವಿದೆ.
* ಆರ್.ವಿ. ರಸ್ತೆ - ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಸೇವೆ ಇರಲಿದೆ.
* ಹಸಿರು ಮಾರ್ಗದಲ್ಲಿ ಸಂಚಾರ ಇರಲಿದೆ.
ಬೆಳಗ್ಗೆ 9ರ ಬಳಿಕ ಪೂರ್ಣ ಮಾರ್ಗದಲ್ಲಿ ಮೆಟ್ರೋ ಓಡಾಟ
ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಬೆಳಗ್ಗೆ 9 ಗಂಟೆಯ ನಂತರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ - ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಪುನಃ ಆರಂಭಗೊಳ್ಳಲಿವೆ ಎಂದು ಮೆಟ್ರೋ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 10ರಂದು ನಿಗದಿಯಾಗಿದ್ದ ಕಾಮಗಾರಿ
ಕಳೆದ ವಾರ ಮೇ 10ರಂದು (ಭಾನುವಾರ) ಈ ಕಾಮಗಾರಿ ನಡೆಸಲು ಮತ್ತು ಇದೇ ನೇರಳೆ ಮಾರ್ಗದ ನಿಲ್ದಾಣಗಳ ಮಧ್ಯೆ ಸೇವೆ ಕಡಿತಕ್ಕೆ ಬಿಎಂಆರ್ಸಿಎಲ್ ತೀರ್ಮಾನಿಸಿತ್ತು. ಆದರೆ ಅಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದರು. ಎಚ್ಎಎಲ್ ಆವರಣದಲ್ಲಿ ಅವರಿಗಾಗಿ ಬಿಜೆಪಿಯಿಂದ ಬೃಹತ್ ಅಭಿನಂದನೆ ಸಮಾರಂಭ ಇತ್ತು. ಜೊತೆಗೆ ಇನ್ನಿತರ ಕಾರಣಗಳಿಂದ ಜನರ ಹೆಚ್ಚಿನ ಓಡಾಟ ಇತ್ತು. ಹೀಗಾಗಿ ಅಂದು ಸಂಚಾರ ಕಡಿತ ನಿರ್ಧಾರ ಹಿಂಪಡೆದು ಭಾನುವಾರ ಎಂದಿನಿಂತೆ ಸೇವೆ ನೀಡಲಾಗಿತ್ತು, ಅಂದು ಬೆಳಗ್ಗೆ 7 ಗಂಟೆಗೆ ಬದಲಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಬೇಗ ಬೆಳಗ್ಗೆ 5ಗಂಟೆಯಿಂದಲೇ ನಾಲ್ಕು ಟರ್ಮಿನಲ್ಗಳಿಂದ ಮೆಟ್ರೋ ಸೇವೆ ಆರಂಭಿಸಲಾಗಿತ್ತು.














Click it and Unblock the Notifications